'ಒಂದು ಕಪ್ ಟೀ ಸಹ ಕುಡಿಯದೆ 9 ತಾಸು ವಿಚಾರಣೆ ಎದುರಿಸಿದ್ದ ನರೇಂದ್ರ ಮೋದಿ'
ನವದೆಹಲಿ, ಅಕ್ಟೋಬರ್ 27: ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್ಐಟಿ) ವಿಚಾರಣೆ ಎದುರಿಸಿದ್ದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಸತತವಾಗಿ ಕೇಳಲಾದ ನೂರಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಒಂದಕ್ಕೂ ಬಿಡದಂತೆ ಉತ್ತರ ನೀಡಿದ್ದರು ಎಂದು ಆಗ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಆರ್ಕೆ ರಾಘವನ್ ತಮ್ಮ ಹೊಸ ಪುಸ್ತಕದಲ್ಲಿ ತಿಳಿಸಿದ್ದರು.
ಅಷ್ಟೇ ಅಲ್ಲ, ಸುಮಾರು 9 ಗಂಟೆ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ ಸಂಯಮದಿಂದಲೇ ಕುಳಿತುಕೊಂಡಿದ್ದ ಅವರು, ತನಿಖಾಧಿಕಾರಿಗಳಿಂದ ಒಂದು ಲೋಟ ಟೀಯನ್ನು ಕೂಡ ಸ್ವೀಕರಿಸಿರಲಿಲ್ಲ. ಗಾಂಧಿನಗರದಲ್ಲಿರುವ ಎಸ್ಐಟಿ ಕಚೇರಿಗೆ ಹಾಜರಾಗಲು ಒಪ್ಪಿಕೊಂಡಿದ್ದ ಮೋದಿ, ತಮ್ಮ ಜತೆಯಲ್ಲಿ ಒಂದು ಬಾಟಲ್ ನೀರು ತಂದಿದ್ದರು ಎಂದು ಆರ್ಕೆ ರಾಘವನ್ ಅವರು ತಮ್ಮ ಜೀವನಚರಿತ್ರೆ 'ಎ ರೋಡ್ ವೆಲ್ ಟ್ರಾವೆಲ್ಡ್' ಕೃತಿಯಲ್ಲಿ ವಿವರಿಸಿದ್ದಾರೆ.
2002ರ ಗುಜರಾತ್ ಗಲಭೆಯ ತನಿಖೆ ನಡೆಸಿದ ಎಸ್ಐಟಿಯ ಮುಖ್ಯಸ್ಥರಾಗಿ ಸುಪ್ರೀಂಕೋರ್ಟ್ ನೇಮಿಸುವ ಮುನ್ನ ರಾಘವನ್ ಅವರು ಸಿಬಿಐ ಸಂಸ್ಥೆಯ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದರು. ಬೋಫೋರ್ಸ್ ಹಗರಣ, 2000ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮತ್ತು ಮೇವು ಹಗರಣ ಸೇರಿದಂತೆ ಅನೇಕ ಉನ್ನತ ಮಟ್ಟದ ಪ್ರಕರಣಗಳ ತನಿಖೆ ನಡೆಸಿದ್ದರು. ಮುಂದೆ ಓದಿ.

ಕಚೇರಿಗೆ ಬರುವಂತೆ ತಿಳಿಸಿದ್ದೆವು
ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರನ್ನು ವಿಚಾರಣೆಗೆ ಕರೆದ ಸಂದರ್ಭದ ಸಮಯದ ಬಗ್ಗೆ ಹೇಳಿರುವ ರಾಘವನ್, 'ಈ ವಿಚಾರಣೆಗೆ ಮೋದಿ ಅವರು ಖುದ್ದಾಗಿ ಎಸ್ಐಟಿ ಕಚೇರಿಗೆ ಬರಬೇಕು ಎಂದು ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಗೆ ನಾವು ಮನವರಿಕೆ ಮಾಡಿದ್ದೆವು. ಏಕೆಂದರೆ ಅಲ್ಲಿಯ ಹೊರತು ಬೇರೆ ಎಲ್ಲಿಯೂ ವಿಚಾರಣೆ ನಡೆಸಿದ್ದರೆ ಅದು ಅವರಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂಬ ಆರೋಪ ಎದುರಾಗುತ್ತಿತ್ತು' ಎಂದಿದ್ದಾರೆ.
'ನಮ್ಮ ನಿಲುವನ್ನು ಮೋದಿ ಅರ್ಥ ಮಾಡಿಕೊಂಡಿದ್ದರು. ಗಾಂಧಿನಗರದ ಸರ್ಕಾರಿ ಸಂಕೀರ್ಣದಲ್ಲಿರುವ ಎಸ್ಐಟಿ ಕಚೇರಿಗೆ ಬರಲು ಸಿದ್ಧರಾಗಿ ಒಪ್ಪಿಕೊಂಡಿದ್ದರು' ಎಂದು ಬರೆದಿದ್ದಾರೆ.

