ಕೇಂದ್ರ vs ರಾಜ್ಯ: 'ಪಿಎಂಗೆ ನಾಚಿಕೆ ಇರಲಿ, ರಾಜ್ಯಗಳಿಗೆ ಬಾಕಿ ಜಿಎಸ್ಟಿ ಕೊಡಲಿ'
ನವದೆಹಲಿ, ಏ. 28: ಕೋವಿಡ್ ಪರಿಶೀಲನಾ ಸಭೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಪ್ರಧಾನಿ ಮಾತನಾಡುತ್ತಾ ರಾಜ್ಯ ಸರಕಾರಗಳನ್ನ ಕುಟುಕು ಯತ್ನಿಸಿದ್ದು ಈಗ ವಿಪಕ್ಷಗಳನ್ನು ರೊಚ್ಚಿಗೆಬ್ಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಕಡಿತ ಮಾಡದೆ ರಾಜ್ಯ ಸರಕಾರಗಳು ಜನರಿಗೆ ಅನ್ಯಾಯ ಮಾಡುತ್ತಿವೆ ಎಂದು ಪ್ರಧಾನಿ ನಿನ್ನೆ ಹೇಳಿದ್ದರು. ಇದಕ್ಕೆ ರಾಜ್ಯ ಸರಕಾರಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆ ಆಗಬೇಕೆಂದು ವಿವಿಧ ಮುಖ್ಯಮಂತ್ರಿಗಳು ಕಿಡಿಕಾರುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳು ಮೌನ ವಹಿಸಿವೆ.
ಕೇಂದ್ರ ಸರಕಾರ ಕಳೆದ ಕೆಲ ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಪರೀತವಾಗಿ ಏರಿಸಿದ್ದ ಎಕ್ಸೈಸ್ ಸುಂಕದಲ್ಲಿ ಸ್ವಲ್ಪ ಭಾಗವನ್ನು ಇತ್ತೀಚೆಗೆ ಇಳಿಕೆ ಮಾಡಿತ್ತು. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಟ್ ತೆರಿಗೆ ಇಳಿಸುವಂತೆ ರಾಜ್ಯ ಸರಕಾರಗಳಿಗೆ ವಿನಂತಿಸಿದ್ದರು. ಬಿಜೆಪಿ ಆಡಳಿತದ ರಾಜ್ಯಗಳ ಪೆಟ್ರೋಲ್ ಡೀಸಲ್ ಮೇಲಿನ ವ್ಯಾಟ್ ಇಳಿಸಿದವು. ಬಿಜೆಪಿಯೇತರ ಪಕ್ಷಗಳ ಅಡಳಿತ ಇರುವ ರಾಜ್ಯಗಳು ವ್ಯಾಟ್ ಇಳಿಸಲಿಲ್ಲ. ಈ ವಿಚಾರವನ್ನು ಕೋವಿಡ್ ಸಭೆಯಲ್ಲಿ ಪ್ರಸ್ತಾಪಿಸಿ ವ್ಯಾಟ್ ಇಳಿಸದ ರಾಜ್ಯಗಳನ್ನ ಪ್ರಧಾನಿ ಕುಟುಕುವ ಕೆಲಸ ಮಾಡಿದರು. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ, ಕೇರಳ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳ ಹೆಸರುಗಳನ್ನ ಉಲ್ಲೇಖಿಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮೊದಲಾದವರು ಪ್ರಧಾನಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತೆರಿಗೆ ಕಡಿತ ಮಾಡುವಂತೆ ರಾಜ್ಯಗಳಿಗೆ ಹೇಳುತ್ತಿರುವ ಪ್ರಧಾನಿಗೆ ನಾಚಿಕೆ ಎನಿಸಬೇಕು ಎಂದು ತಿವಿದ ಕೆಸಿಆರ್, ತನ್ನ ತೆಲಂಗಾಣ ರಾಜ್ಯದಲ್ಲಿ ೨೦೧೫ರಿಂದ ಪೆಟ್ರೋಲ್ ಡೀಸೆಲ್ ಮೇಲೆ ಯಾವುದೇ ತೆರಿಗೆ ಏರಿಕೆ ಮಾಡಿಲ್ಲ ಎಂದು ಒತ್ತಿಹೇಳಿದ್ದಾರೆ.
