ಮೊರ್ಬಿ ಸೇತುವೆ ಕುಸಿತ ದೇವರ ಕೃತ್ಯ: ಒರೆವಾ ಮ್ಯಾನೇಜರ್
ಅಹಮದಾಬಾದ್, ನ. 02: 135 ಜನರ ಸಾವಿಗೆ ಕಾರಣವಾದ ಮೊರ್ಬಿ ಸೇತುವೆ ಕುಸಿತದ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಒರೆವಾ ಗ್ರೂಪ್ ಮ್ಯಾನೇಜರ್ ಒಬ್ಬರು ಈ ದುರಂತವನ್ನು "ದೇವರ ಕೃತ್ಯ" ಎಂದು ಹೇಳಿದ್ದಾರೆ.
ಸೇತುವೆ ಕುಸಿತದ ದುರಂತದ ಆರೋಪಿಯ ಪರ ವಕೀಲರೊಬ್ಬರು ನ್ಯಾಯಾಲಯದಲ್ಲಿ ಇದು ದೇವರ ಕೃತ್ಯ ಹೀಗಾಗಿ ಆರೋಪಿಗಳ ಬಂಧನ ಸರಿಯಲ್ಲ ಎಂದು ವಾದಿಸಿದ್ದಾರೆ. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಎಚ್. ಎಸ್. ಪಾಂಚಾಲ್, "ಒರೆವಾ ಕಂಪನಿಯ ಇಬ್ಬರು ಮ್ಯಾನೇಜರ್ಗಳಲ್ಲಿ ಬಂಧಿತ ಮ್ಯಾನೇಜರ್ ಒಬ್ಬರು ಇದು 'ದೇವರ ಕೃತ್ಯ' ಎಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೊರ್ಬಿ ದುರಂತ ಆಕಸ್ಮಿಕವಲ್ಲ, ಘೋರ ಕೊಲೆ ಎಂದ ಎಎಪಿ
''ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ತನಿಖಾಧಿಕಾರಿ (ಐಒ) ಸೇತುವೆಯ ಕೇಬಲ್ಗಳು ತುಕ್ಕು ಹಿಡಿಯುತ್ತಿದೆ ಎಂದು ಹೇಳಿದ್ದಾರೆ. ಸೇತುವೆಯ ಓಡಾಡುವ ಜಾಗವನ್ನು ಮಾತ್ರ ಸರಿ ಮಾಡಲಾಗಿದೆ. ಕೇಬಲ್ಗಳನ್ನು ಬದಲಾಯಿಸುವುದು ಮತ್ತು ಎಣ್ಣೆ ಹಚ್ಚುವುದನ್ನು ಸಹ ಮಾಡಲಾಗಿಲ್ಲ ಎಂದು ತನಿಖಾಧಿಕಾರಿ ಹೇಳುತ್ತಾರೆ" ಎಂದು ವಕೀಲ ಎಚ್. ಎಸ್. ಪಾಂಚಾಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೊರ್ಬಿ ಸೇತುವೆಯ ಕೇಬಲ್ ತಂತಿಗಳು ತುಕ್ಕು ಹಿಡಿಯುತ್ತಿವೆ ಮತ್ತು ಜನರು ಪ್ರಯಾಣಿಸಲು ಸೂಕ್ತ ಸ್ಥಿತಿಯಲ್ಲಿಲ್ಲ ಎಂಬುದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ.
ಮೊರ್ಬಿ ಸೇತುವೆ ಕುಸಿತ ದೇವರ ಕೃತ್ಯ ಎಂದ ಕಂಪನಿ
"ಸೇತುವೆ ದುರಂತ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾದ 9 ಜನರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ವ್ಯವಸ್ಥಾಪಕರು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾದ ಇತರ ಐವರು ಭದ್ರತಾ ಸಿಬ್ಬಂದಿ ಮತ್ತು ಟಿಕೆಟ್ ಮಾರಾಟಗಾರರು ಇದ್ದಾರೆ" ಎಂದು ಎಚ್ಎಸ್ ಪಾಂಚಾಲ್ ಹೇಳಿದ್ದಾರೆ.
"ವರದಿಯಲ್ಲಿ, ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಮತ್ತು ಗುತ್ತಿಗೆಯನ್ನು ನೇರವಾಗಿ ಹಂಚಿಕೆ ಮಾಡಲಾಗಿದೆ ಎಂದು ತನಿಖಾಧಿಕಾರಿ (ಐಒ) ತಿಳಿಸಿದ್ದಾರೆ'' ಎಂಬುದನ್ನು ವಕೀಲ ಪಾಂಚಾಲ್ ಸೇರಿಸಿದ್ದಾರೆ.