ಮಲ್ಹೋತ್ರಾಗೆ ವಿಚಾರಣೆ ಹೊಣೆ
ಮೋದಿ ಅವರನ್ನು ನೀವೇ ವಿಚಾರಣೆ ಮಾಡಿ ಎಂದು ಎಸ್ಐಟಿ ಸದಸ್ಯ ಅಶೋಕ್ ಮಲ್ಹೋತ್ರಾ ಅವರಿಗೆ ಹೇಳುವ 'ಅಸ್ವಾಭಾವಿಕ ನಿರ್ಧಾರ' ತೆಗೆದುಕೊಂಡಿದ್ದಾಗಿ ರಾಘವನ್ ತಿಳಿಸಿದ್ದಾರೆ. ಮೋದಿ ಮತ್ತು ರಾಘವನ್ ನಡುವೆ ಒಪ್ಪಂದ ನಡೆದಿದೆ ಎಂಬ ಆರೋಪಗಳು ತಮ್ಮ ಮೇಲೆ ಬರಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೆ ಎಂದಿದ್ದಾರೆ.
'ನನ್ನ ಈ ನಿರ್ಧಾರವನ್ನು ತನಿಖೆ ನಡೆದ ತಿಂಗಳ ಬಳಿಕ ಪ್ರಕರಣದ ಅಮಿಕಸ್ ಕ್ಯೂರಿ ಆಗಿದ್ದ ಹರೀಶ್ ಸಾಳ್ವೆ ಅವರೇ ಪ್ರಶಂಸಿಸಿದ್ದರು. ಮೋದಿ ಅವರ ಹೇಳಿಕೆ ಪಡೆಯುವ ಸಂದರ್ಭದಲ್ಲಿ ನನ್ನ ಹಾಜರಾತಿ ತನಿಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗುತ್ತಿತ್ತು ಎಂದು ಸಾಳ್ವೆ ಹೇಳಿದ್ದರು' ಎಂದಿರುವ ರಾಘವನ್, ಅದಕ್ಕೂ ಮುನ್ನ ಸಾಳ್ವೆ ಅವರನ್ನು ಎಂದಿಗೂ ಭೇಟಿಯಾಗಿರಲಿಲ್ಲ ಎಂದು ವಿವರಿಸಿದ್ದಾರೆ.

ಟೀ ಕೂಡ ಬೇಡ ಎಂದರು
'ಮೋದಿ ಅವರನ್ನು ಎಸ್ಐಟಿ ಕಚೇರಿಯ ನನ್ನ ಚೇಂಬರ್ನಲ್ಲಿ ಒಂಬತ್ತು ಗಂಟೆ ಪ್ರಶ್ನಿಸಲಾಗಿತ್ತು. ರಾತ್ರಿ ಅಂತ್ಯಗೊಂಡ ಈ ಸುದೀರ್ಘ ವಿಚಾರಣೆಯುದ್ದಕ್ಕೂ ಮೋದಿ ಅವರು ಸಂಯಮದಿಂದ ಇದ್ದರು ಎಂದು ನನಗೆ ಮಲ್ಹೋತ್ರಾ ಅವರು ನಂತರ ಹೇಳಿದ್ದರು. ಅವರು ಯಾವ ಪ್ರಶ್ನೆಗೂ ಬಿಡದೆ ಉತ್ತರಿಸಿದ್ದರು. ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಲಿಲ್ಲ. ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ ಬೇಡ ಎಂದರು. ಅವರು ತಮ್ಮೊಂದಿಗೆ ನೀರಿನ ಬಾಟಲಿ ತಂದಿದ್ದರು. ನೂರಾರು ಪ್ರಶ್ನೆಗಳನ್ನು ಕೇಳುವ ನಡುವೆ ಟೀ ಬೇಕೇ ಎಂದು ಕೇಳಿದಾಗಲೂ ಬೇಡ ಎಂದಿದ್ದರು' ಎಂದು ಬರೆದಿದ್ದಾರೆ.

