Manipur violence: 55 ಸಾವು, 23,000 ನಾಗರಿಕರ ರಕ್ಷಣೆ, ವೈಮಾನಿಕ ಕಣ್ಗಾವಲು- ಟಾಪ್ ಅಪ್ಡೇಟ್ಸ್
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿದಿದೆ. ಇದನ್ನು ಹತ್ತಿಕ್ಕಲು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸತತ ಪ್ರಯತ್ನ ಮಾಡುತ್ತಿದೆ. ಈ ವರೆಗೆ 23,000 ಕ್ಕೂ ಹೆಚ್ಚು ನಾಗರಿಕರನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಯ ನೆಲೆಗಳು ಮತ್ತು ಮಿಲಿಟರಿ ಗ್ಯಾರಿಸನ್ಗಳಿಗೆ ಈ ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಸೇನೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಯಾವುದೇ ಹಿಂಸಾಚಾರದ ಘಟನೆಗಳು ವರದಿಯಾಗಿಲ್ಲ ಮತ್ತು ಕರ್ಫ್ಯೂ ಸಮಯವನ್ನು ಬೆಳಿಗ್ಗೆ 7 ರಿಂದ 10 ರ ವರೆಗೆ ಸಡಿಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

'ಎಲ್ಲಾ ಸಮುದಾಯಗಳ ನಾಗರಿಕರನ್ನು ರಕ್ಷಿಸಲು, ಹಿಂಸಾಚಾರವನ್ನು ನಿಗ್ರಹಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಕಳೆದ 96 ಗಂಟೆಗಳ ಕಾಲ ದಣಿವರಿಯಿಲ್ಲದೆ ಭಾರತೀಯ ಸೈನ್ಯ ಹಾಗೂ ಅಸ್ಸಾಂ ರೈಫಲ್ಸ್ ಪ್ರಯತ್ನಿಸುತ್ತಿವೆ. ಭರವಸೆಯ ಆಶಾಕಿರಣವು ಹೊರಹೊಮ್ಮಿದೆ. ಯಾವುದೇ ದೊಡ್ಡ ಹಿಂಸಾಚಾರ ವರದಿಯಾಗಿಲ್ಲ. ಕರ್ಫ್ಯೂ ಅನ್ನು ಸಡಿಲಿಸಲಾಗಿದೆ. ಇಂದು ಬೆಳಗ್ಗೆ 7 ರಿಂದ 10 ರ ವರೆಗೆ ಚುರಾಚಂದ್ಪುರದಲ್ಲಿ ಭದ್ರತಾ ಪಡೆಗಳ ಧ್ವಜ ಮೆರವಣಿಗೆ ಮಾಡಲಾಯಿತು' ಎಂದು ಸೇನೆ ಹೇಳಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ, ಮಣಿಪುರದಲ್ಲಿ ವೈಮಾನಿಕ ವಿಧಾನಗಳನ್ನು ಬಳಸಿಕೊಂಡು ಕಣ್ಗಾವಲು ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇಂಫಾಲ್ ಕಣಿವೆಯಲ್ಲಿ ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಮತ್ತು ಸೇನಾ ಹೆಲಿಕಾಪ್ಟರ್ಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಬುಧವಾರದಿಂದ, ಒಟ್ಟು ರಾಜ್ಯದ ಜನಸಂಖ್ಯೆಯ ಶೇಕಡಾ 53 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇಂಫಾಲ್ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಪ್ರಬಲ ಸಮುದಾಯವಾದ ಮೈಟೈಸ್ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಾದ ಕುಕಿಗಳ ನಡುವೆ ಘರ್ಷಣೆಗಳು ನಡೆದಿದ್ದವು. ಮೈಟೈಸ್ ಅನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಯುತ್ತಿದೆ.
ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ನಂತರದ ಸಾವಿನ ಸಂಖ್ಯೆ ಕನಿಷ್ಠ 55 ಕ್ಕೆ ಏರಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
'ಮಣಿಪುರದ ಹಿಂಸಾಚಾರ ಮುಂದುವರಿದಿದೆ. ನಮಗೆ ಭರವಸೆ ನೀಡಲಾಗಿದ್ದ ಉತ್ತಮ ಆಡಳಿತಕ್ಕೆ ಏನಾಯಿತು ಎಂದು ಎಲ್ಲಾ ಭಾರತೀಯರು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಮಣಿಪುರದ ಮತದಾರರು ತಮ್ಮ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೇವಲ ಒಂದು ವರ್ಷದ ನಂತರ ಘೋರ ದ್ರೋಹವನ್ನು ಅನುಭವಿಸುತ್ತಿದ್ದಾರೆ. ಇದು ರಾಷ್ಟ್ರಪತಿ ಆಳ್ವಿಕೆಯ ಸಮಯ. ಅವರು ಆಯ್ಕೆಯಾದ ಬಳಿಕ ಕೆಲಸವನ್ನು ಮಾಡಲು ರಾಜ್ಯ ಸರ್ಕಾರವು ಸಿದ್ಧವಾಗಿಲ್ಲ' ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಮಣಿಪುರದಿಂದ ತಪ್ಪಿಸಿಕೊಂಡು ಕ್ಯಾಚಾರ್ ಸೇರಿದಂತೆ ಅಸ್ಸಾಂನ ಗಡಿ ಪ್ರದೇಶಗಳಿಗೆ ಪಲಾಯನ ಮಾಡಿದವರ ಸಂಖ್ಯೆ ಶನಿವಾರ ಕನಿಷ್ಠ 1,500 ಕ್ಕೆ ಏರಿದೆ. ಅಸ್ಸಾಂ ಸರ್ಕಾರವು ಎಂಟು ಶಿಬಿರಗಳನ್ನು ಸ್ಥಾಪಿಸಿದೆ ಮತ್ತು ಶಾಂತಿ ಸಮಿತಿಯನ್ನು ಸ್ಥಾಪಿಸಲಾಗಿದೆ.












Click it and Unblock the Notifications