ಅಪನಗದೀಕರಣದಿಂದ ಚೀನಾ ವಸ್ತುಗಳ ಆಮದು ಹೆಚ್ಚಳ: ಮನಮೋಹನ್ ಸಿಂಗ್
ಅಹಮದಾಬಾದ್, ನವೆಂಬರ್ 7: ಅಪನಗದೀಕರಣಕ್ಕೆ ಒಂದು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಹಾಗೂ ಹಿರಿಯ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪನಗದೀಕರಣದಿಂದ ದೇಶದಲ್ಲಾಗಿದ್ದು ಆರ್ಥಿಕ ಸ್ವಚ್ಛತಾ ಅಭಿಯಾನ!
ದುರಂತಕಾರಿ ಯೋಜನೆ ಜಾರಿಯಿಂದ ಭಾರತದ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಇದರಿಂದ ಚೀನಾ ಆರ್ಥಿಕತೆಗೆ ಲಾಭವಾಗಿದೆ. 2017-18ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆಮದಿನಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
"2016-17 ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಚೀನಾದಿಂದ 1.96 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದೆ. 2017-18ರಲ್ಲಿ ಈ ಪಾಲು 2.41 ಲಕ್ಷ ಕೋಟಿಗೆ ಏರಿಕೆಯಾಗಿದೆ," ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಜಿಎಸ್ಟಿ ಮತ್ತು ಅಪನಗದೀಕರಣ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಡೆತ ನೀಡಿದೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!
ಗುಜರಾತ್ ನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಸಿಂಗ್ ಮಾತನಾಡಿದರು. ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದೆ.
ಅಸಂಘಟಿತ ಆರ್ಥಿಕ ವಲಯದ ಮೇಲೆ ಅಪನಗದೀಕರಣ ಬೀರಿದ ಪರಿಣಾಮಗಳನ್ನು ಜಿಡಿಪಿಯಲ್ಲಿ ಹಿಡಿದಿಡಲು ಸಾಧ್ಯವಾಗಿಲ್ಲ. ಅಸಂಘಟಿತ ವಲಯದ ಮೇಳೆ ಅಪನಗದೀಕರಣ ಭಾರೀ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಅವರು ಅಪನಗದೀಕರಣವನ್ನು 'ಸಂಘಟಿತ ಲೂಟಿ' ಎಂದು ಪುನರುಚ್ಚರಿಸಿದ್ದಾರೆ. ಜತೆಗೆ ಬುಲೆಟ್ ರೈಲು ಯೋಜನೆಯ ಬದಲು ಸ್ಪೀಡ್ ರೈಲು ಯೋಜನೆ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬಹುದಾಗಿತ್ತು ಎಂದಿದ್ದಾರೆ.