ಧರ್ಮ, ರಾಜಕೀಯದ ಹೆಸರಲ್ಲಿ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ: ಮೋದಿ
ನವದೆಹಲಿ, ಆಗಸ್ಟ್ 27: "ಧರ್ಮ, ರಾಜಕೀಯ, ವೈಯಕ್ತಿಕ ಅಥವಾ ಇನ್ನಾವುದೇ ಹೆಸರಿನಲ್ಲಿ ಹಿಂಸಾಚಾರ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ, " ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಕಟುವಾಗಿ ಹೇಳಿದ್ದಾರೆ.
ಈ ಮೂಲಕ ಹಿಂಸಾಚಾರದಲ್ಲಿ ತೊಡಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬೆಂಬಲಿಗರಿಗೆ ಪ್ರಧಾನಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇಂದು ತಮ್ಮ 35ನೇ ಆವೃತ್ತಿ ಮನ್ ಕಿ ಬಾತ್ ರೇಡಿಯೊ ಭಾಷಣದಲ್ಲಿ ಮಾತನಾಡಿದ ಅವರು, ರಾಮ್ ರಹೀಮ್ ಸಿಂಗ್ ಬಂಧನದ ಹಿನ್ನಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಕಾನೂನು ಕೈಗೆತ್ತಿಕೊಂಡರೆ ಬಿಡುವುದಿಲ್ಲ
"ಹಬ್ಬದ ಸಮಯದಲ್ಲಿ ಹಿಂಸೆಯ ವರದಿಗಳು ಬಂದಾಗ, ಅದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಥವಾ ಹಿಂಸಾಚಾರಕ್ಕಿಳಿಯುವ ಯಾರೇ ಆಗಿರಲಿ ಶಿಕ್ಷೆ ಎದುರಿಸಬೇಕಾಗುತ್ತದೆ," ಎಂದು ಕಟು ಎಚ್ಚರಿಕೆಯನ್ನು ನೀಡಿದ್ದಾರೆ.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಮೆಚ್ಚುಗೆ
"ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು ಗಣೇಶೋತ್ಸವದಂಥ ಹಬ್ಬಗಳನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಇದನ್ನೇ ಮಾದರಿಯಾಗಿಟ್ಟುಕೊಂಡು ಗಾಂಧಿ ಜಯಂತಿಯಲ್ಲೂ ಸ್ವಚ್ಛತೆಗೆ ಒತ್ತು ನೀಡೋಣ. ಸ್ವಚ್ಛ ಭಾರತ್ ಮಿಷನ್ ಆರಂಭವಾಗಿ ಮೂರು ವರ್ಷ ಪೂರ್ಣವಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ 30 ಸಾವಿರ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದರು.
ಪ್ರವಾಹ ಪೀಡಿತ ಗುಜರಾತ್ ನಲ್ಲಿ ಜಮಿಯತ್ ಉಲೆಮಾ ಇ ಹಿಂದ್ ನ ಕಾರ್ಯಕರ್ತರು 22 ಸೇವಸ್ಥಾನ ಮತ್ತು 3 ಮಸೀದಿಗಳನ್ನು ಸ್ವಚ್ಛ ಮಾಡಿದ್ದಾರೆ. ಈ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ಹೇಳಿದರು.

ಆಟವಾಡಲು ಕಂಪ್ಯೂಟರ್ ಬಿಟ್ಟು ಹೊರ ಬನ್ನಿ
ಕಂಪ್ಯೂಟರ್ ನಲ್ಲಿ ಆಟವಾಡಿ ಆದರೆ ಮನೆಯಿಂದ ಹೊರಗೆ ಬಂದು ಮೈದಾನದಲ್ಲಿ ಮೊದಲು ಆಟವಾಡಿ ಎಂದು ಹೇಳಿದ ಪ್ರಧಾನಿ ಫೀಫಾ ಕಿರಿಯರ ಫುಟ್ಬಾಲ್ ವಿಶ್ವಕಪ್ ಆಟವಾಡಲು ಭಾರತಕ್ಕೆ ಬಂದಿರುವ ಆಟಗಾರರಿಗೆ ಸ್ವಾಗತ ಕೋರಿದರು.

ಶಿಕ್ಷಕರ ದಿನಾಚರಣೆಗೆ ಬದಲಾವಣೆಯ ಪಾಠ
ಈ ಶಿಕ್ಷಕರ ದಿನದಂದು ಬದಲಾವಣೆ ಪಾಠವನ್ನು, ಸಶಕ್ತರಾಗಲು ಮತ್ತು ಜೀವನದಲ್ಲಿ ಮುನ್ನಡೆಯಲು ಅಗತ್ಯವಾದ ಶಿಕ್ಷಣವನ್ನು ನೀಡುತ್ತೇವೆ ಎಂದು ಸಂಕಲ್ಪ ತೊಡೋಣ ಎಂದು ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಹೇಳಿದರು.












Click it and Unblock the Notifications