ಚಾಣಕ್ಯ ನಡೆ: 6ಬಾರಿ ಶಾಕ್ ನೀಡಿದ ಮೋದಿ-ಅಮಿತ್ ಶಾ ಜೋಡಿ!
ರಾಷ್ಟ್ರಪತಿ ಹುದ್ದೆಗೆ ರಾಮನಾಥ್ ಕೋವಿಂದ್ ಅವರನ್ನು ತನ್ನ ಅಭ್ಯರ್ಥಿಯೆಂದು ಘೋಷಿಸಿ ಎಲ್ಲರನ್ನೂ ಮೋದಿ-ಶಾ ಜೋಡಿ ಚಕಿತಗೊಳಿಸಿದ್ದಾರೆ. ತಮ್ಮ ಚಾಣಾಕ್ಷ ನಡೆಯಿಂದ ಮೋದಿ, ಶಾ ಜೋಡಿ ಈ ಹಿಂದೆ ಕೂಡಾ ಐದು ಬಾರಿ ಶಾಕ್ ನೀಡಿದ ಉದಾಹರಣೆಗಳಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿ, ವಿರೋಧ ಪಕ್ಷಗಳಿಗೆ ಮತ್ತು ಸ್ವಪಕ್ಷೀಯರಿಗೂ ಶಾಕ್ ನೀಡುವಲ್ಲಿ ನಿಸ್ಸೀಮರು ಎನ್ನುವುದು ಬಹಳಷ್ಟು ಬಾರಿ ರುಜುವಾತಾಗಿದೆ.
ಕಳೆದ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ವೇಳೆ, ಅಭ್ಯರ್ಥಿಗಳ ಮತ್ತು ನಾಯಕತ್ವದ ಆಯ್ಕೆಯ ವಿಚಾರದಲ್ಲಿ ಭರ್ಜರಿ ರಣತಂತ್ರ ರೂಪಿಸಿ, ಮೋದಿ ಮತ್ತು ಶಾ ಜೋಡಿ ಸೈ ಎನಿಸಿಕೊಂಡಿತ್ತು.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಚಾಣಾಕ್ಯ ನಡೆಯಿಟ್ಟ ಮೋದಿ-ಶಾ, ದಲಿತ ಸಮುದಾಯದವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ, ಕೆಲವು ವಿರೋಧ ಪಕ್ಷಗಳೂ ತಮ್ಮ ಅಭ್ಯರ್ಥಿಗೆ ಮತಹಾಕುವ ಅನಿವಾರ್ಯತೆಗೆ ತಂದೊಡ್ಡಿದ್ದಂತೂ ಹೌದು.
ಎಲ್ ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಷ್ಮಾ ಸ್ವರಾಜ್ ಅವರಂತಹ ಘಟಾನುಗಟಿಗಳ ಹೆಸರು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಕೇಳಿಬರುತ್ತಿದ್ದವು.
ಆದರೆ ರಾಮನಾಥ್ ಕೋವಿಂದ್ ಅವರನ್ನು ತನ್ನ ಅಭ್ಯರ್ಥಿಯೆಂದು ಘೋಷಿಸಿ, ಕೆಲವು ಸ್ವಪಕ್ಷೀಯರೂ ಸೇರಿದಂತೆ ವಿರೋಧ ಪಕ್ಷದವರನ್ನು ಮೋದಿ-ಶಾ ಚಕಿತಗೊಳಿಸಿದ್ದಾರೆ. ತನ್ನ ಚಾಣಾಕ್ಷ ನಡೆಯಿಂದ ಮೋದಿ, ಶಾ ಜೋಡಿ ಈ ಹಿಂದೆ ಕೂಡಾ ಐದು ಬಾರಿ ಶಾಕ್ ನೀಡಿದ್ದಾರೆ. ಮುಂದೆ ಓದಿ..
