ಗುರುನಾನಕ್ ಜನ್ಮದಿನೋತ್ಸವ: ಪಾಕ್ಗೆ ಮನಮೋಹನ್ ಸಿಂಗ್ ಭೇಟಿ
ನವದೆಹಲಿ, ಅಕ್ಟೋಬರ್ 3: ಗುರುನಾನಕ್ ಅವರ ಜನ್ಮದಿನೋತ್ಸವದ ಆಚರಣೆಯಲ್ಲಿ ಭಾಗವಹಿಸಲು ಸರ್ವಪಕ್ಷ ಸಮೂಹದ ಭಾಗವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ.
ನವೆಂಬರ್ನಲ್ಲಿ ನಡೆಯಲಿರುವ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಆಹ್ವಾನಿಸಿದ್ದರು. ಇದನ್ನು ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಮೂಲಗಳ ಪ್ರಕಾರ ಈ ಆಹ್ವಾನ ಒಪ್ಪಿಕೊಂಡು ಸಿಂಗ್ ಅವರು ಅಲ್ಲಿಗೆ ತೆರಳುತ್ತಿಲ್ಲ. ಭಾರತದಿಂದ ಕರ್ತಾರ್ಪುರದ ಗುರುದ್ವಾರಕ್ಕೆ ನಡೆಯುವ ಸರ್ವಪಕ್ಷ ಜಾಥಾದಲ್ಲಿ ಅವರು ಸೇರಿಕೊಳ್ಳಲಿದ್ದಾರೆ.
ಪಂಜಾಬ್ ಸರ್ಕಾರವು ಗುರುನಾನಕ್ ಜಯಂತಿಯ ಭಾಗವಾಗಿ ಐತಿಹಾಸಿಕ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಕೂಡ ಆಹ್ವಾನಿಸಿದೆ. ಅವರೂ ಅದಕ್ಕೆ ಒಪ್ಪಿಕೊಂಡಿದ್ದಾರೆ.

ಪಂಜಾಬ್ನಿಂದ ಜಾಥಾ
ಮೊದಲ ಸಿಖ್ ಗುರು ಗುರುನಾನಕ್ ಅವರ 550ನೇ ಜನ್ಮದಿನೋತ್ಸವದ ಅಂಗವಾಗಿ ಅ.30ರಿಂದ ನ.3ರವರೆಗೆ ಪಂಜಾಬ್ನಿಂದ ಕರ್ತಾರ್ಪುರ ಗುರುದ್ವಾರಕ್ಕೆ ಜಾಥಾ ತೆರಳಲು ಉದ್ದೇಶಿಸಲಾಗಿದೆ. ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಅನುಮತಿ ನೀಡಬೇಕಿದೆ. ಇದರಲ್ಲಿ ಭಾಗವಹಿಸಲಿರುವ ಮನಮೋಹನ್ ಸಿಂಗ್, ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಮುಖ್ಯ ಸಂಭ್ರಮಾಚರಣೆಯಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಜಾಥಾದ ನೇತೃತ್ವವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಹಿಸಲಿದ್ದಾರೆ.

ಪಾಕ್ಗೆ ಹೋಗುವ ಪ್ರಶ್ನೆಯೇ ಇಲ್ಲ
ಗುರುನಾನಕ್ ಜನ್ಮದಿನೋತ್ಸವ ಮತ್ತು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಪಾಕಿಸ್ತಾನದ ಆಹ್ವಾನದ ಸಂಬಂಧ ನವದೆಹಲಿಯಲ್ಲಿ ಮನಮೋಹನ್ ಸಿಂಗ್ ಮತ್ತು ಅಮರಿಂದರ್ ಸಿಂಗ್ ಗುರುವಾರ ಚರ್ಚಿಸಿದರು.
ಬಳಿಕ ಮಾತನಾಡಿದ ಅಮರಿಂದರ್ ಸಿಂಗ್, 'ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಸಮಾರಂಭಕ್ಕಾಗಿ ನಾನು ಪಾಕಿಸ್ತಾನಕ್ಕೆ ತೆರಳುವ ಪ್ರಶ್ನೆಯೇ ಇಲ್ಲ. ಮನಮೋಹನ್ ಸಿಂಗ್ ಕೂಡ ಹೋಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ' ಎಂದು ಹೇಳಿದರು.

ಕಾರಿಡಾರ್ ಉದ್ಘಾಟನೆಗೆ ಹೋಗುವುದಿಲ್ಲ
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಆಯೋಜಿಸಿರುವ ನ. 9ರಂದು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಸಮಾರಂಭಕ್ಕೆ ಭಾರತದ ನಿಯೋಗ ತೆರಳುತ್ತಿಲ್ಲ. ಪಾಕಿಸ್ತಾನದಲ್ಲಿರುವ ನಂಕನಾ ಸಾಹಿಬ್ಗೆ ಭೇಟಿ ನೀಡಲು ಪಾಕ್ ವೀಸಾದ ಅಗತ್ಯವಿಲ್ಲ. ಇಲ್ಲಿಂದ ಹೊರಡುವ ಜಾಥಾವು ಅಲ್ಲಿ ಕೇಂದ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದೆ. ಪಾಕಿಸ್ತಾನ ಆಯೋಜಿಸಿರುವ ಕಾರ್ಯಕ್ರಮಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಮರಿಂದರ್ ತಿಳಿಸಿದರು.

ಮನಮೋಹನ್ ಜನಿಸಿದ್ದ ಪ್ರದೇಶ
ಮನಮೋಹನ್ ಸಿಂಗ್ ಅವರು ಪಾಕಿಸ್ತಾನವು ನೀಡಿರುವ ಆಹ್ವಾನವನ್ನು ಒಪ್ಪಿಕೊಂಡಿರುವ ಅಥವಾ ನಿರಾಕರಿಸಿರುವ ಕುರಿತು ಅಧಿಕೃತ ಮಾಹಿತಿ ದೊರಕಿಲ್ಲ.
ಮನಮೋಹನ್ ಸಿಂಗ್ ಅವರು ಜನಿಸಿದ ಪಂಜಾಬ್ನ ಗಾಹ್ ಗ್ರಾಮವು ಈಗ ಪಾಕಿಸ್ತಾನಕ್ಕೆ ಸೇರಿದೆ. ಹತ್ತು ವರ್ಷಗಳಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೂಡ ಅವರು ಅಲ್ಲಿಗೆ ಭೇಟಿ ನೀಡಿರಲಿಲ್ಲ.












Click it and Unblock the Notifications