Manipur violence: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ದೇಶ ನಾಚಿಕೆಪಡುವಂತಾಗಿದೆ ಎಂದ ಪ್ರಧಾನಿ ಮೋದಿ
ನವದೆಹಲಿ, ಜುಲೈ 20: ಮಣಿಪುರದಲ್ಲಿ ( Manipur ) ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ವರ್ತಿಸಿದ ವಿಡಿಯೊ ವೈರಲ್ ಆಗಿದೆ. ಈ ಘಟನೆಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ( PM Modi ) ಅವರು ಗುರುವಾರ ಮಣಿಪುರ ಹಿಂಸಾಚಾರದ ( Manipur violence ) ಬಗ್ಗೆ ಮಾತನಾಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಮಾಧ್ಯಮಗೋಷ್ಠಿ ಮಾಡಿರುವ ಪ್ರಧಾನಿ ಮೋದಿ, 'ಈ ಘಟನೆಯಿಂದ ನನಗೆ ನೋವಾಗಿದೆ' ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿಗೆ ಬರುವ ಮೊದಲು, ನನ್ನ ಹೃದಯ ನೋವು ಮತ್ತು ಆಕ್ರೋಶದಿಂದ ತುಂಬಿಹೋಗಿದೆ ಎಂದು ಅವರು ತಿಳಿಸಿದ್ದಾರೆ.
'ಮಣಿಪುರದಲ್ಲಿ ನಡೆದಿರುವ ಅಮಾನವೀಯ ಘಟನೆಯು ಯಾವುದೇ ನಾಗರಿಕತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಂದು ದೇಶ ನಾಚಿಕೆಪಡುವಂತಾಗಿದೆ. ಮಹಿಳೆಯರ ವಿರುದ್ಧ ಅಪರಾಧ ನಡೆದಿರುವುದು ಘೋರ ಕೃತ್ಯವಾಗಿದೆ. ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳನ್ನು ಬಲಪಡಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಘಟನೆಯು ರಾಜಸ್ಥಾನ, ಛತ್ತೀಸ್ಗಢ ಅಥವಾ ಮಣಿಪುರ ಸೇರಿದಂತೆ ಎಲ್ಲಿ ಬೇಕಾದರೂ ನಡೆದಿರಬಹುದು. ಈ ದೇಶದಲ್ಲಿ ಅಪರಾಧಿಗಳು ಮುಕ್ತವಾಗಿ ಓಡಾಡಬಾರದು. ದೇಶದ ಯಾವುದೇ ಮೂಲೆಯಲ್ಲಿಯೂ ಅವರನ್ನು ಸುಮ್ಮನೇ ಅಡಗಿಕೊಳ್ಳಲು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಯಾವುದೇ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ನಾನು ನನ್ನ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಮಣಿಪುರದ ಹೆಣ್ಣುಮಕ್ಕಳ ಮೇಲೆ ಆಗಿರುವುದನ್ನು ಎಂದಿಗೂ ಕ್ಷಮಿಸಲಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ: ಕಾಂಗ್ರೆಸ್
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಮಣಿಪುರದ ಹಿಂಸಾಚಾರದ ಕುರಿತು ಸರ್ಕಾರದಿಂದ ಉತ್ತರವನ್ನು ಕೋರಿ ವಿರೋಧ ಪಕ್ಷಗಳು ಒತ್ತಾಯಿಸಲಿವೆ.
ಪ್ರಧಾನಿ ಮೋದಿಗೆ ಎನ್ಡಿಎ ಸಭೆ ಕರೆಯಲು ಸಮಯವಿದೆ ಆದರೆ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ, ನಿಮ್ಮ ಸರ್ಕಾರಕ್ಕೆ ಯಾವುದೇ ಆತ್ಮಸಾಕ್ಷಿ ಅಥವಾ ನಾಚಿಕೆ ಉಳಿದಿಲ್ಲ. ನೀವು ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಮಾತನಾಡಬೇಕು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಇರುವ ನಿಮ್ಮ ದ್ವಂದ್ವ ನಿಲುವುಗಳಿಂದ ಮಣಿಪುರದಲ್ಲಿ ಹೀಗೆ ನಡೆಯುತ್ತಿದೆ. ನಿಮ್ಮದು ಅಸಮರ್ಥ ಸರ್ಕಾರ ಎಂದು ಖರ್ಗೆ ತಿಳಿಸಿದ್ದಾರೆ.
ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದೇನು?
ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರು ವೈರಲ್ ವಿಡಿಯೊ ಕುರಿತು ಮಾತನಾಡಿದ್ದಾರೆ. 'ನಾವು ವಿಡಿಯೊವನ್ನು ನೋಡಿದ್ದೇವೆ. ಈ ಕುರಿತು ನನಗೆ ತುಂಬಾ ಬೇಸರವಾಗಿದೆ. ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ನಾನು ತಕ್ಷಣ ತಪ್ಪಿತಸ್ಥರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದೇನೆ. ಆರೋಪಿಗಳಿಗೆ ಮರಣದಂಡನೆ ವಿಧಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತದೆ. ಇದನ್ನು ಪ್ರತಿಯೊಬ್ಬ ಮನುಷ್ಯನು ಖಂಡಿಸಬೇಕು' ಎಂದು ಹೇಳಿದ್ದಾರೆ.












Click it and Unblock the Notifications