ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚವಾಣ್ ರಾಜೀನಾಮೆ
ಮುಂಬೈ, ಸೆ : 26: ಎನ್ಸಿಪಿ ಜೊತೆಗಿನ ಮೈತ್ರಿ ಭಂಗಗೊಂಡ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಚವಾಣ್ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸಿ ವಿ ರಾವ್ ಅವರಿಗೆ ಸಲ್ಲಿಸಿದ್ದಾರೆ.

ಎನ್ಸಿಪಿ ಮುಖಂಡ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಗೆ ಶುಕ್ರವಾರ ಎನ್ಸಿಪಿ ಮಂಗಳ ಹಾಡಿ ಸರಕಾರದಿಂದ ಹೊರಬಂದ ಹಿನ್ನಲೆಯಲ್ಲಿ ಚವಾಣ್ ಸರಕಾರ ಬಹುಮತ ಕಳೆದುಕೊಂಡಿತ್ತು.
ಹೊಸ ಸರಕಾರ ಅಧಿಕಾರಕ್ಕೆ ಬರುವ ತನಕ ಮುಖ್ಯಮಂತ್ರಿಯಾಗಲು ಮುಂದುವರಿಯಲು ರಾಜ್ಯಪಾಲರು ಚವಾಣ್ ಅವರಿಗೆ ಸೂಚಿಸಿದ್ದಾರೋ ಅಥವಾ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆಯೇ ಎನ್ನುವ ಮಾಹಿತಿ ಸದ್ಯಕ್ಕೆ ರಾಜಭವನದಿಂದ ಲಭ್ಯವಾಗಿಲ್ಲ.
ಗುರುವಾರ (ಸೆ 25) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಒಟ್ಟಾಗಿ ನಾವು ಮತದಾರರ ಮುಂದೆ ಹೋಗಲಿದ್ದೇವೆಂದು ಚವಾಣ್ ಎಸ್ಪಿ ಮುಖಂಡರ ಸಮ್ಮುಖದಲ್ಲಿ ಜಂಟಿ ಹೇಳಿಕೆ ನೀಡಿದ್ದರು.
ಹದಿನೈದು ವರ್ಷಗಳಿಂದ ಕಾಂಗ್ರೆಸ್ ಜೊತೆ ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮನ್ನು ಕಡೆಗಣಿಸಿದ್ದರಿಂದ ಮೈತ್ರಿ ಮುರಿದು ಬಿದ್ದಿದೆ ಎಂದು ಎನ್ಸಿಪಿ ಮುಖಂಡರು ಹೇಳಿದ್ದಾರೆ.
ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದಲ್ಲಿ ಸಿಲುಕಿದ್ದ ಅಂದಿನ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ, ಪೃಥ್ವಿರಾಜ್ ಚವಾಣ್ ಮಹಾ ಸಿಎಂ ಆಗಿ ಆಯ್ಕೆಯಾಗಿದ್ದರು.












Click it and Unblock the Notifications