ದೇಶದಾದ್ಯಂತ ಏಕಕಾಲಕ್ಕೆ ಚುನಾವಣೆಗೆ ನರೇಂದ್ರ ಮೋದಿ ಒಲವು
ನವದೆಹಲಿ, ಜೂನ್ 18: ಕೇಂದ್ರ ಮತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಸ್ತಾಪಿಸಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಗೆ ಅವರು ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನೀತಿಗಳ ಕುರಿತಾದ ನೀತಿ ಆಯೋಗದ ಚಿಂತಕರ ಚಾವಡಿಯ ನಾಲ್ಕನೆಯ ಸಭೆಯಲ್ಲಿ ಅವರು ಏಕಕಾಲದ ಚುನಾವಣೆ ಕುರಿತು ಮತ್ತೆ ಒಲವು ತೋರಿಸಿದ್ದಾರೆ.
ಮೋದಿ ನೇತೃತ್ವದ 'ನೀತಿ' ಸಭೆಯಲ್ಲಿ ಗಮನಸೆಳೆದ ಕುಮಾರಸ್ವಾಮಿ ಭಾಷಣ
ಕೇಂದ್ರ ಸರ್ಕಾರ ಕೆಲವು ದಿನಗಳಿಂದ ಏಕಕಾಲದ ಚುನಾವಣೆಯ ಪರವಾದ ನಿಲುವನ್ನು ತಾಳಿದೆ. ಒಂದೇ ಬಾರಿಗೆ ದೇಶದಾದ್ಯಂತ ಎಲ್ಲ ರಾಜ್ಯಗಳು ಮತ್ತು ಕೇಂದ್ರಕ್ಕೆ ಅನ್ವಯಿಸುವಂತೆ ಚುನಾವಣೆ ನಡೆಸುವುದರಿಂದ ಸಮಯ ಮತ್ತು ಹಣದ ಭಾರಿ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಆದರೆ, ಬಹುತೇಕ ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಇದರ ಕಾರ್ಯಸಾಧ್ಯತೆಯನ್ನು ಪ್ರಶ್ನಿಸಿರುವ ವಿರೋಧಪಕ್ಷಗಳು, ಈ ಪ್ರಯತ್ನ ಗಣರಾಜ್ಯ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.
ರಾಜಕೀಯ ನಿಲುವಿನಾಚೆ ಈ ವಿಚಾರವನ್ನು ಪರಿಗಣಿಸಬೇಕು ಎಂದು ಮೋದಿ ಅವರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ಅಲ್ಲದೆ, ಈ ಕುರಿತು ಸಂಸತ್ತಿನಲ್ಲಿಯೂ ಪ್ರಸ್ತಾಪಿಸಿದ್ದಾರೆ.
ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟು ಮಾಡದಂತೆ ತಡೆಯುವ ಉದ್ದೇಶದಿಂದ 2024ರಿಂದ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸುವ ಯೋಜನೆಯನ್ನು ನೀತಿ ಆಯೋಗ ಕಳೆದ ವರ್ಷ ಮುಂದಿರಿಸಿತ್ತು. ಆದರೆ, ಅದಕ್ಕೆ ಹೆಚ್ಚಿನ ಬೆಂಬಲ ದೊರೆತಿರಲಿಲ್ಲ.
ಭಾನುವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಪುನಃ ಪ್ರಸ್ತಾಪಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯೋಚನೆ ಕುರಿತು ವ್ಯಾಪಕ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಗಳು ನಡೆಯಬೇಕು. ಇದರಿಂದ ಹಣಕಾಸಿನ ಉಳಿತಾಯ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆ ಸೇರಿದಂತೆ ಅನೇಕ ಅನುಕೂಲತೆಗಳು ಸಿಗಲಿವೆ ಎಂಬುದಾಗಿ ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶವು ಸಾರ್ವಕಾಲಿಕವಾಗಿ ಚುನಾವಣೆಯ ಮೂಡ್ನಲ್ಲಿಯೇ ಉಳಿದುಕೊಳ್ಳುತ್ತಿದೆ. ಅಲ್ಲದೆ ಎಲ್ಲ ಚುನಾವಣೆಗಳಿಗೂ ಒಂದೇ ರೀತಿಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಇದರಿಂದ ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟಿರುವುದಾಗಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.