ಅಕ್ರಮ ಹಣ ವರ್ಗಾವಣೆ; ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಚಾರ್ಜ್ ಶೀಟ್
ನವದೆಹಲಿ, ಅ. 13: ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸುವ ರಾಣಾ ಆಯ್ಯೂಬ್, ಚಾರಿಟಿ ಹೆಸರಿನಲ್ಲಿ ಕೊರೊನಾ ಪರಿಹಾರ ಸೇರಿದಂತೆ ಸಾಮಾಜಿಕ ಕಲ್ಯಾಣ ಕಾರ್ಯಗಳಿಗಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರ ಮೇಲೆ ಪ್ರಕರಣವಿದೆ.
ಮೊದಲ ಕೊರೊನಾ ಲಾಕ್ಡೌನ್ ಪ್ರಾರಂಭವಾದ ಒಂದು ತಿಂಗಳ ನಂತರ 2020 ರ ಏಪ್ರಿಲ್ನಲ್ಲಿ ರಾಣಾ ಅಯ್ಯೂಬ್ ಅವರು ಕ್ರೌಡ್ಫಂಡಿಂಗ್ ವೆಬ್ಸೈಟ್ ಕೆಟ್ಟೋ (Ketto) ನಲ್ಲಿ ಮೂರು ಅಭಿಯಾನಗಳನ್ನು ನಡೆಸಿದ್ದರು. ಈ ವೇಳೆ ಅಂದಾಜು 2.69 ಕೋಟಿ ರೂಪಾಯಿ ಸಂಗ್ರಹಿಸಿದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಗುಜರಾತ್ ಫೈಲ್ಸ್ ಬರೆದ ಪತ್ರಕರ್ತೆಗೂ ತಾಕಿತು ಬಿಸಿ; ಟ್ವಿಟ್ಟರ್ ಖಾತೆ ನಿರ್ಬಂಧ
ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ಅಥವಾ ಎಫ್ಸಿಆರ್ಎ ಪ್ರಾಧಿಕಾರದಲ್ಲಿ ನೋಂದಾಯಿಸದೆ ವಿದೇಶದಿಂದ ಹಣವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಈ ಕಾಯ್ದೆಯು ದೇಶದ ಹೊರಗಿನಿಂದ ಹರಿದುಬರುವ ದೇಣಿಗೆಗಳ ದುರುಪಯೋಗವನ್ನು ತಡೆಯುತ್ತದೆ.
ಸಮಾಜ ಕಲ್ಯಾಣ ಕಾರ್ಯಗಳಿಗೆ ಕಡಿಮೆ ಹಣ ಬಳಕೆ
ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಗಳನ್ನು ರಾಣಾ ಅಯೂಬ್ ಅವರ ತಂದೆ ಮತ್ತು ಸಹೋದರಿಯ ಬ್ಯಾಂಕ್ ಖಾತೆಗಳಿಗೆ ಹೋಗುವಂತೆ ಮಾಡಲಾಗಿದೆ. ನಂತರ ಅವರ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. 50 ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಸೃಷ್ಟಿಸಿ ನಂತರ 50 ಲಕ್ಷ ಹೊಸ ಖಾತೆಗೆ ಕಳುಹಿಸಲಾಗಿದೆ, ಸಮಾಜ ಕಲ್ಯಾಣ ಕಾರ್ಯಗಳಿಗೆ 29 ಲಕ್ಷ ರೂಪಾಯಿ ಮಾತ್ರ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಸ್ವಂತ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದು ಉದ್ದೇಶ; ಇಡಿ
ರಾಣಾ ಅಯ್ಯೂಬ್ ಈ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದರಿಂದ ಇದು 'ಕಳಂಕರಹಿತ' ಹಣ ಎಂದು ತೋರಿಸಲು ಪ್ರಯತ್ನಿಸಿದ್ದರು. ಆದರೆ ಇದು ನಿಶ್ಚಿತ ಠೇವಣಿಗಳನ್ನು ತೆರೆಯುವುದು ಮತ್ತು ತಮ್ಮ ಸ್ವಂತ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು ಎಂದು ಆರೋಪಿಸಿದೆ.
