ಹೆಚ್ಚುತ್ತಿರುವ 'ಹಿಂದೂ ರಾಷ್ಟ್ರೀಯತೆ'ಯೇ ಯುದ್ಧಕ್ಕೆ ಮುನ್ನುಡಿ-ಚೀನಾ
ನವದೆಹಲಿ, ಜುಲೈ 20: "ಭಾರತದಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ ನರೇಂದ್ರ ಮೋದಿಯ ಚೀನಾ ಬಗೆಗಿನ ವಿದೇಶಾಂಗ ನೀತಿಯನ್ನೇ ಹೈಜಾಕ್ ಮಾಡಿದೆ. ಇದು ದೇಶವನ್ನು ಯುದ್ಧದತ್ತ ಕೊಂಡೊಯ್ಯಲಿದೆ," ಎಂದು ಚೀನಾ ಮಾಧ್ಯಮಗಳು ವಿಶ್ಲೇಷಿಸಿವೆ.
"ಚೀನಾಕ್ಕಿಂತ ಭಾರತ ದುರ್ಬಲವಾಗಿದೆ. ಆದರೆ ಭಾರತದ ರಾಜಕಾರಣಿಗಳು ಇದನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಮೋದಿ ಮತ್ತು ಅವರ ಸರಕಾರ ಮುಸ್ಲಿಂ ಸಮುದಾಯದವರ ಮೇಲೆ ಹಿಂದೂ ರಾಷ್ಟ್ರೀಯ ವಾದಿಗಳು ನಡೆಸುತ್ತಿರುವ ಹಿಂಸೆಯನ್ನು ಹತ್ತಿಕ್ಕಲು ವಿಫಲವಾಗಿದೆ," ಚೀನಾದ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಧೋಕ್ಲಾಂ ನಲ್ಲಿ ಭಾರತೀಯ ಸೇನಾಪಡೆ ಜಮಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ಯೂನಿಸ್ಟ್ ಚೀನಾದ ಮಾಧ್ಯಮಗಳು, 'ಹಿಂದೂ ರಾಷ್ಟ್ರೀಯವಾದಿಗಳ ಬೇಡಿಕೆಯನ್ನು ಸರಕಾರ ಮನ್ನಿಸುತ್ತಿದೆ ಎಂಬುದಕ್ಕೆ ಇದೇ ಉದಾಹರಣೆ," ಎಂದು ಹೇಳಿದೆ.
"ದೇಶದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬಡಿದೆಬ್ಬಿಸಿ ಮೋದಿ 2014ರಲ್ಲಿ ಅಧಿಕಾರಕ್ಕೇರಿದರು. ಇದೀಗ ಇದೇ ಜನರ ಭಾವನೆಗಳಿಗೆ ಸ್ಪಂದಿಸಲು ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಕಠಿಣ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ," ಎಂದು ಚೀನಾದ ಗ್ಲೋಬಲ್ ಟೈಮ್ಸ್ ವಿಶ್ಲೇಷಣೆ ಮಾಡಿದೆ.
ರಾಷ್ಟ್ರೀಯತೆಯ ಊರುಗೋಲಿನಲ್ಲಿ ಅಧಿಕಾರಕ್ಕೇರಿದ ಮೋದಿ ಇದೀಗ ಅದೇ ರಾಷ್ಟ್ರೀಯತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದ ಸುಧಾರಣೆಗೆ ಇದೇ ರಾಷ್ಟ್ರೀಯತೆಯ ಶಕ್ತಿಗಳು ಅಡ್ಡಿಯಾಗಿವೆ ಎನ್ನುವ ಅರ್ಥದಲ್ಲಿ ಪತ್ರಿಕೆ ವಿಶ್ಲೇಷಣೆ ಮಾಡಿದೆ.
'ಧಾರ್ಮಿಕ ರಾಷ್ಟ್ರೀಯತೆ ಈ ಮಟ್ಟಕ್ಕೆ ಹೋದರೆ ಮೋದಿ ಏನೂ ಮಾಡಲು ಸಾಧ್ಯವಿಲ್ಲ,' ಎಂದು ವಿಶ್ಲೇಷಿಸಿದ್ದಾರೆ ಯು ನಿಂಗ್. ಇನ್ನೂ ಮುಂದುವರಿದು, "1962ರ ಯುದ್ಧದ ಸೋಲಿನ ನಂತರ ಭಾರತೀಯರು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ಚೀನಾ ತಂತ್ರಗಳ ಬಗ್ಗೆ ಅನುಮಾನವನ್ನೇ ಇಟ್ಟುಕೊಂಡಿದ್ದಾರೆ. ಚೀನಾದ ಅಭಿವೃದ್ಧಿಯನ್ನು ದರುದೃಷ್ಟಕರ ಅಂದುಕೊಂಡಿರುವ ಭಾರತ, ಚೀನಾ ಬೆಳೆದಷ್ಟು ಮತ್ತಷ್ಟು ಭಯದಲ್ಲಿ ನರಳುತ್ತಿದೆ," ಎಂದು ಬರೆದಿದ್ದಾರೆ.
"ಚೀನಾವನ್ನು ಭಾರತ ವೈರಿ, ಶತ್ರು ಎಂದು ಅಂದುಕೊಂಡಿದೆ. ಉತ್ತಮ ಉದ್ದೇಶದಿಂದ ಚೀನಾ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ಭಾರತದ ಇದನ್ನೇ ತನ್ನ ವಿರುದ್ಧ ಚೀನಾ ಕತ್ತಿಮಸೆಯುತ್ತಿದೆ ಎಂದು ಅಂದುಕೊಂಡಿದೆ," ಎನ್ನುವ ಅರ್ಥ ಬರುವಂತೆ ಯು ನಿಂಗ್ ಪತ್ರಿಕೆಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.












Click it and Unblock the Notifications