ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಎಲ್ಲ ಐವರು ಆರೋಪಿಗಳ ಖುಲಾಸೆ
ಹೈದರಾಬಾದ್, ಏಪ್ರಿಲ್ 16: ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲ ಐವರು ಆರೋಪಿಗಳನ್ನು ಹೈದರಾಬಾದ್ ವಿಶೇಷ ಎನ್ಐಎ ನ್ಯಾಯಾಲಯ ಖುಲಾಸೆ ಮಾಡಿದೆ.
ಸಾಕ್ಷ್ಯದ ಕೊರತೆಯಿಂದ ತನಿಖಾ ಸಂಸ್ಥೆಯು ಯಾವ ಆರೋಪಿಯೂ ತಪ್ಪಿತಸ್ಥ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
|
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅಸೀಮಾನಂದ
ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಭರತ್ ಮೋಹನ್ಲಾಲ್ ರತೇಶ್ವರ್ ಮತ್ತು ರಾಜೇಂದ್ರ ಚೌಧರಿ ಅವರನ್ನು ಆರೋಪಿಗಳೆಂದು ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು.
ಸ್ವಾಮಿ ಅಸೀಮಾನಂದ ಮತ್ತು ಭರತ್ ಮೋಹನ್ಲಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ, ಉಳಿದ ಮೂವರು ಹೈದರಾಬಾದ್ ಕೇಂದ್ರ ಕಾರಾಗೃಹದಲ್ಲಿದ್ದರು. ಬಲಪಂಥೀಯ ಸಂಘಟನೆಗಳಿಗೆ ಸೇರಿದ ಹತ್ತು ಮಂದಿಯ ವಿರುದ್ಧ ಆರೋಪ ಹೊರಿಸಲಾಗಿತ್ತು.
ಹತ್ಯೆಯಾಗಿರುವ ಮತ್ತೊಬ್ಬ ಆರೋಪಿ
ಇನ್ನಿಬ್ಬರು ಆರೋಪಿಗಳಾದ ರಾಮಚಂದ್ರ ಕಲಸಂಗ್ರ ಮತ್ತು ಸಂದೀಪ್ ದಾಂಗೆ ಇನ್ನೂ ನಾಪತ್ತೆಯಾಗಿದ್ದಾರೆ. ಮತ್ತೊಬ್ಬ ಪ್ರಮುಖ ಆರೋಪಿ, ಆರ್ಎಸ್ಎಸ್ ಕಾರ್ಯಕರ್ತ ಸುನಿಲ್ ಜೋಶಿ ಅವರನ್ನು ಹತ್ಯೆ ಮಾಡಲಾಗಿತ್ತು.

ಗಲಭೆ ನಿಯಂತ್ರಿಸಲು ಗೋಲಿಬಾರ್
2007ರ ಮೇ 18ರಂದು ಹೈದರಾಬಾದ್ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆಗೆ ಪೈಪ್ ಬಾಂಬ್ ಸ್ಫೋಟಗೊಂಡಿತ್ತು. ಇದರಲ್ಲಿ ಒಂಬತ್ತು ಮಂದಿ ಮೃತಪಟ್ಟಿ 58 ಮಂದಿ ಗಾಯಗೊಂಡಿದ್ದರು.
ಬಳಿಕ ಉಂಟಾದ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ಗೆ ಮತ್ತೆ ಐವರು ಬಲಿಯಾಗಿದ್ದರು.

ತನಿಖೆ ಕೈಗೆತ್ತಿಕೊಂಡಿದ್ದ ಎನ್ಐಎ
ಪ್ರಾಥಮಿಕ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿದ ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಸಿಬಿಐ ಚಾರ್ಜ್ಷೀಟ್ ಸಲ್ಲಿಸಿತ್ತು. 2011ರ ಏಪ್ರಿಲ್ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಆರಂಭಿಸಿತ್ತು.
ವಿಚಾರಣೆ ವೇಳೆ 226 ಸಾಕ್ಷಿಗಳನ್ನು ಪ್ರಶ್ನಿಸಲಾಗಿತ್ತು. 411 ದಾಖಲೆಗಳನ್ನು ಸಲ್ಲಿಸಲಾಗಿತ್ತು. ಹಿಂದೂಗಳು ಮತ್ತು ದೇವಸ್ಥಾನಗಳ ಮೇಲಿನ ಉಗ್ರರ ದಾಳಿಯಿಂದ ಆಕ್ರೋಶಗೊಂಡಿದ್ದ ಆರೋಪಿಗಳು, ಮುಸ್ಲಿಮರ ಪ್ರಾರ್ಥನಾ ಸ್ಥಳಗಳು ಮತ್ತು ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಇಂತಹ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದು ಎನ್ಐಎ ಚಾರ್ಜ್ಷೀಟ್ನಲ್ಲಿ ಎನ್ಐಎ ಆರೋಪಿಸಿತ್ತು.

ಸಂಚು ನಿರಾಕರಿಸಿದ ಅಸೀಮಾನಂದ
ಪ್ರಕರಣ ಆರೋಪಿ ಸ್ವಾಮಿ ಅಸೀಮಾನಂದ ದೆಹಲಿಯ ತೀಸ್ ಹಜಾರ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಚಾರ್ಜ್ಷೀಟ್ನಲ್ಲಿ ಉಲ್ಲೇಖಿಸಲಾಗಿತ್ತು. ವಿವಿಧೆಡೆ ನಡೆದ ಬಾಂಬ್ ಸ್ಫೋಟ ಪ್ರಕರಣಗಳ ಸಂಚನ್ನು ಬಹಿರಂಗಪಡಿಸಿದ್ದಾಗಿ ಎನ್ಐಎ ಹೇಳಿತ್ತು. ಆದರೆ ಇದನ್ನು ಅಸೀಮಾನಂದ ನಿರಾಕರಿಸಿದ್ದರು.

ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಖುಲಾಸೆ
ಅಸೀಮಾನಂದ ಅವರನ್ನು ಸಿಬಿಐ 2010ರಲ್ಲಿ ಬಂಧಿಸಿತ್ತು. 2017ರಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಅಜ್ಮೀರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ ಖುಲಾಸೆಯಾಗಿದ್ದರು. 2014ರ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು.












Click it and Unblock the Notifications