ಸೇತುವೆ ಕೆಲಸದ ಅನುಭವವಿಲ್ಲದ ಕಂಪನಿಗೆ ಗುತ್ತಿದೆ
ಟೆಂಡರ್ ಕರೆಯದೇ ಒರೆವಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿವೆ. ಸೇತುವೆ ದುರಸ್ತಿ ಮಾಡಿರುವ ಒರೆವಾ ಕಂಪನಿಯ ಗುತ್ತಿಗೆದಾರರು 'ಅರ್ಹ ಎಂಜಿನಿಯರ್' ಗಳಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಗಡಿಯಾರ ತಯಾರಿಸುವ ಕಂಪನಿಯೊಂದಿಗೆ ಕೆಲಸ ಮಾಡುತ್ತಾರೆ. ಅವರಿಗೆ ಸೇತುವೆಯ ದುರಸ್ತಿ ಕೆಲಸದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಆಮ್ ಆದ್ಮಿ ಪಾರ್ಟಿ ನಾಯಕ ಮನೀಶ್ ಸಿಸೋಡಿಯಾ ಕೂಡ, "ಯಾವುದೇ ಸೇತುವೆಗಳನ್ನು ನಿರ್ಮಿಸುವ ಅಥವಾ ಪುನಃ ನಿರ್ಮಾಣ ಮಾಡುವಲ್ಲಿ ಯಾವುದೇ ಪೂರ್ವ ಅನುಭವವನ್ನು ಹೊಂದಿರದ ವಾಚ್ ತಯಾರಿಸುವ ಕಂಪನಿಗೆ ಮೊರ್ಬಿ ಸೇತುವೆಯ ಪುನನಿರ್ಮಾಣದ ಗುತ್ತಿಗೆಯನ್ನು ಏಕೆ ನೀಡಲಾಗಿದೆ? ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು" ಎಂದಿದ್ದಾರೆ.
8 ತಿಂಗಳ ಕೆಲಸ 5 ತಿಂಗಳಲ್ಲಿ ಪೂರ್ಣ
ಪೊಲೀಸ್ ಕಸ್ಟಡಿಯಲ್ಲಿರುವ ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯ ವ್ಯವಸ್ಥಾಪಕರು. ಒರೆವಾ ಇತ್ತೀಚೆಗೆ ಸೇತುವೆಯನ್ನು ನವೀಕರಿಸಿದ್ದರೂ ಗುಣಮಟ್ಟದ ವರದಿಯನ್ನು ಸಲ್ಲಿಸಿಲ್ಲ. ಫಿಟ್ನೆಸ್ ಪ್ರಮಾಣಪತ್ರ ಪಡೆಯದೆ ಸಾರ್ವಜನಿಕ ಬಳಕೆಗೆ ನೀಡಿದೆ.
8 ತಿಂಗಳ ಅವಧಿಯ ಯೋಜನೆಯನ್ನು 5 ತಿಂಗಳಿಗೆ ಮುಗಿಸಿ, 8 ತಿಂಗಳ ಅವಧಿಯ ಯೋಜನೆಯನ್ನು ಒಪ್ಪಲಾಗದಷ್ಟು ಕಳಪೆ ರೀತಿಯಲ್ಲಿ ಪೂರ್ಣಗೊಳಿಸಿ, ಕಳಪೆ ಗುಣಮಟ್ಟದ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ನೀಡಿದ ಆರೋಪ ಒರೆವಾ ಮೇಲಿದೆ.
50 ಮಕ್ಕಳು ಹಾಗೂ 40 ಮಹಿಳೆಯರು ನೀರುಪಾಲು
ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ಭಾನುವಾರ ತೂಗು ಸೇತುವೆ ಕುಸಿದು ಕನಿಷ್ಠ 135 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 50 ಮಕ್ಕಳು ಹಾಗೂ 40 ಮಹಿಳೆಯರು ಸೇರಿದ್ದಾರೆ..
ಮೊರ್ಬಿ ಸೇತುವೆ ಕುಸಿತದ ನಂತರ, ಪ್ರಕರಣದಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ. ನ್ಯಾಯಾಲಯ ಬುಧವಾರ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ಮತ್ತು ಉಳಿದ ಐವರನ್ನು ನವೆಂಬರ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಮೊರ್ಬಿಯಲ್ಲಿ ಬುಧವಾರ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ.
ಸೇತುವೆ ಕುಸಿತದ ಘಟನೆಯ ತನಿಖೆಗಾಗಿ ಗುಜರಾತ್ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ.