ಕಾಂಗ್ರೆಸ್ಸಿಗರೇ ಭಾರತರತ್ನ ಪ್ರಶಸ್ತಿ ನಿಮ್ಮ ತಾತನ ಆಸ್ತಿಯಲ್ಲ
ಮುಂಬೈ, ನ.13: ಸುವಿಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಭಾರತ ರತ್ನ ಬಿರುದು ನಿಮ್ಮ ತಾತನ ಆಸ್ತಿ ಅಲ್ಲ ಎಂದು ಕಾಂಗ್ರೆಸ್ಗೆ ವಿರುದ್ಧ ಶಿವಸೇನಾ ಕಿಡಿಕಾರಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಲತಾ ಮಂಗೇಶ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಂಬೈನ ಕಾಂಗ್ರೆಸ್ ನಾಯಕ ಜನಾರ್ದನ ಚಂದೂರ್ಕರ್ ಅವರಂತೂ 'ಮೋದಿ ಪ್ರಧಾನಿಯಾಗಲಿ ಎಂದು ಹೇಳಿ ಲತಾ ದೀದಿ ಭೇದ ಎಸಗಿದ್ದಾರೆ. ಆದ್ದರಿಂದ ಅವರು ತಮಗೆ ಬಂದಿರುವಂತಹ ಭಾರತ ರತ್ನ ಪ್ರಶಸ್ತಿಯನ್ನು ಹಿಂದುರುಗಿಸಬೇಕು. ಇಲ್ಲವಾದಲ್ಲಿ ಸರ್ಕಾರವೇ ಅದನ್ನು ವಾಪಸ್ ಪಡೆಯಬೇಕು' ಎಂದು ಒತ್ತಾಯಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಶಿವಸೇನೆ 'ಭಾರತ ರತ್ನಾ ಪ್ರಶಸ್ತಿ ನಿಮ್ಮ ತಾತನ ಆಸ್ತಿ ಅಲ್ಲ. ಬೇಕಾದಾಗ ಕೊಡುವುದಕ್ಕೆ/ಹಿಂಪಡೆಯುವುದಕ್ಕೆ ಎಂದಿದೆ.
'ಭಾರತ ರತ್ನ ಪ್ರಶಸ್ತಿಗೆ ತನ್ನದೇ ಆದ ಗೌರವವಿದೆ. ವಿವಿಧ ಕ್ಷೇತ್ರಗಳಲ್ಲಿ ಮಹತ್ಸಾಧನೆ ಮಾಡಿದವರಿಗೆ ಇಂತಹ ಪ್ರಶಸ್ತಿ ನೀಡಲಾಗುತ್ತದೆ. ಲತಾ ಮಂಗೇಶ್ಕರ್ ತಮ್ಮ ಸುಮಧುರ ಕಂಠದಿಂದ ಇಡೀ ದೇಶದ ಜನರ ಪ್ರೀತಿವಿಶ್ವಾಸ ಗಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರ ಅಪಾರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರ ಭಾರತ ರತ್ನ ಬಿರುದು ನೀಡಿದೆ. ಇದನ್ನು ವಾಪಸ್ ನೀಡಿ ಎಂದು ಹೇಳಲು, ಇದು ಚಂದೂರ್ಕರ್ ಅವರ ತಾತನ ಆಸ್ತಿ ಅಲ್ಲ' ಎಂದು ಶಿವ ಸೇನೆ ನಾಯಕ ಎಂಪಿ ಸಂಜಯ್ ರಾಟ್ ಕಿಡಿಕಾರಿದ್ದಾರೆ.

ಲತಾ ಕಂಠ ತಿರುಚುವ ದುಸ್ಸಾಹಸ
ತಮ್ಮ ಅಮರ ಕಂಠದಿಂದ ಮೋದಿಯನ್ನು ಹಾಡಿಪೊಗಳಿದ್ದ ಲತಾರ ಸಿರಿಕಂಠವನ್ನು ಹಿಚುಕುವ ದುಸ್ಸಾಹಸಕ್ಕೆ 'ಕೈ'ಹಾಕಲಾಗಿದೆ. 10 ದಿನಗಳ ಹಿಂದೆ ಲತಾ ದೀದಿ 'ನನಗೂ ಮೋದಿಯೇ ಪ್ರಧಾನಿ ಆಗ್ಬೇಕಂತ ಮನದಾಳದಲ್ಲಿ ಆಸೆಯಿದೆ' ಎಂದಿದ್ದರು. ಅದು ಕಾಂಗ್ರೆಸ್ ನಾಯಕರಿಗೆ ಕರ್ಣಕಠೋರವಾಗಿ ಕೇಳಿಬಂದಿದೆ.
ಆದ್ದರಿಂದ ಲತಾಜೀ ವಾಸಿಸುವ ಮುಂಬೈನ ಕಾಂಗ್ರೆಸ್ ನಾಯಕರೊಬ್ಬರು (ಚಿತ್ರದಲ್ಲಿ ಬಲ ಬದಿಯಲ್ಲಿ) 'ಯಾರಲ್ಲಿ? ಮೋದಿಯನ್ನು ಬೆಂಬಲಿಸಿದ ಲತಾ ಮಂಗೇಷ್ಕರ್ ಗೆ ನೀಡಿರುವ ಪರಮೋಚ್ಛ 'ಭಾರತ ರತ್ನ' ಪ್ರಶಸ್ತಿಯನ್ನು ಕಿತ್ಕೊಳ್ಳಿ' ಎಂದು ಫರ್ಮಾನು ಹೊರಡಿಸಿದ್ದಾರೆ.

