ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ
ನವದೆಹಲಿ, ಆಗಸ್ಟ್ 05: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನ ಪರಿಚ್ಛೇದ 370 ರದ್ದುಗೊಳಿಸಲು ಸೇರಿದಂತೆ ಮೋದಿ ಸರ್ಕಾರ ಇಂದು ತೆಗೆದುಕೊಂಡಿರುವ ಐತಿಹಾಸಿಕ ನಿರ್ಣಯಕ್ಕೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದೆ.
ರಾಜ್ಯಸಭೆಯಲ್ಲಿಂದು ಅಮಿತ್ ಶಾ ಅವರು ಕಣಿವೆ ರಾಜ್ಯಕ್ಕೆ ಸಂಬಂಧಿಸಿದ ಮಂಡಿಸಿದ ವಿಧೇಯಕಕ್ಕೆ ಸಂಪೂರ್ಣ ಬೆಂಬಲವನ್ನು ಬಹುಜನ ಸಮಾಜವಾದಿ ಪಕ್ಷ ವ್ಯಕ್ತಪಡಿಸಿದೆ. ಈ ಕುರಿತಂತೆ ಸಂಸತ್ತಿನ ಮೇಲ್ಮನೆಯಲ್ಲಿ ಮಾತನಾಡಿದ ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ, 'ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಈ ವಿಧೇಯಕಕ್ಕೆ ಸಮ್ಮತಿ ಸಿಗಬೇಕಿದೆ. ಸಂವಿಧಾನದ ಪರಿಚ್ಛೇದ 370(3) ರದ್ದು ಹಾಗೂ ಇನ್ನಿತರ ಮಸೂದೆಗಳನ್ನು ರದ್ದುಪಡಿಸುವುದರ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ ಸಾಧ್ಯ ಎಂದಾದರೆ, ನಾವು ವಿರೋಧಿಸುವುದಿಲ್ಲ" ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮಿತ್ರ ಜೆಡಿಯು ಮುಖಂದ ಕೆಸಿ ತ್ಯಾಗಿ ಮಾತನಾಡಿ, " ನಮ್ಮ ಮುಖ್ಯಮತ್ರಿ ನಿತೀಶ್ ಕುಮಾರ್ ಅವರು ಜೆಪಿ ನಾರಾಯಣ, ರಾಮ್ ಮನೋಹರ್ ಲೋಹಿಯಾ ಹಾಗೂ ಜಾರ್ಜ್ ಫರ್ನಾಂಡೀಸ್ ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಾವು ವಿಶೇಷ ಸ್ಥಾನಮಾನ ರದ್ದು ಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವುದಿಲ್ಲ. ಸಂವಿಧಾನದ ಪರಿಚ್ಛೇದ 370 ಹಿಂಪಡೆಯುವುದು ಸರಿಯಲ್ಲ" ಎಂದಿದ್ದಾರೆ.

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ 9, 1947 ರಿಂದ ನವೆಂಬರ್ 26, 1949ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ 26, 1950ರಂದು ಜಾರಿಗೆ ಬಂದಿತು. ಸಂವಿಧಾನದ 370ನೇ ಪರಿಚ್ಛೇದ ಜಾರಿ ಇದ್ದ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಂಡಿತ್ತು. ಜಮ್ಮು ಕಾಶ್ಮೀರದಲ್ಲಿ ಹೊರ ರಾಜ್ಯದ ಯಾರೂ ಆಸ್ತಿ ಹಾಗೂ ಭೂಮಿ ಖರೀದಿಸುವಂತಿಲ್ಲ. ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿತ್ತು.
ಬಿಜು ಜನತಾದಳ ಬೆಂಬಲ: ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಡಿ ಸಂಸದ ಪ್ರಸನ್ನ ಆಚಾರ್ಯ, "ಜಮ್ಮು ಮತ್ತು ಕಾಶ್ಮೀರ ಈಗ ನಿಜವಾಗಿಯೂ ಭಾರತದ ಅಂಗವಾಗಿದೆ. ನನ್ನ ಪಕ್ಷ ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷವಾದರೂ ದೇಶ ಮೊದಲು" ಎಂದಿದ್ದಾರೆ.












Click it and Unblock the Notifications