ಲೋಕಸಭೆಯಲ್ಲಿ ಕಾವೇರಿದ ರಿಪಬ್ಲಿಕ್ ಟಿವಿಯ 'ಬೋಫೋರ್ಸ್' ವರದಿ
ಲೋಕಸಭೆಯಲ್ಲಿ ಬೋಫೋರ್ಸ್ ಗದ್ದಲ. ರಿಪಬ್ಲಿಕ್ ಟಿವಿಯಲ್ಲಿ ಬೋಫೋರ್ಸ್ ದಾಖಲಾತಿಗಳು ಬಹಿರಂಗ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್- ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ.
ನವದೆಹಲಿ, ಜುಲೈ 24: ಬೋಫೋರ್ಸ್ ಹಗರಣದ ಬಗ್ಗೆ ರಿಪಬ್ಲಿಕ್ ಸುದ್ದಿ ವಾಹಿನಿಯು ಇತ್ತೀಚೆಗೆ ನೀಡಿದ ವರದಿಯು ಲೋಕಸಭೆಯ ಸೋಮವಾರದ ಕಲಾಪದಲ್ಲಿ ಭಾರೀ ಕೋಲಾಹಲವನ್ನು ಎಬ್ಬಿಸಿತು.
ರಿಪಬ್ಲಿಕ್ ವಾಹಿನಿಯು ಇತ್ತೀಚೆಗೆ, ಬೋಫೋರ್ಸ್ ಹಗರಣದ ಕೆಲ ದಾಖಲೆಗಳನ್ನು ತನ್ನ ವಾಹಿನಿಯಲ್ಲಿ ಬಹಿರಂಗಗೊಳಿಸಿತ್ತು. ಹಗರಣ ನಡೆದ ಸುಮಾರು ಮೂರು ದಶಕಗಳ ನಂತರ, ಈ ದಾಖಲಾತಿಗಳು ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಮೂಲಕ ಬಹಿರಂಗಗೊಂಡಂತಾದವು.
ಆ ವಿಶೇಷ ವರದಿಯಲ್ಲಿ, ಸ್ವೀಡನ್ ನಲ್ಲಿ ಈ ಹಗರಣದ ತನಿಖೆ ನಡೆಸಿದ್ದ ಅಲ್ಲಿನ ತನಿಖಾಧಿಕಾರಿ ಸ್ಟೆನ್ ಲಿಂಡ್ ಸ್ಟಾರ್ಮ್, ಈ ದಾಖಲೆಗಳು ಇಡೀ ಹಗರಣದ ದಿಕ್ಕು ತಪ್ಪಿಸಿದ್ದ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಶ್ರಮವನ್ನು ಬುಡಮೇಲು ಮಾಡಲಿದೆ ಎಂದು ಹೇಳಿದ್ದರು. ರಿಪಬ್ಲಿಕ್ ವಾಹಿನಿಯ ಈ ವರದಿ ಲೋಕಸಭೆಯಲ್ಲಿ ಗದ್ದಲ ಏರ್ಪಾಡಲು ಕಾರಣವಾಯಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಮೀನಾಕ್ಷಿ ಲೇಖಿ
ಸೋಮವಾರ ಎಂದಿನಂತೆ, ಬೆಳಗ್ಗೆ ಸದನ ಆರಂಭಗೊಳ್ಳುತ್ತಲೇ ಬಿಜೆಪಿಯ ಮೀನಾಕ್ಷಿ ಲೇಖಿ, ಬೋಫೋರ್ಸ್ ವಿಚಾರವನ್ನು ಪ್ರಸ್ತಾಪಿಸಿದರು. ಆಗಲೇ ಕಾಂಗ್ರೆಸ್ಸಿಗರು ಇದು ರಾಜಕೀಯ ಪ್ರೇರಿತ ಎಂದು ಗುಡುಗಿದರು. ಇದಕ್ಕೆ ಉತ್ತರಿಸಿದ ಮೀನಾಕ್ಷಿ, ಬೋಫೋರ್ಸ್ ಭೂತಗಳು ಇನ್ನು ಈ ಸದನವನ್ನು ಕಾಡಲಿವೆ ಎಂದು ಮಾರ್ಮಿಕ ಉತ್ತರ ಕೊಟ್ಟರು. ಇದು ಕಾಂಗ್ರೆಸ್ ಸಂಸದರನ್ನು ಕೆರಳಿಸಿತು. ಅವರು ಮತ್ತಷ್ಟು ಉಗ್ರರಾದರು.

