ಮುಜಾಫರ್ನಗರದಲ್ಲಿ ಮತ್ತೆ ಗುಂಪು ಘರ್ಷಣೆ
ಮುಜಾಫರ್ನಗರ್, ಆ. 30: ಒಂದೇ ಸಮುದಾಯದ ನಾಲ್ಕು ಜನ ವಿದ್ಯಾರ್ಥಿಗಳನ್ನು ಥಳಿಸಿದ ಪ್ರಕಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮುಜಾಫರ್ನಗರ್ದ ಜೆಟ್ ಕಾಲೋನಿಯಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದ್ದು ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಟ್ಯುಶನ್ಗೆ ತೆರಳುತ್ತಿದ್ದ ನಾಲ್ವರು ಯುವಕರು ಬೇರೆ ಸಮುದಾಯದ ಯುವತಿಯೊಬ್ಬಳನ್ನು ಚುಡಾಯಿಸಿದ್ದಾರೆ ಎಂದು ಆರೋಪಿಸಿ ಒಂದು ಗುಂಪಿನ ಜನ ಯುವಕರ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಯುವಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. (ಯುವತಿಯರಿಗೆ ಜೀನ್ಸ್, ಮೊಬೈಲ್ ನಿಷೇಧ)

ಇದಾದ ನಂತರ ಥಳಿತಕ್ಕೊಳಗಾದ ಯುವಕರ ಸಮುದಾಯದ ಜನ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಒತ್ತಡಕ್ಕೆ ಮಣಿದ ಪೊಲೀಸರು 150 ಜನರ ಮೇಲೆ ಶಾಂತಿ ಕದಡಿದ ಆರೋಪದಡಿ ದೂರು ದಾಖಲಿಸಿಕೊಂಡಿದ್ದಾರೆ.
ಕೆಲವು ಗುಂಪುಗಳು ಮೀನಾಕ್ಷಿ ಚೌಕದ ಬಳಿ ರಸ್ತೆ ತಡೆಗೆ ಯತ್ನಿಸಿತು. ಆದರೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸರವಣ ಕುಮಾರ್ ತಿಳಿಸಿದ್ದಾರೆ.
2013ರಲ್ಲಿ 62 ಜನ ಜೀವ ಕಳೆದುಕೊಂಡಿದ್ದರು
ಕಳೆದ 2013ರ ಸೆಪ್ಟೆಂಬರ್ನಲ್ಲಿ ಹಿಂದು-ಮುಸ್ಲಿಮರ ನಡುವೆ ಘರ್ಷಣೆ ನಡೆದು 62 ಜನ ಪ್ರಾಣ ಕಳೆದುಕೊಂಡಿದ್ದರು. ಘರ್ಷಣೆಯಲ್ಲಿ 42 ಜನ ಮುಸ್ಲಿಮರು, 20 ಜನ ಹಿಂದುಗಳು ಸಾವನ್ನಪ್ಪಿದ್ದರು. 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಉತ್ತರ ಪ್ರದೇಶ ಸರ್ಕಾರ ಮತ್ತು ಅಂದಿನ ಯುಪಿಎ ಸರ್ಕಾರದ ಮೇಲೆ ವೈಫಲ್ಯದ ಆರೋಪಗಳು ಕೇಳಿ ಬಂದಿದ್ದವು.












Click it and Unblock the Notifications