ಮೋದಿ ಸಾಮಾಜಿಕ ಜಾಲತಾಣದಿಂದ ದೂರವೆಂಬ ಗುಟ್ಟು ಬಯಲು
ನವದೆಹಲಿ, ಮಾರ್ಚ್ 3: ಸಾಮಾಜಿಕ ಜಾಲತಾಣದಿಂದ ಪ್ರಧಾನಿ ನರೇಂದ್ರ ಮೋದಿ ದೂರ ಉಳಿಯಲಿದ್ದಾರೆ ಎನ್ನುವ ಸುದ್ದಿಗೆ ಖುದ್ದಾಗಿ ಅವರೇ ತೆರೆ ಎಳೆದಿದ್ದಾರೆ.
ಈ ಭಾನುವಾರ ಮಹಿಳಾ ದಿನಾಚರಣೆ ಅಂದು ಒಂದು ದಿನ ಸಾಮಾಜಿಕ ಜಾಲತಾಣಗಳನ್ನು ಮಹಿಳೆಯರಿಗೆ ಮೀಸಲಿಡಲು ನಿರ್ಧರಿಸಿದ್ದೇನೆ. ತನ್ನ ಖಾತೆಯ ನಿರ್ವಹಣೆಯನ್ನು ಮಹಿಳೆಯರಿಗೇ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ಪ್ರಧಾನಿ ನರೇಂದ್ರ ಮೋದಿ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಕೂಡ ಮಾಡಿದ್ದರು.
ಆದರೆ ಇದಕ್ಕೆ ಹೊಸ ತಿರುವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 8ರ ಮಹಿಳಾ ದಿನ ಪ್ರಯುಕ್ತವಾಗಿ ಸದರಿ ಮೋದಿಯ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿರ್ವಹಿಸಲು ಅರ್ಹರಿರುವ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಿದ್ದಾರೆ.

ನರೇಂದ್ರ ಮೋದಿ ಟ್ವೀಟ್
ಈ ಸಂಬಂಧ ಟ್ವೀಟ್ ಮಾಡಿರುವ ನರೇಂದ್ರ ಮೋದಿ ' ಎಲ್ಲಾ ಮಹಿಳೆಯರ ಜೀವನವು ನಮಗೆ ಸ್ಫೂರ್ತಿ ನೀಡುವಂತದ್ದಾಗಿದೆ. 'ಶಿ ಇನ್ಸ್ಪೈರ್ ಅಸ್' ಎನ್ನುವ ಹ್ಯಾಷ್ಟ್ಯಾಗ್ ನಲ್ಲಿ ತಮ್ಮ ಜೀವನ ಕತೆಗಳನ್ನು ಹಂಚಿಕೊಳ್ಳುವಂತೆ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಮಹಿಳಾ ದಿನಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಅಧ್ಯಾಯಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಿಂದ ದೂರವಾಗುತ್ತಾರೆ ಎನ್ನುವ ಸುದ್ದಿಗೂ ತೆರೆ ಎಳೆದಿದ್ದಾರೆ.

ಜಾಲತಾಣಗಳಿಂದಲ್ಲ, ದ್ವೇಷವನ್ನು ದೂರವಿಡಿ ಎಂದಿದ್ರು ರಾಹುಲ್
ಪ್ರಧಾನಿ ನರೇಂದ್ರ ಮೋದಿ ಈ ಭಾನುವಾರ ಸಾಮಾಜಿಕ ಜಾತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಯೂ ಟ್ಯೂಬ್ನಿಂದ ದೂರ ಉಳಿಯುವ ಅರ್ಥ ಬರುವಂತೆ ಟ್ವೀಟ್ ಮಾಡಿದ ತಕ್ಷಣವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಮೋದಿಯವರೇ ಸಾಮಾಜಿಕ ಜಾಲತಾಣಗಳಿಂದಲ್ಲ, ದ್ವೇಷದಿಂದ ದೂರವಿರಿ ಎಂದು ಹೇಳಿದ್ದರು.

ಮೋದಿಗೆ ಟ್ವಿಟ್ಟರ್ನಲ್ಲಿದ್ದಾರೆ 53.3 ಮಿಲಿಯನ್ ಫಾಲೋವರ್ಸ್
53.3 (ಮಾರ್ಚ್ 3ರವರೆಗೆ) ಮಿಲಿಯನ್, ಅಂದರೆ 5 ಕೋಟಿ 33 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಾಮಾಜಿಕ ಜಾಲತಾಣದಿಂದಲೇ ಜನಪ್ರಿಯತೆಯ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ. 2014ರ ಲೋಕಸಭೆ ಚುನಾವಣೆ ಯುದ್ಧವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕವೇ ಗೆದ್ದಿದ್ದರು ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಮೋದಿ ಕುರಿತು ಶಶಿ ತರೂರ್ ಟ್ವೀಟ್
ಈ ಮಧ್ಯೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಬಿಟ್ಟು ಹೊರನಡೆಯುವ ನಿರ್ಣಯದ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ಪ್ರಧಾನಿ ಅವರ ಈ ನಿರ್ಣಯ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಮುನ್ಸೂಚನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ಹೊರ ಬರುವ ನಿರ್ಣಯ ಕೈಗೊಂಡಿರುವ ಮೋದಿ ಈ ಮೂಲಕ ದೇಶಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications