ವೈದ್ಯರಿಲ್ಲದೆ ಪರದಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಾಸಕ
ಐಜಾಲ್, ಆಗಸ್ಟ್ 11: ಮಿಜೋರಾಂನಲ್ಲಿ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಶಾಸಕರೊಬ್ಬರು ಹಳ್ಳಿಯೊಂದರಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರ ಜೀವ ಉಳಿಸುವ ಮೂಲಕ ಶಾಸಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರು 30 ವರ್ಷ ಗೈನಕಾಲಜಿಸ್ಟ್ ಆಗಿ ಕೆಲಸ ಮಾಡಿದ್ದ ಅನುಭವ ಇರುವ ಮಿಜೋರಾಂನ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಪಕ್ಷದ ಶಾಸಕ ಡಾ. ಝೆಡ್ ಆರ್ ಥಿಯಾಮ್ಸಂಗ, ಭೂಕಂಪ ಪೀಡಿತ ಪ್ರದೇಶಗಳ ವೀಕ್ಷಣೆಯಲ್ಲಿ ತೊಡಗಿದ್ದರು. ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಚಾಂಫೈ ಜಿಲ್ಲೆಯ ನಗುರ್ ಎಂಬ ಕುಗ್ರಾಮದಲ್ಲಿ ಸಿ. ಲಾಲ್ಹಾಂಗೈಹಸಂಗಿ ಎಂಬಾಕೆ ಅತೀವ ಪ್ರಸವ ವೇದನೆ ಮತ್ತು ರಕ್ತಸ್ತಾವಕ್ಕೆ ಒಳಗಾಗಿದ್ದರು. ಆದರೆ ಜಿಲ್ಲಾಸ್ಪತ್ರೆಯ ಏಕೈಕ ವೈದ್ಯರು ಅನಾರೋಗ್ಯ ಸಂಬಂಧ ರಜೆಯಲ್ಲಿದ್ದರು.
ಮಹಿಳೆಯ ಪ್ರಕರಣದ ಕುರಿತು ತಿಳಿದಿ ಥಿಯಾಮ್ಸಂಗ, ಕೂಡಲೇ ಆಸ್ಪತ್ರೆಗೆ ಧಾವಿಸಿದರು. ಆಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಿದ್ದರಿಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಇದೇ ವಿಭಾಗದಲ್ಲಿ ತಜ್ಞರಾಗಿದ್ದ ಅವರು ಪರಿಸ್ಥಿತಿಯನ್ನು ಸಲೀಸಾಗಿ ನಿಭಾಯಿಸಿದರು.

ವೈದ್ಯರಿಲ್ಲದ ಕಾರಣ ಅಲ್ಲಿಂದ ಸುಮಾರು 200 ಕಿ.ಮೀ. ದೂರದ ರಾಜಧಾನಿ ಐಜಾಲ್ಗೆ ಕರೆದೊಯ್ಯಲು ಕುಟುಂಬದವರು ತೀರ್ಮಾನಿಸಿದ್ದರು. ಅದಕ್ಕೆ ಸುಮಾರು 10 ಕಿ.ಮೀ. ವಾಹನ ಚಾಲನೆ ಮಾಡಬೇಕಾಗುತ್ತಿತ್ತು. ಒಂದು ವೇಳೆ ಹಾಗೆ ಹೋಗಿದ್ದರೆ ತಾಯಿ ಮತ್ತು ಮಗು ಇಬ್ಬರೂ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು ಎಂದು ಥಿಯಾಮ್ಸಂಗ ತಿಳಿಸಿದ್ದಾರೆ.
ಶಾಸಕರಾದ ಬಳಿಕವೂ ವೈದ್ಯ ವೃತ್ತಿ ಮರೆಯದ ಅವರು ತಮ್ಮ ಕ್ಷೇತ್ರದ ಹಳ್ಳಿಗಳಲ್ಲಿ ಓಡಾಡುವಾಗ ಸ್ಟೆತಸ್ಕೋಪ್ ಇರಿಸಿಕೊಂಡಿರುತ್ತಾರೆ. ಅನೇಕ ತುರ್ತು ಸಂದರ್ಭಗಳಲ್ಲಿ ಜನರಿಗೆ ಚಿಕಿತ್ಸೆ ನೀಡಿದ್ದಾರೆ.












Click it and Unblock the Notifications