ಪಕ್ಷದಲ್ಲಿ ಯುವ ನಾಯಕತ್ವ ಬೆಳೆಸಲು ಮೋದಿ ಸೂಚನೆ
ನವದೆಹಲಿ, ಡಿಸೆಂಬರ್ 20: 2019ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬೇರುಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೊದಿ ಇಂದು ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಪಕ್ಷದ ಹೊರಗೆ ಮತ್ತು ಒಳಗೆ ಯುವ ನಾಯಕರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ.
"ವಿಷನ್ 2022ರ ಅಂಗವಾಗಿ 'ನವ ಭಾರತ ನಿರ್ಮಾಣ'ಕ್ಕೆ ಯುವಕರನ್ನು ಉತ್ತೇಜಿಸುವಂತೆ ಅವರು ಸಲಹೆ ನೀಡಿದ್ದಾರೆ. ಜತೆಗೆ ಪಕ್ಷದ ನಾಯಕರು ವಿರೋಧ ಪಕ್ಷಗಳ ಸುಳ್ಳು ಮಾಹಿತಿಗಳ ಪ್ರಚಾರಕ್ಕೂ ಅವಕಾಶ ನೀಡಬಾರದು ಎಂದಿದ್ದಾರೆ," ಎಂಬುದಾಗಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದಾದ್ಯಂತ ಬೇರು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವಂತೆ ಪ್ರಧಾನಿ ಹೇಳಿದ್ದಾಗಿ ಅನಂತ್ ಕುಮಾರ್ ಹೇಳಿದ್ದಾರೆ. ಸಭೆಯಲ್ಲಿ ಒಂದು ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು ಎಂದೂ ಬಿಜೆಪಿಯ ಮೂಲಗಳು ಹೇಳಿವೆ. "ಗುಜರಾತ್ ನಲ್ಲಿ ಪಕ್ಷ ಕಟ್ಟಿದ ಬಗೆ, ಅಟಲ್ ಬಿಹಾರಿ ವಾಜಪೇಯಿಯಂಥವರು ಕಿರಿ ನಾಯಕರನ್ನು ಬೆಳೆಸಿದ ರೀತಿ ವಿವರಿಸುವಾಗ ಪ್ರಧಾನಿಗಳು ಭಾವುಕರಾದರು ಎಂದು ಪಕ್ಷದ ಮೂಲಗಳು ಹೇಳಿವೆ.
ಇನ್ನು ಗುಜರಾತ್ ಚುನಾವಣೆ ಕಾಂಗ್ರೆಸ್ ಪಾಲಿಗೆ ನೈತಿಕ ಜಯ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ, ರಾಜ್ಯದಲ್ಲಿ ಇದು ಬಿಜೆಪಿಗೆ ಸಿಕ್ಕಿದ ಪ್ರಮುಖ ಜಯ ಎಂದಿದ್ದಾರೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಮೂರು ವರ್ಷಗಳ ಅವಧಿಯಲ್ಲಿ ಇಷ್ಟೊಂದು ಚುನಾವಣೆಗಳನ್ನು ಗೆದ್ದಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಪಕ್ಷದಲ್ಲಿ ಎಲ್ಲಾ ಹಂತಗಳಲ್ಲೂ ಯುವ ನಾಯಕರನ್ನು ಬೆಳೆಸಬೇಕು ಎಂದು ಹೇಳಿದ ಪ್ರಧಾನಿ ತಮಗಿಂತ 14 ವರ್ಷ ಸಣ್ಣವರಾಗಿರುವ ಅಮಿತ್ ಶಾರನ್ನು ತಾನು ಹೇಗೆ ಬೆಳೆಸಿದೆ ಎಂಬುದನ್ನು ವಿವರಿಸಿದರು.
ತಳಮಟ್ಟದಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ. ಹೀಗಿದ್ದಾಗ ಮಾತ್ರ ಅಲೆ ಸೃಷ್ಟಿಸಬಹುದು ಎಂಬುದಾಗಿ ಪ್ರಧಾನಿ ಹೇಳಿದರು. ಯುವ ಜನಾಂಗ ಪಕ್ಷ, ಸಾಮಾಜಿಕ ಕೆಲಸ ಮತ್ತು ದೇಶ ಕಟ್ಟುವಲ್ಲಿ ಕೈಜೋಡಿಸಬೇಕು ಎಂದು ಮೋದಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮೇಲೆ ಹರಿಹಾಯ್ದ ಅಮಿತ್ ಶಾ, ಕಾಂಗ್ರೆಸ್ ನ ನೈತಿಕ ಗೆಲುವು ಹೇಳಿಕೆ ಬಲುದೊಡ್ಡ ಜೋಕ್ ಎಂದಿದ್ದಾರೆ. ಗುಜರಾತ್ ನಲ್ಲಿ ಶೇಕಡಾ 49 ಮತಗಳನ್ನು ಪಡೆದಿರುವ ಬಿಜೆಪಿ 2012ರಲ್ಲಿ ಪಡೆದಿದ್ದಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications