ಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿ
Recommended Video
ನವದೆಹಲಿ, ಮೇ 31: ಕೇಂದ್ರದಲ್ಲಿ ಹೊಸದಾಗಿ ಹಂಚಿಕೆಯಾಗಿರುವ ಖಾತೆಯಲ್ಲಿ 'ಜಲಶಕ್ತಿ' ಸಚಿವಾಲಯವನ್ನು ಪರಿಚಯಿಸಲಾಗಿದೆ. ಸುರಕ್ಷಿತ ಕುಡಿಯುವ ನೀರು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಪೂರೈಸುವ ಹಿನ್ನೆಲೆಯಲ್ಲಿ ಇದು ಜಾರಿಗೆ ಬಂದಿದೆ. ಜೋಧ್ ಪುರ್ ನ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಗೆ ಜಲ್ ಶಕ್ತಿ ಸಚಿವಾಲಯದ ಹೊಣೆ ನೀಡಲಾಗಿದೆ.
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಜೀರ್ಣೋದ್ಧಾರ ಈ ಮೂರು ಸಚಿವಾಲಯವನ್ನು ಪುನರ್ ರಚನೆ ಮಾಡುವ ಮೂಲಕ ಜಲ್ ಶಕ್ತಿ ಸಚಿವಾಲಯ ಪರಿಚಯಿಸಲಾಗಿದೆ. ಈ ಹಿಂದಿನ ಸರಕಾರದಲ್ಲಿ ನಿತಿನ್ ಗಡ್ಕರಿ ಈ ಖಾತೆಗಳ ಜವಾಬ್ದಾರಿ ವಹಿಸಿದ್ದರು. ಕುಡಿಯುವ ನೀರು ಹಾಗೂ ಒಳಚರಂಡಿ ಸಚಿವಾಲಯ ಕೂಡ ಇದರಲ್ಲಿ ಒಳಗೊಂಡಿದೆ.
ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ಮಾತನಾಡಿದ್ದ ಮೋದಿ, ಒಂದು ವೇಳೆ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಜಲ್ ಶಕ್ತಿ ಸಚಿವಾಲಯ ರೂಪಿಸುವುದಾಗಿ ಹೇಳಿದ್ದರು. ನೀರಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಈ ಸಚಿವಾಲಯ ಪೂರೈಸುತ್ತದೆ ಎಂದು ಹೇಳಿದ್ದರು.

ಜಲ ಸಂಪನ್ಮೂಲದ ಬಗ್ಗೆ ಎನ್ ಡಿಎ ಸರಕಾರ ಸಾಕಷ್ಟು ಗಮನ ಹರಿಸಿದೆ. ಶುದ್ಧ ನೀರು, ಅದ್ಭುತವಾದ ನೀರಾವರಿ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಜಲ್ ಶಕ್ತಿ ಸಚಿವಾಲಯ ಕೆಲಸ ಮಾಡಲಿದೆ ಎಂದಿದ್ದರು. ದೇಶದಲ್ಲಿ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಿವಿಧ ಸಚಿವಾಲಯಗಳನ್ನು ಒಗ್ಗೂಡಿಸಿ ಕೆಲಸ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು.
ಏಪ್ರಿಲ್ ನಿಂದ ಜುಲೈ ತನಕ ದೇಶದ ಕನಿಷ್ಠ ಎಂಟು ರಾಜ್ಯಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಈಚೆಗೆ ಕೇಂದ್ರ ಸರಕಾರ ಬರ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದೆ. ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಗಂಭೀರವಾಗಿ ಕೆಳ ಹಂತಕ್ಕೆ ತಲುಪುವುದರಿಂದ ಎಚ್ಚರಿಕೆಯಾಗಿ ನೀರಿನ ಬಳಕೆ ಮಾಡುವಂತೆ ಸೂಚನೆ ನೀಡಿದೆ.
ಭಾರತದ ಬಹುತೇಕ ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ದಿನ ಬಳಕೆಗೆ ಮುಂಗಾರು ಮಳೆಯ ಮೇಲೇ ಅವಲಂಬನೆ ಇದೆ. ಸಮರೋಪಾದಿಯಲ್ಲಿ ನೀರು ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications