ಮುಂಗಾರು ಮಳೆರಾಯ ಸಮಯಕ್ಕೆ ಬಾರದೆ ಕೈಕೊಟ್ಟವ್ನೆ
ಬೆಂಗಳೂರು, ಮೇ. 30 : ಕೇರಳದಲ್ಲಿ ರೈತಾಪಿ ಜನರು ನೇಗಿಲು ಹೆಗಲಿಗೆ ಹಾಕಿಕೊಂಡು, ಜನರು ಛತ್ರಿ ಕೈಯಲ್ಲಿ ಹಿಡಿದುಕೊಂಡು ರೆಡಿಯಾಗಿ ನಿಂತಿದ್ದಾರೆ. ಆದರೆ, ವರಪೂಜೆಗೆ ತಡವಾಗಿ ಬರುವ ಮದುಮಗನಂತೆ ಮಳೆರಾಯ ಈ ಬಾರಿ ಕೊಂಚ ತಡಮಾಡಿದ್ದಾನೆ.
ವಾಡಿಕೆಯಂತೆ ಈ ವರ್ಷ ಜೂನ್ 1ರಂದು ವಾಯವ್ಯ ದಿಕ್ಕಿನಿಂದ ಮುಂಗಾರು ಕೇರಳವನ್ನು ಪ್ರವೇಶಿಸುತ್ತಿಲ್ಲ. ಬದಲಾಗಿ ಇನ್ನೂ ಮೂರು ಅಥವಾ ನಾಲ್ಕು ದಿನ ತಡವಾಗಿ ತನ್ನ ವ್ಯಾಪಾರವನ್ನು ಶುರುಮಾಡುತ್ತಿದ್ದಾನೆ. ಕರ್ನಾಟಕದಲ್ಲಿ ಕೆಲ ದಿನಗಳ ನಂತರ ಪ್ರವೇಶಿಸಲಿದೆ. ವ್ಯಾಪಾರ ಈ ವರ್ಷ ಹೇಗಿರುತ್ತೋ ಏನೋ?
ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಬಿ.ಪಿ. ಯಾದವ್ ಅವರ ಪ್ರಕಾರ, ಆಗಸಾದ್ಯಂತ ಮೋಡಗಳು ಕವಿದಿದ್ದರೂ, ಮಿಂಚು ತನ್ನ ಸಂಚಾರ ಆರಂಭಿಸಿದ್ದರೂ, ಅಲ್ಲಲ್ಲಿ ತುಂತುರು ಸುರಿಯುತ್ತಿದ್ದರೂ, ಅಧಿಕೃತವಾಗಿ ಮುಂಗಾರು ಆರಂಭವಾಗಲು ಇನ್ನೆರಡ್ಮೂರ್ನಾಲ್ಕು ದಿನಗಳು ಬೇಕು. [ಶುಕ್ರವಾರ ರಾಜ್ಯಾದ್ಯಂತ ಧಾರಾಕಾರ ಮಳೆ]
ಮುಂಗಾರು ಅರಬ್ಬಿ ಸಮುದ್ರವನ್ನು ಪ್ರವೇಶಿಸಿದೆ. ಮುಂಗಾರು ಅಧಿಕೃತವಾಗಿ ಭಾರತ ಪ್ರವೇಶಿಸಿದೆ ಎಂದು ಹೇಳಲು ಮಳೆಯ ಪ್ರಮಾಣ, ಗಾಳಿಯ ಸಾಮರ್ಥ್ಯ, ಆಳ ಅಗಲ ಮತ್ತು ಮೋಡಗಳ ಪ್ರಮಾಣ ಇಷ್ಟೇ ಇರಬೇಕು. ಆಗ ಮಾತ್ರ ಮುಂಗಾರು ಆರಂಭವಾಗಿದೆ ಎಂದು ಘೋಷಿಸಲು ಸಾಧ್ಯ ಎನ್ನುತ್ತಾರೆ ಯಾದವ್.
ಎರಡು ಮೂರು ದಿನ ಹಿಂದೆ ಮುಂದೆ ಆಗುವುದು ಸರ್ವೇಸಾಮಾನ್ಯ. ಆದರೆ, ಚಿಂತಿಸುವ ಸಂಗತಿಯೇನೆಂದರೆ, ಈ ಬಾರಿ ಸರಾಸರಿಯ ಶೇ.93ರಷ್ಟು ಮಾತ್ರ ಮಳೆಯಾಗಲಿದೆ. ಬೇರೆ ಖಾಸಗಿ ಹವಾಮಾನ ಸಂಸ್ಥೆಗಳು ಈ ಕುರಿತಂತೆ ವಿಭಿನ್ನವಾಗಿ ಹೇಳಿಕೆ ನೀಡುತ್ತವಾದರೂ ಭಾರತೀಯ ಹವಾಮಾನ ಇಲಾಖೆ ನೀಡುವ ವಿವರ ಹೆಚ್ಚು ನಿಖರವಾಗಿರುತ್ತದೆ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶದಲ್ಲಿ ಅವರು ಹೇಳಿದ್ದಾರೆ.
ಈ ನಡುವೆ, ಆಸ್ಟ್ರೇಲಿಯಾದ ಹವಾಮಾನ ತಜ್ಞರು, ಭಾರತಕ್ಕೆ ಎಲ್ ನಿನೋದ ದುಷ್ಪರಿಣಾಮ ತಟ್ಟಲಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಸಿದ್ದರೆ, ಅಮೆರಿಕಾದ ಹವಾಮಾನ ನಿಪುಣರು, ಎಲ್ ನಿನೋದಿಂದಾಗಿ ಮಳೆ ಕಡಿಮೆಯಾಗಿ ಅನೇಕ ಕಡೆಗಳಲ್ಲಿ ಬರ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಕೂಡ ಎಲ್ ನಿನೋ ಎಚ್ಚರಿಕೆ ನೀಡಲಾಗಿತ್ತು. ಆದರೆ, ವ್ಯತಿರಿಕ್ತವಾಗಿ ಎಲ್ ನಿನೋದ ಪರಿಣಾಮ ತಗ್ಗಿ ಭಾರತದಾದ್ಯಂತ ಉತ್ತಮ ರೀತಿಯ ಮಳೆಯಾಗಿತ್ತು. ಈ ಬಾರಿ ಕೂಡ ಹೀಗೇ ಆಗುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಎಂದು ಭಾರತೀಯ ಹವಾಮಾನ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.