ಅನುಕಂಪ ಗಿಟ್ಟಿಸಲು ಮೋದಿಯಿಂದ ಬಡತನದ ಹೇಳಿಕೆ: ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ, ನವೆಂಬರ್ 27: ನಾನು ಬಡ ಹಿನ್ನಲೆಯಿಂದ ಬಂದವನು ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ದ್ವೇಷಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಇದಕ್ಕೆ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ.
"ನರೇಂದ್ರ ಮೋದಿ ಮಾರ್ಕೆಟಿಂಗ್ ಮಾಡುವುದರಲ್ಲಿ ಪರಿಣತರು. ಯಾವುದೇ ವ್ಯಕ್ತಿ ಹುದ್ದೆಯಲ್ಲಿದ್ದಾಗ ಅವರ ಸಾಧನೆಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತದೆ. ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ಯಾರೂ ಮಾತನಾಡುವುದಿಲ್ಲ," ಎಂದು ಖರ್ಗೆ 'ಎಎನ್ಐ' ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಚುನಾವಣೆ ಹತ್ತಿರದಲ್ಲಿರುವಾಗ ಈ ರೀತಿಯ ಹೇಳಿಕೆಗಳನ್ನು ನೀಡಿ ಅನುಕಂಪ ಗಿಟ್ಟಿಸಲು ಅವರು (ಮೋದಿ) ಯತ್ನಿಸುತ್ತಿದ್ದಾರೆ ಎಂದು ಖರ್ಗೆ ಹರಿಹಾಯ್ದಿದ್ದಾರೆ.
ಇದಕ್ಕೂ ಮೊದಲು ರಾಜ್ ಕೋಟ್ ನ ಜಸ್ದಾನ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನನ್ನ ಬಡತನದ ಹಿನ್ನಲೆಯನ್ನು ಮತ್ತು ಬಡವರನ್ನು ಅಪಹಾಸ್ಯ ಮಾಡಬೇಡಿ ಎಂದು ಕಾಂಗ್ರೆಸ್ ಪಕ್ಷದವರನ್ನು ಕೇಳಿಕೊಳ್ಳುತ್ತೇನೆ," ಎಂದು ಹೇಳಿದ್ದರು.
ಜತೆಗೆ, "ನಾನು ಬಡ ಹಿನ್ನಲೆಯಿಂದ ಬಂದವ ಎಂಬ ಕಾರಣಕ್ಕೆ ಕಾಂಗ್ರೆಸ್ ಗೆ ನನ್ನನ್ನು ಕಂಡರೆ ಆಗುತ್ತಿಲ್ಲ. ಒಂದು ಪಕ್ಷ ಈ ಮಟ್ಟಕ್ಕೆ ಇಳಿಯಬಹುದೇ?" ಎಂದು ಪ್ರಶ್ನಿಸಿದ್ದರು.
"ಬಡ ಕುಟುಂಬಕ್ಕೆ ಸೇರಿದ ವ್ಯಕ್ತಿಯು ಪ್ರಧಾನಿಯಾಗಿದ್ದಾರೆ. ಈ ಸತ್ಯಕ್ಕಾಗಿ ಅವರು ತಮ್ಮ ಅಸಹ್ಯತೆಯನ್ನು ಮರೆಮಾಚಲು ವಿಫಲರಾಗಿದ್ದಾರೆ. ಹೌದು, ನಾನು ಚಹಾವನ್ನು ಮಾರಾಟ ಮಾಡಿದ್ದೇನೆ ಆದರೆ ನಾನು ರಾಷ್ಟ್ರವನ್ನು ಮಾರಾಟ ಮಾಡಿಲ್ಲ," ಎಂದು ಹೇಳಿದ್ದರು.
ಇದೀಗ ಪ್ರಧಾನಿ ಹೇಳಿಕೆಗೆ ಮಲ್ಲಿಕಾರ್ಜುನ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications