ಶಿವಸೇನೆ ವಿವಾದ: ಡಿ.12ಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ವಿಚಾರಣೆ
ಮುಂಬೈ, ನವೆಂಬರ್ 29: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಡುವಿನ ಬಣಗಳ ಗುದ್ದಾಟ ಮುಂದುವರಿದಿದೆ. ಈ ಸಂಬಂಧ ಮೊದಲ ವಿಚಾರಣೆಯನ್ನು ಡಿಸೆಂಬರ್ 12ರಂದು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ತಿಳಿಸಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ನವೆಂಬರ್ 23ರೊಳಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿಯಂತ್ರಿಸಲು ತಮ್ಮ ಹಕ್ಕುಗಳನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವ ನವೆಂಬರ್ 12 ರಂದು ಎರಡೂ ಕಡೆಯವರನ್ನು ಕೇಳಿತ್ತು.
3 ಹೊಸ ಚುನಾವಣಾ ಚಿಹ್ನೆಗಳ ಪಟ್ಟಿ ಸಲ್ಲಿಸಲು ಏಕನಾಥ ಶಿಂಧೆ ಬಣಕ್ಕೆ ಸೂಚನೆ
ಈ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿರುವ ಆಯೋಗವು ಯಾವುದೇ ಹೆಚ್ಚಿನ ಹೇಳಿಕೆಗಳು ಅಥವಾ ದಾಖಲೆಗಳನ್ನು ಸಲ್ಲಿಸಲು ಎರಡೂ ಬಣದ ನಾಯಕರಿಗೆ ಡಿಸೆಂಬರ್ 9ರ ಸಂಜೆ 5 ಗಂಟೆವರೆಗೂ ಅವಕಾಶ ನೀಡುವುದಾಗಿ ನಿರ್ದೇಶಿಸಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ಬಣಕ್ಕೆ ಚಿಹ್ನೆ ಮತ್ತು ಪಕ್ಷದ ಹೆಸರು:
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣವು ಚುನಾವಣಾ ಆಯೋಗದಿಂದ ಚುನಾವಣಾ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಪಡೆದುಕೊಂಡಿತ್ತು. ಉದ್ಧವ್ ಠಾಕ್ರೆ ಅವರ ಪಕ್ಷದ ಹೆಸರು 'ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ', ಆದರೆ ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಅವರ ಪಕ್ಷಕ್ಕೆ 'ಮಶಾಲ್' ಚುನಾವಣಾ ಚಿಹ್ನೆಯಾಗಿ ನೀಡಲು ಈ ಹಿಂದೆ ನಿರ್ಧರಿಸಿತ್ತು. ಇದರೊಂದಿಗೆ ಅಕ್ಟೋಬರ್ 11 ರೊಳಗೆ 3 ಹೊಸ ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಶಿಂಧೆ ಬಣಕ್ಕೆ ತಿಳಿಸಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಬಾಳಾಸಾಹೇಬ ಶಿವಸೇನೆ (ಬಾಳಾಸಾಹೇಬನ ಶಿವಸೇನೆ) ಎಂದು ಕರೆಯಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು.
ಗುಜರಾತ್ ಚುನಾವಣೆಯಲ್ಲಿ ಪಾಸ್ವಾನ್ ಬ್ಯುಸಿ:
ಇದರ ಮಧ್ಯೆ, ಮಂಗಳವಾರ ನಡೆಯಬೇಕಿದ್ದ ಚಿರಾಗ್ ಪಾಸ್ವಾನ್ ಮತ್ತು ಕೇಂದ್ರ ಸಚಿವ ಪಶುಪತಿ ಕುಮಾರ್ ಪರಸ್ ನೇತೃತ್ವದ ಲೋಕ ಜನಶಕ್ತಿ ಪಕ್ಷದ ಎರಡು ಬಣಗಳ ನಡುವಿನ ವಿವಾದದ ವಿಚಾರಣೆಯನ್ನು ಚುನಾವಣಾ ಆಯೋಗವು ಮುಂದೂಡಿದೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರತರಾಗಿರುವ ಕಾರಣ ಪಾಸ್ವಾನ್ ಈ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.