ಸೋನಿಯಾ ವಿರುದ್ಧ ಆರೋಪಕ್ಕೆ ಸಿಟ್ಟು
ಆದರೆ, ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದ ಬಿಜೆಪಿ ಸದಸ್ಯರು, ಸದನದಲ್ಲಿ ಎದ್ದು ನಿಂತು ಬೋಫೋರ್ಸ್, ಬೋಫೋರ್ಸ್ ಎಂದು ಘೋಷಣೆ ಕೂಗಿದರಲ್ಲದೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯರು ಬೋಫೋರ್ಸ್ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ ಒಟ್ಟಾವಿಯೋ ಕ್ವಟ್ರೋಕಿಗೆ ಸಹಾಯ ಮಾಡಿದ್ದನ್ನು ಪ್ರಸ್ತಾಪಿಸಿದರು.

ಮಧ್ಯ ಪ್ರವೇಸಿದ ಮಹಾಜನ್
ತಮ್ಮ ನಾಯಕಿಯ ವಿರುದ್ಧ ಬಿಜೆಪಿ ಸಂಸದರು ಮಾಡಿದ ಆರೋಪಗಳ ವಿರುದ್ಧ ಮತ್ತಷ್ಟು ರೊಚ್ಚಿಗೆದ್ದ ಕಾಂಗ್ರೆಸ್ ಸಂಸದರು, ಲೋಕಸಭೆಯಲ್ಲಿ ತೀವ್ರವಾಗಿ ಗಲಾಟ ಮಾಡಲು ಆರಂಭಿಸಿದರು. ಆಗ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಧ್ಯ ಪ್ರವೇಶಿಸಿ, ಕಾಂಗ್ರೆಸ್ ಸಂಸದರಿಗೆ ಎಚ್ಚರಿಕೆ ಕೊಟ್ಟರು.

ಸ್ಪೀಕರ್ ಸ್ಥಾನಕ್ಕೆ ಅಪಮಾನ
ಸ್ಪೀಕರ್ ಅವರ ಆಣತಿಗೆ ಕಿಮ್ಮತ್ತು ನೀಡದ ಕಾಂಗ್ರೆಸ್ ಸಂಸದರಾದ ಸಿ. ಗಗೋಯ್, ಕೆ. ಸುರೇಶ್, ಅಧಿರಂಜನ್ ಚೌಧರಿ, ರಂಜೀತ್ ರಂಜನ್, ಸುಷ್ಮಾ ದೇವ್ ಹಾಗೂ ಎಂ.ಕೆ. ರಾಘವನ್ ಅವರು ಸ್ಪೀಕರ್ ಮೇಲೆ ತಮ್ಮ ಕೈಯ್ಯಲ್ಲಿದ್ದ ಕೆಲವರು ದಾಖಲೆಗಳನ್ನು ತೂರಿದರು.

ಆರು ಸಂಸದರಿಗೆ ಬಹಿಷ್ಕಾರ
ಇದರಿಂದ, ಸಿಟ್ಟಿಗೆದ್ದ ಸ್ಪೀಕರ್, ಆ ಆರೂ ಸಂಸದರನ್ನು ಸದನದ ಘನತೆಗೆ ಧಕ್ಕೆ ತಂದ ಆಧಾರದ ಮೇರೆಗೆ 377ನೇ ಅಧಿನಿಯಮದ ಪ್ರಕಾರ ಐದು ದಿನಗಳ ಅವಧಿಯವರೆಗೆ ಸಂಸತ್ ಕಲಾಪದಿಂದ ನಿಷೇಧಿಸಿದ್ದಾರೆ.












Click it and Unblock the Notifications