ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಲ್ಲೇ ಭುಗಿಲೆದ್ದ ಅಸಮಾಧಾನ!
ನವದೆಹಲಿ, ನವೆಂಬರ್ 30: "ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದ್ಕೊಂಡ್ರಾ? ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ. ಕಾಂಗ್ರೆಸ್ ಪಕ್ಷದ ಭವಿಷಯಕ್ಕಾಗಿ ನಮ್ಮ ಯೋಜನೆ ಏನು ಎಂಬುದನ್ನು ಮುಕ್ತವಾಗಿ ಮಾತನಾಡೋಣ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹ್ಜಾದ್ ಪೂನವಾಲಾ, ರಾಹುಲ್ ಗಾಂಧಿಯವರಿಗೆ ನೇರ ಸವಾಲೆಸೆದಿದ್ದಾರೆ.
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!
ಡಿಸೆಂಬರ್ 4 ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನೇ ಕಾಂಗ್ರೆಸ್ ಪಕ್ಷ ಅವಿರೋಧವಾಗಿ ಆಯ್ಕೆ ಮಾಡುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯವರನ್ನು ಆರಿಸುತ್ತಿರುವ ಕಾಂಗ್ರೆಸ್ ನ ಕ್ರಮ ಹಲವು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲದಿದ್ದರೂ, ಹೈಕಮಾಂಡ್ ವಿರುದ್ಧ ಸೆಡ್ಡುಹೊಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಾಯಿಮುಚ್ಚಿಕೊಂಡು ಸುಮ್ಮನಿದ್ದಾರೆ. ಆದರೆ ಪೂನಾವಾಲಾ ಅವರು ಮಾತ್ರ ಬಹಿರಂಗವಾಗಿ ಇದನ್ನು ಖಂಡಿಸಿದ್ದಲ್ಲದೆ, ಈ ಹುದ್ದೆಗೆ ರಾಹುಲ್ ಅರ್ಹರೇ ಎಂಬ ಪ್ರಶ್ನೆಯನ್ನು ಪರೋಕ್ಷವಾಗಿ ಕೇಳಿ, ಕಾಂಗ್ರೆಸ್ಸಿಗೆ ಪತ್ರವೊಂದನ್ನು ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷೀಯ ಚುನಾವಣೆ : ಡಿ.4ರಂದು ರಾಹುಲ್ ನಾಮಪತ್ರ
ಅಷ್ಟೇ ಅಲ್ಲ, ರಾಹುಲ್ ಗಾಂಧಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದೂ ಪ್ರಶ್ನಿಸಿ, ಕಾಂಗ್ರೆಸ್ ಮುಖಂಡರ ಮತ್ತು ಗಾಂಧಿ ಕುಟುಂಬದ ಆಪ್ತವಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?
ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ಸಾ?
ನಾವ್ಯಾರೂ ಫ್ಯಾಮಿಲಿ ಬಿಸಿನೆಸ್ ಮಾಡುತ್ತಿಲ್ಲ ಎಂಬುದನ್ನು ಮೊದಲು ಅರಿಯಿರಿ. ರಾಜಕೀಯ ಎಂಬುದು ಫ್ಯಾಮಿಲಿ ಬಿಸಿನೆಸ್ ಅಲ್ಲ. ಅಲ್ಲವೇ? ಎಂದು ನೇರಾನೇರ ಪ್ರಶ್ನಿಸಿ ಕುಟುಂಬ ರಾಜಕೀಯದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಾಮರ್ಥ್ಯಕ್ಕೆ ಬೆಲೆಕೊಡಿ, ಹೆಸರಿಗಲ್ಲ!
ನಮ್ಮನ್ನು ಸಾಮರ್ಥ್ಯದಿಂದ ಅಳೆಯಬೇಕೇ ಹೊರತು ಸರ್ನೇಮಿನಿಂದಲ್ಲ ಎಂದಿರುವ ಅವರು, ಗಾಂಧಿ ಕುಟುಂಬದ ಪ್ರಭಾವದಿಂದಾಗಿ ಕಾಂಗ್ರೆಸ್ ನಲ್ಲಿ ಎಷ್ಟೋ ಸಮರ್ಥ ನಾಯಕರು ಮೂಲೆಗುಂಪಾಗುತ್ತಿರುವುದನ್ನು ಪರೋಕ್ಷವಾಗಿ ಖಂಡಿಸಿ ಕಾಂಗ್ರೆಸ್ಸಿಗೆ ಪತ್ರ ಬರೆದಿದ್ದಾರೆ.
ನಿಮಗೆ ಮಾತ್ರ ಅತ್ಯುನ್ನತ ಹುದ್ದೆ ಸಿಕ್ಕಿದ್ದು ಹೇಗೆ?
ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಗೆ ಸೇರಿದವನು. ನಂತರ ಮಹಾರಾಷ್ಟ್ರ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿಯಾಗುವುದಕ್ಕೆ ಎಷ್ಟೆಲ್ಲ ಸಮಯ ಹಿಡಿಯಿತು. ಆದರೆ ನೀವು? ಇದೇ ಸಮಯದಲ್ಲಿ ಒಬ್ಬ ಸಂಸದರಾಗಿ ಚುನಾವಣೆ ಗೆದ್ದು, ಕೆಲವೇ ವರ್ಷಗಳಲ್ಲಿ ಪಕ್ಷದ ಅತ್ಯುನ್ನತ ಹುದ್ದೆ ಪಡೆಯುತ್ತಿರುವುದು ಏಕೆ? ಎಂದೂ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ನೀವು ಕಾಂಗ್ರೆಸ್ಸಿಗೆ ಏನು ಮಾಡಿದ್ದೀರಾ?
ನೀವು ಕಾಂಗ್ರೆಸ್ಸಿಗೆ ಎಷ್ಟು ಚುನಾವಣೆಯನ್ನು ಗೆಲ್ಲಿಸಿಕೊಟ್ಟಿದ್ದೀರಾ? ನೀವು ಕಾಂಗ್ರೆಸ್ ನ ಎಲ್ಲಾ ನಾಯಕರಿಗಿಂತ ಪ್ರಭಾವಶಾಲಿಯಾಗಿ ಮಾತನಾಡಬಲ್ಲಿರಾ? ನಿಮಗೆ ಕಾಂಗ್ರೆಸ್ ನ ಉಪಾಧ್ಯಕ್ಷ ಹುದ್ದೆಯೂ ತಕ್ಕುದಲ್ಲ. ಅದಕ್ಕೂ ರಾಜೀನಾಮೆ ನೀಡಬೇಕು. ಮತ್ತು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬೇಕು. ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಬೇಕು, ಆದರೆ ಕೇವಲ ಆಯ್ಕೆಯಷ್ಟೇ ನಡೆಯುತ್ತಿದೆ ಎಂದು ಅವರು ಕುಟುಕಿದ್ದಾರೆ.
ನೀವು ಸರ್ನೇಮ್ ಬಿಟ್ಟು ಸ್ಪರ್ಧೆಗೆ ಬನ್ನಿ
ನೀವು ನಿಮ್ಮ ಸರ್ನೇಮ್ ಬಿಟ್ಟು, ಕೇವಲ ಸಾಮರ್ಥ್ಯದ ಮೇಲೆ ಸ್ಪರ್ಧಿಸುವುದಾದರೆ ಈ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಸ್ಪರ್ಧಿಸುವುದಕ್ಕೆ ನಾನು ಸಿದ್ಧ ಎಂದು ಸಹ ಬಹಿರಂಗ ಸವಾಲೆಸೆದಿದ್ದಾರೆ.