ಮೊರ್ಬಿ ದುರಂತ: ಇಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ನವದೆಹಲಿ, ನವೆಂಬರ್ 21: ಗುಜರಾತ್ನ ಮೊರ್ಬಿ ಸೇತುವೆ ಕುಸಿತದ ಘಟನೆಯ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಸುಪ್ರೀಂಕೋರ್ಟ್ಗೆ ವಕೀಲ ವಿಶಾಲ್ ತಿವಾರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ವಿಚಾರಣೆ ನಡೆಸಲಿದೆ. ಈ ಘಟನೆಯು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮೊರ್ಬಿ ದುರಂತ: 'ಈ ನಿರ್ಲಕ್ಷ್ಯವೂ ದೇವರ ಕೃತ್ಯವೇ?' ಮೋದಿಗೆ ಖರ್ಗೆ ಪ್ರಶ್ನೆ
ವಕೀಲ ವಿಶಾಲ್ ತಿವಾರಿ ಕಳೆದ ನವೆಂಬರ್ 1ರಂದು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದರು. ಸುಪ್ರೀಂಕೋರ್ಟ್ ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ಹೇಳಿತ್ತು.
ಅಕ್ಟೋಬರ್ 30ರಂದು ಗುಜರಾತ್ನ ಮೊರ್ಬಿ ನಗರದಲ್ಲಿ ಮಚ್ಚು ನದಿಗೆ ಕಟ್ಟಲಾದ ಬ್ರಿಟಿಷರ ಕಾಲದ ಕೇಬಲ್ ಸೇತುವೆ ಕುಸಿದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 134ಕ್ಕೂ ಜನರು ಸಾವನ್ನಪ್ಪಿದ್ದರು.
ವಕೀಲ ವಿಶಾಲ್ ತಿವಾರಿ ಅವರು ತಮ್ಮ ಅರ್ಜಿಯಲ್ಲಿ, "ಕಳೆದ ಒಂದು ದಶಕದಿಂದ ನಮ್ಮ ದೇಶದಲ್ಲಿ ಹಲವಾರು ಘಟನೆಗಳು ನಡೆದಿವೆ, ದುರುಪಯೋಗ, ಕರ್ತವ್ಯ ಲೋಪ ಮತ್ತು ನಿರ್ವಹಣೆಯ ನಿರ್ಲಕ್ಷ್ಯದಿಂದ ಅಪಾರ ಪ್ರಮಾಣದ ಜೀವಹಾನಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ಅಧಿಕಾರಿಗಳು ತಪ್ಪಿಸಬಹುದಿತ್ತು" ಎಂದು ಹೇಳಿದ್ದಾರೆ.