ರಾಣಾ ಅಯ್ಯೂಬ್ ಅವರು ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಿದರು. ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯಗಳಿಗಾಗಿ ಮತ್ತು ಕೊರೊನಾದಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ಈ ಸಾರ್ವಜನಿಕ ನಿಧಿ ತೆರೆದಿದ್ದರು.
|
ಅಕ್ರಮ ಹಣ ವರ್ಗಾವಣೆ ಆರೋಪ ತಳ್ಳಿ ಹಾಕಿದ ರಾಣಾ ಅಯ್ಯೂಬ್
ಈ ವರ್ಷದ ಫೆಬ್ರವರಿಯಲ್ಲಿ ರಾಣಾ ಅಯ್ಯುಬ್ ಅವರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ವೇಳೆ ಅವರು ಪಿಎಂ ಕೇರ್ಸ್ ಫಂಡ್ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಒಟ್ಟು 74.50 ಲಕ್ಷ ರೂಪಾಯಿಯನ್ನು ಠೇವಣಿ ಮಾಡಿರುವುದು ಕಂಡು ಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ಆಡಳಿತಾರೂಢ ಬಿಜೆಪಿಯ ತೀವ್ರ ಟೀಕಾಕಾರರಾದ ರಾಣಾ ಅಯ್ಯೂಬ್ ಅವರು ತಮ್ಮ ವಿರುದ್ಧದ ಮನಿ ಲಾಂಡರಿಂಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಇತ್ತೀಚಿನ ಇಡಿ ಕ್ರಮಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಪತ್ರಕರ್ತೆ ಅಯ್ಯೂಬ್ "ನನ್ನ ಪೆನ್ ಅನ್ನು ಎಂದಿಗೂ ಮೌನಗೊಳಿಸಲಾಗುವುದಿಲ್ಲ..." ಎಂದು ಹೇಳಿದ್ದಾರೆ.
ಯುಪಿಯ ಗಾಜಿಯಾಬಾದ್ನಲ್ಲಿ ರಾಣಾ ಆಯ್ಯೂಬ್ ವಿರುದ್ಧ ಕೇಸ್
"ನಾನು ಅಥವಾ ನನ್ನ 2 ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳು ಯಾವುದೇ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಿಲ್ಲ. ಏಕೆಂದರೆ ಎಲ್ಲಾ ದೇಣಿಗೆಗಳನ್ನು ಕೆಟ್ಟೋ ಬ್ಯಾಂಕ್ ಖಾತೆಯಲ್ಲಿ ಮೊದಲು ಸ್ವೀಕರಿಸಲಾಗಿದೆ. ವಿದೇಶಿ ದೇಣಿಗೆಗಳು ಪರಿಹಾರ ಅಭಿಯಾನದ ಮೊತ್ತವನ್ನು ಭಾರತೀಯ ಕರೆನ್ಸಿಯಲ್ಲಿ ಗೊತ್ತುಪಡಿಸಿದ ಖಾತೆಗಳಿಗೆ ಕಳುಹಿಸುತ್ತಾರೆ" ಎಂದಿದ್ದಾರೆ.
"ವಿದೇಶೀ ಕರೆನ್ಸಿಯಲ್ಲಿ ಪಡೆದ ಯಾವುದೇ ಹಣವನ್ನು ದಾನಿಗೆ ಹಿಂತಿರುಗಿಸಬೇಕು ಮತ್ತು ಕೇವಲ ದೇಶೀಯ ಕೊಡುಗೆಗಳೊಂದಿಗೆ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂಬುದು ಕ್ರೌಡ್ಫಂಡಿಂಗ್ ವೆಬ್ಸೈಟ್ ಕೆಟ್ಟೊಗೆ ನನ್ನ ಸೂಚನೆಗಳಾಗಿತ್ತು" ಎಂದು ರಾಣಾ ಅಯ್ಯುಬ್ ಹೇಳಿದ್ದಾರೆ.
ರಾಣಾ ಅಯ್ಯೂಬ್ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವು ಸೆಪ್ಟೆಂಬರ್ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿ ಅನ್ನು ಆಧರಿಸಿದೆ,."ಹಿಂದೂ ಐಟಿ ಸೆಲ್" ಎಂಬ ಎನ್ಜಿಒ ಸಂಸ್ಥಾಪಕ ಮತ್ತು ಗಾಜಿಯಾಬಾದ್ನ ಇಂದಿರಾಪುರಂ ನಿವಾಸಿ ವಿಕಾಸ್ ಸಾಂಕ್ರಿತ್ಯಾಯನ್ ಎಂಬುವವರು ದೂರು ಸಲ್ಲಿಸಿದ್ದರು.