ಭಾರತದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು
ನವದೆಹಲಿ, ನವೆಂಬರ್ 23: ದೇಶದ ರಕ್ಷಣಾ ಕಾರ್ಯಾಚರಣೆ ವೇಳೆ ಹುತಾತ್ಮರಾದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಯೋಧರ ಕುಟುಂಬಗಳಿಗೆ ನೀಡುತ್ತಿದ್ದ ಹಣಕಾಸಿನ ನೆರವಿನ ಪ್ರಮಾಣವನ್ನು ನವೆಂಬರ್ ತಿಂಗಳಿನಿಂದ ಹೆಚ್ಚಿಸಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ. "ಕಾರ್ಯಾಚರಣೆ ಸಂದರ್ಭಗಳಲ್ಲಿ ಹುತಾತ್ಮರಾದ ಎಲ್ಲಾ CAPF ಸಿಬ್ಬಂದಿಗೂ ಏಕಕಾಲಕ್ಕೆ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಕ್ಕೆ ಕೇಂದ್ರ ಗೃಹ ಸಚಿವಾಲಯ ಬಯಸಿದೆ.
ಮೂಲಗಳ ಪ್ರಕಾರ, ಸೇನಾ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಬಹುತೇಕ ಎಲ್ಲಾ ಪಡೆಗಳ ವಾರಸುದಾರರಿಗೆ ನೀಡುವ ಆರ್ಥಿಕ ನೆರವಿನ ಮೊತ್ತವನ್ನು 35 ಲಕ್ಷ ರೂಪಾಯಿಗೆ ಹೆಚ್ಚಿಸುವುದರ ಕುರಿತು ಆದೇಶ ಹೊರಡಿಸಲಾಗಿದೆ. ಈ ಹೊಸ ನಿಯಮವು 2021ರ ನವೆಂಬರ್ 1 ರಿಂದ ಅನ್ವಯವಾಗುತ್ತದೆ. ಇತರ ರೀತಿಯಲ್ಲಿ ಮೃತಪಡುವ ಯೋಧರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿದು ಬಂದಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ ನೇಮಕಾತಿ: 13 ಹುದ್ದೆಗಳಿವೆ
"ಇದು (ನಿಧಿ) ಎನ್ಕೌಂಟರ್ಗಳು, ಗುಂಡಿನ ಚಕಮಕಿಗಳು ಇತ್ಯಾದಿಗಳ ಸಮಯದ ಕಾರ್ಯಾಚರಣೆಗಳಲ್ಲಿ ಕೊಲ್ಲಲ್ಪಟ್ಟ ಯೋಧರಿಗೆ ಮಾತ್ರ ಅನ್ವಯವಾಗುತ್ತದೆ. ಇತರ ಎಲ್ಲಾ ಸನ್ನಿವೇಶಗಳಲ್ಲಿ ಮೃತ ಯೋಧರಿಗೆ ನೀಡುವ ಆರ್ಥಿಕ ನೆರವಿನ ಮೊತ್ತವು ಒಂದೇ ಆಗಿರುತ್ತದೆ. ಇಲ್ಲವೇ ಅದನ್ನು ಡಿಜಿ ನಿರ್ಧರಿಸುತ್ತಾರೆ," ಎಂದು ಹಿರಿಯ BSF ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುತಾತ್ಮ ಯೋಧರ ಆರ್ಥಿಕ ನೆರವಿನಲ್ಲಿ ಏಕರೂಪತೆ:
ಹುತಾತ್ಮರ ಕುಟುಂಬ ಸದಸ್ಯರು ಆರ್ಥಿಕ ನೆರವಿನ ಮೊತ್ತದಲ್ಲಿನ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಪಾವತಿಗಳಲ್ಲಿ ಏಕರೂಪತೆಯನ್ನು ತರಲು ನಿರ್ಧರಿಸಲಾಯಿತು. "ಪಡೆಗಳು ತಮ್ಮ ಹಣಕಾಸಿನ ಯೋಜನೆಗೆ ಅನುಗುಣವಾಗಿ ನಿರ್ಧರಿಸುತ್ತಿದ್ದವು, ಆದರೆ ಅದು ಈಗ ಏಕರೂಪವಾಗಿದೆ" ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲ ಕೇಂದ್ರೀಯ ಪಡೆಗಳಿಗೂ 35 ಲಕ್ಷ ರೂಪಾಯಿ:
ಕೇಂದ್ರೀಯ ಪಡೆಗಳ ಅಪಾಯದ ನಿಧಿಯನ್ನು ತಮ್ಮ ಮಟ್ಟದಲ್ಲಿ ನಿರ್ಧರಿಸಲಾಗುತ್ತದೆ ಎಂದು ಎಡಿಜಿ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದರು. CRPF ಸಿಬ್ಬಂದಿ ಕುಟುಂಬಕ್ಕೆ ಅತಿಹೆಚ್ಚು ಆರ್ಥಿಕ ನೆರವು ನೀಡಲಾಗುತ್ತಿದ್ದು, ಇತರೆ ಯೋಧರ ಕುಟುಂಬಗಳಿಗೆ ನೀಡುವ ಆರ್ಥಿಕ ನೆರವು 40 ರಿಂದ 50ರಷ್ಟು ಕಡಿಮೆಯಾಗಿರುತ್ತಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆ ಇದೀಗ ಎಲ್ಲ ಕೇಂದ್ರೀಯ ಪಡೆಯ ಸಿಬ್ಬಂದಿಗೂ ಸಮಾನ ಅಂದರೆ 35 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನಿಗದಿಪಡಿಸಲಾಗಿದೆ.
