ಇಡೀ ಮಾಧ್ಯಮ ಮೋದಿ ಹಿಡಿತದಲ್ಲಿದೆ : ರಾಹುಲ್ ವಾಗ್ದಾಳಿ
ಬೆಂಗಳೂರು, ಸೆಪ್ಟೆಂಬರ್ 04 : "ಮಾಧ್ಯಮವನ್ನು ಯಾವುದೇ ರೈತ ಅಥವಾ ಸಣ್ಣ ವ್ಯಾಪಾರಿ ನಡೆಸುವುದಿಲ್ಲ. ಅವನ್ನು ನರೇಂದ್ರ ಮೋದಿಯವರ ನಾಲ್ಕಾರು ಸ್ನೇಹಿತರು ನಡೆಸುತ್ತಿದ್ದಾರೆ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವ್ಯಂಗ್ಯವಾಡಿದ್ದಾರೆ.
ಎಲ್ಲೇ ಹೋದರೂ ಸುಳ್ಳು ಹೇಳುವ ಪ್ರಧಾನಿ ಮೋದಿ: ರಾಹುಲ್ ಆರೋಪ
ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ಸೋಮವಾರ ಮಾತನಾಡುತ್ತಿರುವ ರಾಹುಲ್ ಗಾಂಧಿ ಅವರು, ಬಿಜೆಪಿ ಇಡೀ ಮಾಧ್ಯಮವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮದಲ್ಲಿಯೂ ಹಲವಾರು ಪತ್ರಕರ್ತರು ನರೇಂದ್ರ ಮೋದಿಯವರ ವಿರುದ್ಧ ಬರೆಯಲು ಉತ್ಸುಕರಾಗಿದ್ದಾರೆ. ಆದರೆ, ಈಗ ನಡೆಯುತ್ತಿರುವುದು ಸರ್ವಾಧಿಕಾರ, ಅವರಿಗೆ ಹಾಗೆ ಬರೆಯದಂತೆ ಹೆದರಿಸಲಾಗುತ್ತಿದೆ, ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಅವರು ವ್ಯಾಖ್ಯಾನಿಸಿದರು.
"ಒಂದು ವೇಳೆ ಯಾರಾದರೂ ಕಾಂಗ್ರೆಸ್ಸಿನಲ್ಲೇ ಇದ್ದುಕೊಂಡು, ಕಾಂಗ್ರೆಸ್ಸನ್ನು ಸೋಲಿಸಲು ಯತ್ನಿಸಿದರೆ ಅಂಥವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ನೀಡುವುದಿಲ್ಲ. ಅಲ್ಲದೆ, ಯಾರು ಆರೆಸ್ಸೆಸ್ ಅಥವಾ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾರೋ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು" ಎಂದು ಅವರು ವಾಗ್ದಾನ ನೀಡಿದರು.
ಮೋದಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, ಗುಜರಾತ್ ನಲ್ಲಿ ರೈತರಿಗೆ ನೀಡಿರುವ 36 ಸಾವಿರ ಕೋಟಿ ರುಪಾಯಿ ಸಾಲದ ಎರಡು ಪಟ್ಟು ಸಾಲವನ್ನು ಮೋದಿಯವರು ನ್ಯಾನೋ ಕಾರಿನ ಉತ್ಪಾದನೆಗಾಗಿ ಟಾಟಾ ಕಂಪನಿಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಗ್ರಾಹಕ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಮೋದಿ ಸರಕಾರದ ಮೇಲೆ ಪ್ರಹಾರ ಮಾಡಿದ ರಾಹುಲ್, ಜಿಎಸ್ಟಿಯಲ್ಲಿ ಇಷ್ಟೊಂದು (ನಾಲ್ಕು) ಸ್ಲಾಬ್ ಇಬರಾದೆಂದು ಆಗ್ರಹಿಸಿದ್ದೆವು. ಜಿಎಸ್ಟಿಯಲ್ಲಿ ಶೇ.18ರಷ್ಟು ಮಾತ್ರ ತೆರಿಗೆ ಇರಬೇಕೆಂದೂ ಕೇಳಿದ್ದೆವು. ಆದರೆ ಅವರು ಮಾಡಿದ್ದೇನು ಎಂದು ಪ್ರಶ್ನಿಸಿದರು.