ಅಕ್ಷಮ್ಯ; ಲತಾ ಪ್ರಶಸ್ತಿ ವಾಪಸ್ ಪಡೆಯಬೇಕು
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ಚಂದೂರ್ಕರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಲತಾ ಮಂಗೇಷ್ಕರ್ ಗೆ ನೀಡಿರುವ 'ಭಾರತ ರತ್ನ'ವನ್ನು ವಾಪಸ್ ಪಡೆಯಬೇಕು. ಏಕೆಂದರೆ ಅವರು ಹೋಗಿ ಹೋಗಿ ನಮ್ಮ ವಿರೋಧಿ ಪಾಳಯದ ಮೋದಿಯ ಗುಣಗಾನ ಮಾಡುತ್ತಾ, ಆತ ದೇಶದ ಪ್ರಧಾನಿಯೂ ಆಗಲಿ' ಎಂದು ಹಾರೈಸಿದ್ದಾರೆ. ಇದು ಅಕ್ಷಮ್ಯ. ತಕ್ಷಣ ಆಕೆಗೆ ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ನಮ್ಮದೇ ಪಕ್ಷದ ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಪ್ರಥಮ ಪ್ರಧಾನಿಯ ಕಣ್ಣಲ್ಲಿ ನೀರು ತರಿಸಿದ್ದ ಲತಾ
ಇಡೀ ಜಗತ್ತನ್ನೇ ತಮ್ಮ ಸುಶ್ರಾವ್ಯ ಕಂಠದಿಂದ ಮಂತ್ರಮುಗ್ಧಗೊಳಿಸಿರುವ 84 ವರ್ಷದ ಲತಾ ಮಂಗೇಷ್ಕರ್ ಅವರಿಗೆ 2001ರಲ್ಲಿ 'ಭಾರತ ರತ್ನ' ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಂದಹಾಗೆ, ಲತಾಜೀಗೆ ಆ ಪ್ರಶಸ್ತಿ ಸಂದಾಗ ಕೇಂದ್ರದಲ್ಲಿದ್ದುದ್ದು ಬಿಜೆಪಿ ಸರಕಾರ. 'ಏ ಮೇರೆ ವತನ್ ಕೆ ಲೋಗೋ' ಎಂದು ಹಾಡಿ ದೇಶದ ಪ್ರಥಮ ಪ್ರಧಾನಿಯ ಕಣ್ಣಲ್ಲಿ ನೀರು ತರಿಸಿದ್ದ ಲತಾ ಮಂಗೇಷ್ಕರ್ ಅವರಿಗೆ ಅವರದೇ ಪಕ್ಷದ ನಾಯಕರೊಬ್ಬರು ತೋರಿರುವ ಗೌರವ ಇದು!

ಕಾಂಗ್ರೆಸ್ಸಿನ ರಾಜಕೀಯ ದ್ವಂದ್ವಗಳಿಗೆ ಮುಕ್ತಿ ಯಾವಾಗ?
ಮುಂಬೈ ಕಾಂಗ್ರೆಸ್ಸಿನ ಜನಾರ್ದನ ಚಂದೂರ್ಕರ್ ಅವರ ಆಗ್ರಹವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅನುಮೋದಿಸುತ್ತಾರಾ? ಇದೇ ಕಾಂಗ್ರೆಸ್ ಪಕ್ಷ ಮುಂಬೈನ ಮತ್ತೊಬ್ಬ ಕಲಿ ತೆಂಡೂಲ್ಕರ್ ಅವರನ್ನು ಚುನಾವಣಾ ಪ್ರಚಾರಕ್ಕೆ ಆಮಂತ್ರಿಸಿದ್ದು ಏಕೆ? ಕಾಂಗ್ರೆಸ್ಸಿನ ಈ ರಾಜಕೀಯ ದ್ವಂದ್ವಗಳಿಗೆ ಮುಕ್ತಿ ಯಾವಾಗ? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಮಿತ್ರಾ ಎಂಬ ಅರಿವುಗೇಡಿ ಬಿಜೆಪಿ ಸಂಸದ
ಕಳೆದ ಜುಲೈನಲ್ಲಿ ಚಂದನ್ ಮಿತ್ರಾ ಎಂಬ ಅರಿವುಗೇಡಿ ಬಿಜೆಪಿ ಸಂಸದ ಮೋದಿ ಮುಂದಿನ ಪ್ರಧಾನಿಯಾಗುವುದನ್ನು ತಾನು ಒಪ್ಪುವುದಿಲ್ಲ ಎಂದು ಅಮರ್ತ್ಯಾ ಸೇನ್ ಅವರು ಹೇಳಿದ್ದಕ್ಕೆ ಅವರಿಗೆ ನೀಡಿರುವ ಭಾರತ ರತ್ನವನ್ನು ಕಿತ್ಕೊಳ್ಳಿ (ಪುಣ್ಯ! ನೊಬೆಲ್ ಪ್ರಶಸ್ತಿಯನ್ನು ಕಿತ್ಕೊಳ್ಳಿ ಎಂದು ಹೇಳಲಿಲ್ಲ) ಎಂದು ಆಗ್ರಹಿಸಿದ್ದರು.
ಇದಕ್ಕೆ ಅಂದೇ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ 'ಭಾರತ ರತ್ನ ಎಂಬುದೇನೂ 7 ವರ್ಷ ಗ್ಯಾರಂಟಿ ಇರುವ ಸರಕಲ್ಲ' ಎಂದು ಹೇಳಿತ್ತು.












Click it and Unblock the Notifications