ಉತ್ತರಪ್ರದೇಶದಲ್ಲಿ ಯೋಗಿ
ಉತ್ತರಪ್ರದೇಶದಲ್ಲಿ ಭರ್ಜರಿ ಜಯಭೇರಿ ಬಾರಿಸಿದ ನಂತರ, ಮುಖ್ಯಮಂತ್ರಿಯಾರಾಗಬಹುದು ಎನ್ನುವ ಕುತೂಹಲದಲ್ಲಿ ಎಲ್ಲಾ ಇದ್ದರು. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ರಾಜ್ಯಾಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಸೇರಿದಂತೆ ಬಹಳಷ್ಟು ಹೆಸರು ಕೇಳಿ ಬಂದಿತ್ತು. ಆದರೆ ಮೋದಿ-ಶಾ ಜೋಡಿ, ಪಕ್ಷದ ಫೈರ್ ಬ್ರಾಂಡ್ ಮತ್ತು ಯುವನಾಯಕ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ವಿಜಯ್ ರೂಪಾನಿ ಸಿಎಂ
ಮೋದಿ ಪ್ರಧಾನಮಂತ್ರಿಯಾದ ನಂತರ ಗುಜರಾತ್ ಬಿಜೆಪಿ ಘಟಕ ಒಡೆದ ಮನೆಯಂತಾಗಿತ್ತು. ಆನಂದಿಬೆನ್ ಪಟೇಲ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅತ್ಯುತ್ತಮ ಆಡಳಿತಗಾರ ವಿಜಯ್ ರೂಪಾನಿ ಅವರನ್ನು ಸಿಎಂ ಆಗಿ ನೇಮಿಸಿದ್ದೂ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.
ಮನೋಹರ್ ಖಟ್ಟರ್ ಸಿಎಂ
ಹರ್ಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಸೋಲಾದ ನಂತರ, ಅಲ್ಲಿನ ಪ್ರಭಲ ಜ್ಯಾಟ್ ಸಮುದಾಯದ ಮುಖಂಡರನ್ನು ಸಿಎಂ ಆಗಿ ನೇಮಿಸಬಹುದೆನ್ನುವುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಅನ್ಯ ಸಮುದಾಯದ ಮನೋಹರ್ ಖಟ್ಟರ್ ಅವರನ್ನು ಹರ್ಯಾಣದ ಸಿಎಂ ಆಗಿ ನೇಮಿಸಲಾಯಿತು.
ಸಿಎಂ ಆಗಿ ದೇವೇಂದ್ರ ಫಡ್ನವೀಸ್
ಉತ್ತರಪ್ರದೇಶದ ನಂತರ ಎಲ್ಲಾ ಪಕ್ಷಗಳಿಗೂ ಪ್ರಮುಖವಾಗಿರುವ ಮತ್ತೊಂದು ರಾಜ್ಯ ಮಹಾರಾಷ್ಟ್ರ. ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು. ಬಿಜೆಪಿಯ ಹಿರಿಯ ಮುಖಂಡ ನಿತಿನ್ ಗಡ್ಕರಿ ಅವರ ಹೆಸರು ಮಂಚೂಣಿಯಲ್ಲಿತ್ತು.
ರಘುಬರ್ ದಾಸ್ ಸಿಎಂ
ಜಾರ್ಖಂಡ್ ಅಸೆಂಬ್ಲಿ ಚುನಾವಣೆ ಗೆದ್ದ ನಂತರ ಪಕ್ಷದ ಹಿರಿಯ ಮುಖಂಡ್ ಅರ್ಜುನ್ ಮುಂಡಾ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗುವುದು ಎನ್ನುವುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ರಘುಬರ್ ದಾಸ್ ಅವರನ್ನು ಸಿಎಂ ಆಗಿ ಪ್ರಕಟಿಸಿ ಮೋದಿ-ಶಾ ಜೋಡಿ ಎಲ್ಲರಿಗೂ ಅಚ್ಚರಿ ತಂದಿದ್ದರು.