ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣ, ಸಿಬಿಐಗೆ ಸುಪ್ರೀಂ ತಪರಾಕಿ
ನವದೆಹಲಿ, ಜನವರಿ 16: ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ತನಿಖಾ ಸಂಸ್ಥೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಮಣಿಪುರದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಥೊನೊಜಮ್ ಹೆರೊಜಿತ್ ಸಿಂಗ್ ಅವರು ಕೋರ್ಟಿನ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಬಳಿಕ, ಸುಮಾರು 42 ಪ್ರಕರಣಗಳ ಬಗ್ಗೆ ಮತ್ತೆ ಬೆಳಕು ಬಿದ್ದಿದೆ. 2003ರಿಂದ 2009ರ ಅವಧಿಯ ಸರಿ ಸುಮಾರು 42ಕ್ಕೂ ಅಧಿಕ ನಕಲಿ ಎನ್ ಕೌಂಟರ್ ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಿಸಲಿಲ್ಲ.
ಎನ್ ಕೌಂಟರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಹೆರೊಜಿತ್ ಸಿಂಗ್ ಅವರು ಈ ಅವಧಿಯಲ್ಲಿ ನಡೆದ ಅನೇಕ ನಕಲಿ ಎನ್ ಕೌಂಟರ್ ಪ್ರಕರಣಗಳಿಗೆ ಸಾಕ್ಷಿಯಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಜನವರಿ31ರೊಳಗೆ 30 ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಿಸುವಂತೆ ವಿಶೇಷ ತನಿಖಾ ದಳ(ಎಸ್ ಐಟಿ) ಕ್ಕೆ ಸೂಚನೆ ನೀಡಿದೆ.
ಜಸ್ಟೀಸ್ ಮದನ್ ಬಿ ಲೊಕುರ್, ಯುಯುಲಲಿತ್ ಅವರಿದ್ದ ನ್ಯಾಯಪೀಠವು ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿದೆ. 2016ರ ಜನವರಿಯಲ್ಲಿ ಕರ್ತವ್ಯದಿಂದ ಅಮಾನತುಗೊಂಡ ಹೆರೋಜಿತ್ ಅವರ ಹೇಳಿಕೆ ಪ್ರಕರಣ 12 ಕೇಸ್ ಗಳಲ್ಲಿ ಮಾತ್ರ ಎಫ್ ಐಆರ್ ಹಾಕಲಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಶರಣಾಗತನಾದ ಉಗ್ರ ಚುಂಗ್ ಖಮ್ ಸಂಜಿತ್ ನನ್ನು ಗುಂಡಿಕ್ಕಿ ಕೊಂದೆ ಎಂದು ಹೇಳಿದ್ದಾರೆ.
ಸಶಸ್ತ್ರ ಬಲಗಳ ಕಾಯ್ದೆ AFSPA ಗೆ ಇರುವ ಬಲವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಚುನಾವಣಾ ಆಯುಕ್ತ ಜೆಎಂ ಲಿಂಗ್ಡೋ, ಮಾಜಿ ಐಪಿಎಸ್ ಅಧಿಕಾರಿ ಎಕೆ ಸಿಂಗ್ ಅವರಿರುವ ಆಯೋಗ ವರದಿ ನೀಡಿದೆ.