ರಾಹುಲ್ ಗಾಂಧಿ ವರ್ತನೆಗೆ ಮಾಯಾವತಿ ಆಕ್ರೋಶ
ಲಕ್ನೋ, ಆಗಸ್ಟ್ 26: ರಾಹುಲ್ ಗಾಂಧಿ ವರ್ತನೆಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ತೆರಳಲು ಅನುಮತಿ ಇಲ್ಲದಿದ್ದರೂ ಕೂಡ ಏಕೆ ಹೋಗಬೇಕಿತ್ತು ಎಂದು ಕಾಂಗ್ರೆಸ್ ನಿಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು , ಜಮ್ಮು ಕಾಶ್ಮೀರಕ್ಕೆ ತೆರಳುವ ಮುನ್ನ ಕಾಂಗ್ರೆಸ್ ನಾಯಕರು ಸ್ವಲ್ಪ ಯೋಚಿಸಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರಿಗೆ ಅವರ ಕೆಲಸವನ್ನು ಅವರು ಮಾಡಿಕೊಂಡು ಹೋಗಲು ಅನುವು ಮಾಡಿಕೊಡಬೇಕು.
Recommended Video
ಸರ್ಕಾರವೇ ಬರಬೇಡಿ ಎಂದು ಹೇಳಿರುವಾಗ ಅಲ್ಲಿಗೆ ಹೋಗುವ ಅಗತ್ಯವೇನಿತ್ತು. ಸುಮಾರು 69 ವರ್ಷಗಳ ಬಳಿಕ ಬದಲಾವಣೆಯಾಗಿದೆ. ವಿಧಿ 370 ರದ್ದು ಮಾಡಿರುವುದರಿಂದ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ ಸಹಜ ಸ್ಥಿತಿಗೆ ಬರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್ ವಿಧಿ 370ಯನ್ನು ಯಾವಾಗಲೂ ಬೆಂಬಲಿಸಲಿಲ್ಲ. ಅವರು ಸಮಾನತೆಗಾಗಿ ಹೋರಾಡಿದವರು. ಇದೇ ಕಾರಣಕ್ಕೆ ಬಿಎಸ್ಪಿ ಕೂಡ ಪರಿಚ್ಛೇದ 370 ರದ್ದತಿಗೆ ಬೆಂಬಲ ಸೂಚಿಸಿತ್ತು.
ಶನಿವಾರ ರಾಹುಲ್ ಗಾಂಧಿ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಏರ್ಪೋರ್ಟ್ನಿಂದ ಅವರನ್ನು ಹೊರಗೆ ಹೋಗಲು ಬಿಡದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅವರು ವಾಪಸ್ ಹೋಗಿದ್ದರು.