"ಅದೊಂದು ನಾಟಕ ಸಮಾವೇಶದಂತಿತ್ತು. ಮುಖ್ಯಮಂತ್ರಿಗಳಿಗೆ ಮಾತನಾಡಲೂ ಅವಕಾಶ ಕೊಡದೆ ಸುಮ್ಮನೆ ಮೂರ್ನಾಲ್ಕು ಗಂಟೆ ಕೂರಿಸಿಕೊಳ್ಳುತ್ತಾರೆ. ಇದರಿಂದ ಯಾರಿಗೆ ಏನು ಲಾಭ ಆಗುತ್ತೋ ಗೊತ್ತಿಲ್ಲ. ಈ ವಿಡಿಯೋ ಕಾನ್ಫೆರೆನ್ಸ್ನ ಉದ್ದೇಶವಾದರೂ ಏನಿತ್ತು? ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವುದು ಹೇಗೆಂದು ಚರ್ಚಿಸಬೇಕಿತ್ತು. ಆದರೆ ಅವರು ಮಾತನಾಡಿದ್ದು ಏನನ್ನು? ರಾಜ್ಯಗಳು ತೆರಿಗೆ ಕಡಿತ ಮಾಡಬೇಕೆಂದು ಹೇಳಿದರು. ಅವರಿಗೆ ಸ್ವಲ್ಪವಾದರೂ ನಾಚಿಕೆ ಆಗಬೇಕಲ್ಲವೆ. ಜನರಿಗೆ ಹೊರೆ ಹಾಕಬೇಡಿ ಎಂದು ಹೇಳುವ ಅವರೇ ಜನರಿಗೆ ಯಾಕೆ ಹೊರೆ ಹಾಕುತ್ತಿದ್ದಾರೆ? ಇದನ್ನ ನಾನು ನೇರವಾಗಿ ಮೋದಿಗೆ ಕೇಳುತ್ತೇನೆ" ಎಂದು ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ಬರಬೇಕಾದ ಜಿಎಸ್ಟಿ ಬಾಕಿ ಮೊದಲು ಕೊಡಲಿ:
ಇದೇ ವೇಳೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಮಹಾರಾಷ್ಟ್ರ ಪಾಲಿನ ಜಿಎಸ್ಟಿಯ ದೊಡ್ಡ ಮೊತ್ತವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ. ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಕಡಿಮೆ ಮಾಡುವಂತೆ ನಿನ್ನೆ ಪ್ರಧಾನಿಗಳು ಹೇಳಿದರು. ನಾವು ಈ ವರ್ಷದ ಬಜೆಟ್ನಲ್ಲಿ ಯಾವುದೇ ತೆರಿಗೆ ಏರಿಸಲಿಲ್ಲ. ಸಿಎನ್ಜಿ ಮೇಲಿನ ತೆರಿಗೆಯನ್ನ ಇಳಿಸಿದೆವು. ಇದರಿಂದ ರಾಜ್ಯಕ್ಕೆ 1000 ರೂ ನಷ್ಟವಾಯಿತು" ಎಂದು ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ.
ಇನ್ನೂ ವಾಗ್ದಾಳಿ ಮುಂದುವರಿಸಿದ ಪವಾರ್, ಈ ದೇಶದಲ್ಲಿ ಆಮದು ಆದ ಎಣ್ಣೆಗೆ ಮೊದಲು ತೆರಿಗೆ ಹಾಕುವುದು ಕೇಂದ್ರ, ನಂತರ ರಾಜ್ಯ ಸರಕಾರ ತೆರಿಗೆ ಹಾಕುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ, ಕೇಂದ್ರ ಕೂಡ ತೆರಿಗೆ ಕಡಿಮೆ ಮಾಡಬೇಕು" ಎಂದು ಮಹಾರಾಷ್ಟ್ರ ಡಿಸಿಎಂ ಒತ್ತಾಯಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಕೂಡ ತಮ್ಮ ರಾಜ್ಯ ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಗೆ 1500 ಕೋಟಿ ರೂ ವ್ಯಯಿಸಿರುವ ವಿಚಾರವನ್ನು ತಿಳಿಸಿ ಪ್ರಧಾನಿ ನರೇಂದ್ರ ಮೋದಿಗೆ ಛಾಟಿ ಬೀಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications