ಅಂಗವಿಕಲರ ಕಲ್ಯಾಣ ಇಲಾಖೆ ಹೊಂದಿದ ಮೊದಲ ರಾಜ್ಯ ಮಹಾರಾಷ್ಟ್ರ
ಮುಂಬೈ, ಡಿಸೆಂಬರ್ 4: ಮಹಾರಾಷ್ಟ್ರವು ಅಂಗವಿಕಲರ ಕಲ್ಯಾಣಕ್ಕಾಗಿ ಇಲಾಖೆಯನ್ನು ಆರಂಭಿಸಿದ್ದು, ಅದನ್ನು ದಿವ್ಯಾಂಗ್ ಕಲ್ಯಾಣ ಇಲಾಖೆ ಎಂದು ಕರೆಯಲಾಗಿದೆ.
ಅಂಗವಿಕಲರ ಕಲ್ಯಾಣಕ್ಕಾಗಿ ಸ್ವತಂತ್ರ ಇಲಾಖೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ದಿವ್ಯಾಂಗ ಕಲ್ಯಾಣ ಇಲಾಖೆ ಆರಂಭದೊಂದಿಗೆ ಹಲವು ಪ್ರಶ್ನೆಗಳಿಗೆ ಒಂದೇ ಕಡೆ ಪರಿಹಾರ ದೊರೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವು ಅಂಗವಿಕಲರ ಕೆಲಸ ಸುಗಮಗೊಳಿಸುವುದಕ್ಕಾಗಿ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಮುಂಬೈನ ಪ್ರಹಾರ್ ಕ್ರಾಂತಿ ಸಂಘಟನೆಯ ಅಧ್ಯಕ್ಷ ಬಿ ಕೇನ್ ತಿಳಿಸಿದ್ದಾರೆ.
ದಿವ್ಯಾಂಗರಿಗೆ 5.86 ಲಕ್ಷ ಯುಡಿಐಡಿ ವಿತರಣೆಯಲ್ಲಿ ಕರ್ನಾಟಕ ಸಾಧನೆ
ಇಲ್ಲಿಯವರೆಗೆ ಅಂಗವಿಕಲರು ತಮ್ಮ ಕೆಲಸ ಕಾರ್ಯಗಳಿಗೆ ಕೆಲವೊಮ್ಮೆ ನಗರಾಭಿವೃದ್ಧಿ ಸಚಿವಾಲಯ, ಕೆಲವೊಮ್ಮೆ ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಚಿವಾಲಯ ಉದ್ಯೋಗ, ಪುನರ್ವಸತಿ ಇತ್ಯಾದಿಗಳ ಸಮಸ್ಯೆಗಳಿಗೆ ಓಡಬೇಕಾಗಿತ್ತು. ಈಗ ದಿವ್ಯಾಂಗ ಕಲ್ಯಾಣ ಇಲಾಖೆಯೊಂದಿಗೆ ಅವರಿಗೆ ಒಂದೇ ಸ್ಥಳದಲ್ಲಿ ಎಲ್ಲ ಸೌಲಭ್ಯವು ಸಿಗುತ್ತದೆ ಎಂದು ಕೇನ್ ಹೇಳಿದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ವಿಕಲಚೇತನರ ಕಲ್ಯಾಣಕ್ಕಾಗಿ ಸ್ವತಂತ್ರ ಇಲಾಖೆಯನ್ನು ಸ್ಥಾಪಿಸುವ ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವಿಕಲಚೇತನರ ಅಂತಾರಾಷ್ಟ್ರೀಯ ದಿನದ ದಿನದಂದು ರಾಜ್ಯದಲ್ಲಿ ಸ್ವತಂತ್ರ ದಿವ್ಯಾಂಗ ಕಲ್ಯಾಣ ಇಲಾಖೆಯನ್ನು ಘೋಷಿಸಲಾಯಿತು. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಇಲಾಖೆ ಮೂಲಕ ವಿಕಲಚೇತನ ಬಂಧುಗಳು ವರ್ಷಗಟ್ಟಲೇ ನೀಡಿದ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲಾಗಿದೆ ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ.
ಏಕನಾಥ್ ಶಿಂಧೆ ಸೇರಿದಂತೆ ಹಲವಾರು ಶಿವಸೇನಾ ಶಾಸಕರು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದು ಮಾಜಿ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ಸೇರಿ ಜೂನ್ 30ರಂದು ತಮ್ಮದೆ ಸಮ್ಮಿಶ್ರ ಸರ್ಕಾರ ರಚಿಸಿದ್ದರು.