ಮೊದಲು ನಿಯಮ ಹೀಗೆ ಇರಲಿಲ್ಲ:
ಭಾರತದಲ್ಲಿ ಈ ಮೊದಲು ಎಲ್ಲಾ ಅರೆಸೇನಾ ಪಡೆಗಳಲ್ಲಿ ಅಪಾಯ ನಿಧಿಗಳ ಪ್ರಮಾಣವು ವಿಭಿನ್ನವಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ, ಈ ಅಪಾಯದ ನಿಧಿಯನ್ನು 21.5 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಅದೇ ರೀತಿ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಾಗಿ ನಿಯೋಜಿಸಲಾದ CISF ಹುತಾತ್ಮರ ಕುಟುಂಬಗಳಿಗೆ 15 ಲಕ್ಷ ರೂಪಾಯಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP), ಭಾರತ-ಚೀನಾ ಗಡಿಯನ್ನು ಕಾವಲು ಕಾಯುತ್ತಿರುವ ಯೋಧರು ಹುತಾತ್ಮರಾದರೆ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಕಳೆದ ಆರು ವರ್ಷಗಳಲ್ಲಿ ಎಲ್ಲಾ ಅರೆಸೇನಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಲ ಸಿಬ್ಬಂದಿಯ ಆರ್ಥಿಕ ನೆರವು ಮೊತ್ತವು ಶೇಕಡಾ 75ರಷ್ಟು ಹೆಚ್ಚಳವಾಗಿದೆ.
ಹುತಾತ್ಮ ಯೋಧರ ಕುಟುಂಬಕ್ಕಾಗಿ ಹಲವು ಯೋಜನೆ:
ಈ ಅಪಾಯದ ನಿಧಿಯ ಹೊರತಾಗಿ, ಹುತಾತ್ಮ ಯೋಧರ ಕುಟುಂಬಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ ಹಿತಚಿಂತಕ ನಿಧಿಗಳು, ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ವಿದ್ಯಾರ್ಥಿವೇತನ, ಮಗಳು ಅಥವಾ ಸಹೋದರಿಯ ಮದುವೆಗಾಗಿ ಆರ್ಥಿಕ ನೆರವಿನಂತಹ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಮೃತ CAPF ಸಿಬ್ಬಂದಿಯ ಸಂಬಂಧಿಕರ ಆನ್ಲೈನ್ ಖಾತೆಗೆ ಸ್ವಯಂಸೇವಕರು ನೇರವಾಗಿ ದೇಣಿಗೆ ನೀಡಲು 'ಭಾರತ್ ಕೀ ವೀರ್' ಅನ್ನು ಸಹ ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, 'ಭಾರತ್ ಕೆ ವೀರ್' ಕಾರ್ಪಸ್ನಲ್ಲಿ ಸ್ವೀಕರಿಸಿದ ಹಣವನ್ನು ಅಂತಹ ಸಿಬ್ಬಂದಿ ವಾರಸುದಾರರಿಗೆ ವಿತರಿಸಲಾಗುತ್ತದೆ.