ಕೇಂದ್ರ ಸಂಪುಟದಲ್ಲಿ ಎಐಎಡಿಎಂಕೆ, ಜೆಡಿಯು ಸಂಸದರಿಗೆ ಸ್ಥಾನ?
ಎನ್ ಡಿಎ ನವ ಸ್ನೇಹಿತರಾದ ಎಐಎಡಿಎಂಕೆ, ಜೆಡಿಯುಗೆ ಕೇಂದ್ರ ಸಂಪುಟದಲ್ಲಿ ಸ್ಥಾನ. ಮುಂದಿನ ಮಹಾ ಚುನಾವಣೆಗಾಗಿ ಈಗಿನಿಂದಲೇ ರಣತಂತ್ರ.
ಚೆನ್ನೈ, ಆಗಸ್ಟ್ 23: ಇತ್ತೀಚೆಗಷ್ಟೇ, ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಎರಡು ವಿರುದ್ಧ ಗುಂಪುಗಳಾದ ಸಿಎಂ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಬಣಗಳು ಪರಸ್ಪರ ಒಂದಾಗಿದ್ದವು. ಆದರೆ, ಇದರ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಶ್ರೀರಕ್ಷೆಯಿದೆ ಎಂದೇ ಎಣಿಸಲಾಗಿತ್ತು. ಈ ಬಗ್ಗೆ ಹಲವಾರು ವರದಿಗಳು ಮಾಧ್ಯಮಗಳಲ್ಲಿ ಬಂದಿದ್ದವಾದರೂ ಈಗ ಅದಕ್ಕೆ ಖಾತ್ರಿ ಲಭಿಸಿದೆ.
ಶೀಘ್ರದಲ್ಲೇ ಕೇಂದ್ರ ಮಂತ್ರಿಮಂಡಲವನ್ನು ವಿಸ್ತರಿಸುವ ಆಲೋಚನೆ ಪ್ರಧಾನಿ ಮೋದಿಯವರಿಗೆ ಇದ್ದು, ಎಐಎಡಿಎಂಕೆ, ಜೆಡಿಯು ಸಂಸದರಿಗೆ ಸಂಪುಟದಲ್ಲಿ ಸ್ಥಾನ ಕೊಡಲು ಅವರು ಮುಂದಾಗಿದ್ದಾರೆಂದು ಬಿಜೆಪಿಯ ಆಪ್ತ ವಲಯ ಹೇಳಿದೆ.

ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆಡಿ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಅವರು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚಿಸಿದ್ದರು. ಆ ಮೂಲಕ, ಅವರು ಬಿಜೆಪಿ ನೇತೃತ್ವದ ಎನ್ ಡಿಎಗೆ ಸೇರ್ಪಡೆಗೊಂಡಿದ್ದಾರೆ. ಇತ್ತ, ದಕ್ಷಿಣದಲ್ಲಿ ಬಿಜೆಪಿ ಸೂಚನೆಯಂತೆ, ಎಐಎಡಿಎಂಕೆ ಪಕ್ಷದ ನಾಯಕರು ಒಂದಾಗುವ ಮೂಲಕ ಅವರೂ ಈಗ ಎನ್ ಡಿಎಗೆ ಜೈ ಎಂದಿದ್ದಾರೆ.
ಹಾಗಾಗಿ, ಈ ಎರಡೂ ಪಕ್ಷಗಳನ್ನು ಬಲಿಷ್ಠಪಡಿಸುವ ಮೂಲಕ ಬಿಹಾರ ಹಾಗೂ ತಮಿಳುನಾಡುಗಳಲ್ಲಿ ತನ್ನ ಅಸ್ವಿತ್ವವನ್ನು ಸ್ಥಾಪಿಸುವ ಹೊಸ ಇರಾದೆಯನ್ನು ಹೊಂದಿರುವ ಬಿಜೆಪಿ, ಆ ಪಕ್ಷಗಳಿಗಾಗಿ ಕೇಂದ್ರದಲ್ಲಿ ಕೆಲ ಸಚಿವ ಸ್ಥಾನಗಳನ್ನು ನೀಡಲು ನಿರ್ಧರಿಸಿದೆ. 2019ರ ಮಹಾ ಚುನಾವಣೆಗಾಗಿ ಇದು ಬಿಜೆಪಿ ಮಾಡುತ್ತಿರುವ ಭರ್ಜರಿ ತಯಾರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.












Click it and Unblock the Notifications