ವಿಚಾರಣೆ ನಡೆಸಿದವರೇ ಸುಸ್ತಾಗಿದ್ದರು
ಒಂದು ಸಣ್ಣ ವಿರಾಮವನ್ನು ಪಡೆದುಕೊಳ್ಳಲು ಮೋದಿ ಅವರನ್ನು ಒಪ್ಪಿಸಿವುದೇ ಕಷ್ಟವಾಗುವಂತಿತ್ತು. ವಿಚಾರಣೆ ವೇಳೆ ಮೋದಿ ಅವರಿಗಿಂತ ಮಲ್ಹೋತ್ರಾ ಅವರೇ ಸುಸ್ತಾಗಿದ್ದರು. ತಮಗೆ ವಿರಾಮ ಬೇಕು ಎಂದು ಮಲ್ಹೋತ್ರಾ ಹೇಳಿದಾಗ ಮೋದಿ ಒಪ್ಪಿಕೊಂಡರು. ಅಂತಹ ಎನರ್ಜಿ ಅವರಲ್ಲಿತ್ತು ಎಂದು ಹೇಳಿದ್ದಾರೆ.
2012ರಲ್ಲಿ ತನಿಖೆಯನ್ನು ಮುಕ್ತಾಯಗೊಳಿಸಿ ವರದಿ ನೀಡಿದ್ದ ಎಸ್ಐಟಿ, ಸರ್ಕಾರಿ ಅಧಿಕಾರಿಗಳು ಸೇರಿದಂತೆ ನರೇಂದ್ರ ಮೋದಿ ಹಾಗೂ ಇತರೆ 63 ಮಂದಿಗೆ ಕ್ಲೀನ್ ಚಿಟ್ ನೀಡಿತ್ತು. ಅವರ ವಿರುದ್ಧ ಶಿಕ್ಷೆಗೆ ಒಳಪಡಿಸಬಹುದಾದ ಯಾವುದೇ ಪುರಾವೆಗಳಿಲ್ಲ ಎಂದು ವರದಿ ತಿಳಿಸಿತ್ತು.

ಆರೋಪ ಸಾಬೀತುಪಡಿಸಲು ಆಗಲಿಲ್ಲ
ಮುಖ್ಯಮಂತ್ರಿಯ ಪರವಾಗಿದ್ದೆ ಎಂದು ನನ್ನ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದ್ದರು. ನನ್ನ ದೂರವಾಣಿ ಸಂಭಾಷಣೆಗಳ ಮೇಲೆ ನಿಗಾ ಇರಿಸಲು ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಆದರೆ ಅಂತಹ ಯಾವುದೇ ಸಾಕ್ಷ್ಯಗಳು ಸಿಗದ ಕಾರಣ ಅವರು ನಿರಾಶೆಗೊಳಗಾದರು. ಅದೃಷ್ಟವಶಾತ್ ಸುಪ್ರೀಂಕೋರ್ಟ್ ನನ್ನ ಪರವಾಗಿ ನಿಂತಿತು. ಮುಸ್ಲಿಂ ಸಮುದಾಯದ ವಿರುದ್ಧ ಗುರಿ ಹೊಂದಿದ್ದ ಗಲಭೆಕೋರರೊಂದಿಗೆ ರಾಜ್ಯ ಆಡಳಿತ ನಂಟು ಹೊಂದಿದೆ ಎಂಬ ವಾದವನ್ನು ಕೊಳ್ಳಲು ನಾನು ನಿರಾಕರಿಸಿದ್ದರಿಂದ ಆರೋಪಗಳನ್ನು ಎದುರಿಸಬೇಕಾಯಿತು. ನಮ್ಮತನಿಖೆ ವೃತ್ತಿಪರವಾಗಿತ್ತು ಎಂದಿದ್ದಾರೆ.

ಗಲಭೆಗೂ ಮುನ್ನ ಸಭೆ
ಎಹ್ಸಾನ್ ಜಫ್ರಿ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದರು ಮುಖ್ಯಮಂತ್ರಿಯವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಸಂಜೀವ್ ಭಟ್ ಸೇರಿದಂತೆ ಕೆಲವರು 2002ರ ಫೆಬ್ರವರಿ 28ರಂದು ತಡರಾತ್ರಿ ನಡೆಸಿದ ಅಧಿಕೃತ ಸಭೆಯಲ್ಲಿ ಮುಖ್ಯಮಂತ್ರಿ (ನರೇಂದ್ರ ಮೋದಿ), ಹಿಂದೂ ಭಾವನೆಗಳು ತೀವ್ರಗೊಂಡರೆ ಮಧ್ಯಪ್ರವೇಶ ಮಾಡದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದರು. ಇದರಲ್ಲಿಯೂ ಯಾವುದೇ ಹುರುಳಿರಲಿಲ್ಲ. ಸಂಜೀವ್ ಭಟ್ ಆ ಸಭೆಯಲ್ಲಿಯೇ ಹಾಜರಿರಲಿಲ್ಲ ಎಂದು ರಾಘವನ್ ಹೇಳಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications