UGC, AICTE ಬರಖಾಸ್ತುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ
ಹಾಲಿ ಚಾಲ್ತಿಯಲ್ಲಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಎಸಿಟಿಇ) ಗಳನ್ನು ಬರಖಾಸ್ತುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ.
ನವದೆಹಲಿ, ಜೂನ್ 6: ಉನ್ನತ ಶಿಕ್ಷಣಕ್ಕೆ ದೇಶದಲ್ಲಿ ಒಂದೇ ಆಡಳಿತ ಮಂಡಳಿ ಇರಬೇಕೆಂದು ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ, ಈಗ ಉನ್ನತ ಶಿಕ್ಷಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಹಾಗೂ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್) ಗಳನ್ನು ಬರಖಾಸ್ತುಗೊಳಿಸಿ ಹೊಸ ಮಂಡಳಿಯೊಂದನ್ನು ಅಸ್ತಿತ್ವಕ್ಕೆ ತರಲು ಯೋಜಿಸಿದೆ.
ಅದರಂತೆ, ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಆಯೋಗವನ್ನು (ಎಚ್ ಇಇಆರ್ ಎ) ರಚಿಸಲು ನಿರ್ಧರಿಸಲಾಗಿದೆ.
ಇಂಥದ್ದೊಂದು ಪ್ರಸ್ತಾವನೆ ಕೆಲ ವರ್ಷಗಳ ಹಿಂದೆಯೇ ಬಂದಿತ್ತಾದರೂ, ಇದು ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಗತವಾಗಿರಲಿಲ್ಲ. ಆದರೆ, ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲು ಮೋದಿ ಸೂಚಿಸಿದ್ದರು. ಅದರಂತೆ, ಹೊಸ ಆಯೋಗದ ರಚನೆ ಈ ಪ್ರಕ್ರಿಯೆ ಚುರುಕಾಗಿದೆ.
ಹೊಸ ಆಯೋಗದ ರಚನೆಯ ಜವಾಬ್ದಾರಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ನೀತಿ ಆಯೋಗಗಳಿಗೆ ವಹಿಸಲಾಗಿದೆ. ಹಾಗಾಗಿ, ತ್ವರಿತಗತಿಯಲ್ಲಿ ಕೆಲಸಗಳು ಜರುಗುತ್ತಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಹೊಸ ಆಯೋಗದ ರಚನೆ ಏಕೆ? ಅದರ ಅಗತ್ಯವಿತ್ತೇ? ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಒಂದೇ ಆಯೋಗ, ಒಂದೇ ನೀತಿ
ಹಾಲಿ ಚಾಲ್ತಿಯಲ್ಲಿರುವ ಯುಜಿಸಿ ಹಾಗೂ ಎಐಸಿಟಿಇಗಳ ನಿಯಮಗಳು ಬೇರೆ ಬೇರೆ ಇದ್ದಿದ್ದಿರಂದಾಗಿ ಉನ್ನತ ಶಿಕ್ಷಣಕ್ಕೆ ಸರಿಯಾದ ಒಂದೇ ನಿಯಮಗಳು ಇರಲೇಇಲ್ಲ. ಇದನ್ನು ನಿವಾರಿಸಿ, ಒಂದೇ ಆಯೋಗ, ಒಂದೇ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಏಕ ಸ್ವರೂಪದ ನಿಯಮ
ಯುಜಿಸಿ ಹಾಗೂ ಎಐಸಿಟಿಗಳಲ್ಲಿ ಹಲವಾರು ನಿಯಮಗಳು ಜಾರಿಯಲ್ಲಿದ್ದರಿಂದಾಗಿ ಆಡಳಿತವು ಸರಾಗವಾಗಿ ಆಗುತ್ತಿರಲಿಲ್ಲ. ಹಾಗಾಗಿ, ಆ ಎಲ್ಲಾ ನೀತಿ ನಿಯಮಗಳನ್ನು ಬದಲಾಯಿಸಲು ಹಾಗೂ ದೇಶಾದ್ಯಂತ ಉನ್ನತ ಶಿಕ್ಷಣಕ್ಕೆ ಏಕಸ್ವರೂಪದ ನಿಯಮಗಳನ್ನು ಜಾರಿಗೆ ತರುವ ಅವಶ್ಯಕತೆಯಿತ್ತು.
ಸಂಶೋಧನೆಗಳಿಗೆ ಅನುವು
ಈಗ ಚಾಲ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ ಕೊಟ್ಟು ಅವುಗಳಿಂದ ಸಂಶೋಧನೆಗಳಿಗೆ ಅನುವು ಮಾಡಿಕೊಡುವ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವ ಉದ್ದೇಶದಿಂದಲೂ ಹೊಸ ಆಯೋಗ ರಚನೆಗೆ ನಾಂದಿ ಹಾಡಲಾಗಿದೆ.
ಇನ್ನು ಒಂದೇ ಆಯೋಗದ ಲೆಕ್ಕ
ಯುಜಿಸಿ ಹಾಗೂ ಎಐಸಿಟಿಇಗಳಲ್ಲಿ ನೊಂದಾಯಿಸಲ್ಪಟ್ಟಿರುವ ಕಾಲೇಜುಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನ ಹಾಗೂ ಕೆಲವಾರು ಧನ ಸಹಾಯಗಳು ಬೇರೆ ಬೇರೆ ರೀತಿಯ ಮಾನದಂಡಗಳಿಗೆ ಅನುಗುಣವಾಗಿ ನೀಡಲಾಗುತ್ತಿತ್ತು. ಹೊಸ ಆಯೋಗದಿಂದ, ಅನುದಾನ ಹಂಚಿಕೆ, ಧನ ಸಹಾಯಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗುತ್ತದೆ. ಅಲ್ಲದೆ, ಯುಜಿಸಿ, ಎಐಸಿಟಿಇ ಎಂಬ ಎರಡು ಆಯೋಗಗಳಿಗೆ ವಾರ್ಷಿಕ ಬಜೆಟ್ ಹಂಚುವ ಬದಲು ಇನ್ನು ಎಚ್ ಇಇಆರ್ ಎ ಎಂಬ ಒಂದೇ ಆಯೋಗಕ್ಕೆ ಸರ್ಕಾರ ಹಣ ನೀಡಲಿದೆ.
ಮಹತ್ವದ ಸುಧಾರಣೆಗೆ ನಾಂದಿ
ಎಚ್ ಇಇಆರ್ ಎ ಜಾರಿಯಾದರೆ, ಇದು ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯವಾದ, ಮಹತ್ವದ ಸುಧಾರಣೆಗೆ ನಾಂದಿ ಹಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.