Maha Kumbh Mela 2025: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ, 10 ಜನ ಸಾವನ್ನಪ್ಪಿರುವ ಶಂಕೆ
ಬುಧವಾರ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಉಂಟಾದ ಕಾಲ್ತುಳಿತದಿಂದ 10 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳ ಪ್ರಕಾರ, ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಸೇರಿದ್ದಾಗ ಈ ಘಟನೆ ಸಂಭವಿಸಿದೆ. ಭಕ್ತರ ನೂಕುನುಗ್ಗಲಿಗೆ ಸಂಗಮ್ನಲ್ಲಿ ನಿರ್ಮಾಣಮಾಡಿದ್ದ ತಡೆಗೋಡೆ ಮುರಿದುಹೋಗಿ ಮೇಳದ ವಿಶೇಷ ಕರ್ತವ್ಯ ಅಧಿಕಾರಿ ಆಕಾಂಕ್ಷಾ ರಾಣಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಜಾತ್ರೆ ಪ್ರದೇಶದಲ್ಲಿರುವ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಸಂಬಂಧಿಕರು ಮತ್ತು ಹಿರಿಯ ಅಧಿಕಾರಿಗಳು ಜಮಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಮೌನಿ ಅಮಾವಾಸ್ಯೆಯಂದು ನಡೆಯುವ ಅಮೃತ ಸ್ನಾನ ಮಹಾ ಕುಂಭಮೇಳದ ಪ್ರಮುಖ ಆಚರಣೆಯಾಗಿದೆ. ಇದು ಸುಮಾರು 10 ಕೋಟಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಈ ವರ್ಷ 144 ವರ್ಷಗಳ ನಂತರ ಸಂಭವಿಸುವ ಈ ಮಹಾಕುಂಭ ಮೇಳ ಉತ್ತರಪ್ರದೇಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದೆ. ಶಿವರಾತ್ರಿಯವರೆಗೂ ನಡೆಯುವ ಈ ಮಹಾಕುಂಭ ಮೇಳೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಕರ್ನಾಟಕದ ಸರೋಜಿನಿ ತಮ್ಮ ಅನುಭವವನ್ನು ವಿವರಿಸುತ್ತಾ, ಎರಡು ಬಸ್ಗಳಲ್ಲಿ ಬಂದ ಒಂಬತ್ತು ಜನರ ಗುಂಪಿನಲ್ಲಿ ತಾನೂ ಇದ್ದೆ, ಜನಸಂದಣಿಯನ್ನು ಬ್ಯಾರಿಕೇಡ್ ಹಾಕಿ ಒಂದೆಡೆ ನಿಯಂತ್ರಿಸಿದ್ದರಿಂದ ಹಲವಾರು ಜನರು ನುಗ್ಗಿ ಬ್ಯಾರಿಕೇಡ್ ಮುರಿದು ಬಿದ್ದು ಸಿಕ್ಕಿಹಾಕಿಕೊಂಡರು. ಇದರಲ್ಲಿ ಬದುಕುಳಿಯುವ ಸಾಧ್ಯತೆಯೇ ಇಲ್ಲ ಎಂದು ಆಸ್ಪತ್ರೆಯ ಹೊರಗೆ ದುಃಖಿತಳಾದ ಸರೋಜಿನಿ ಅವರು ಹೇಳಿದರು.
ಮಹಾ ಕುಂಭಮೇಳಕ್ಕಾಗಿ ನದಿಯ 12 ಕಿ.ಮೀ. ಉದ್ದಕ್ಕೂ ಇರುವ ಸಂಗಮ್ ಮತ್ತು ಇತರ ಘಾಟ್ಗಳಲ್ಲಿ ಬೃಹತ್ ಜನಸಮೂಹ ಸೇರಿದ್ದು ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮವನ್ನು ಹಿಂದೂಗಳು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ಮಹಾ ಕುಂಭಮೇಳದ ಸಮಯದಲ್ಲಿ ವಿಶೇಷವಾಗಿ ಮೌನಿ ಅಮಾವಾಸ್ಯೆಯಂತಹ ದಿನಾಂಕಗಳಂದು ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದುಹೋಗುತ್ತವೆ ಮತ್ತು ಮೋಕ್ಷ ಅಥವಾ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಈ ದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ ಹೆಚ್ಚು.
ಯಾತ್ರಾರ್ಥಿಗಳ ಹೆಚ್ಚಿನ ಒಳಹರಿವನ್ನು ನಿರೀಕ್ಷಿಸಿ, ಮೇಳದ ಅಧಿಕಾರಿಗಳು ಮಂಗಳವಾರದಿಂದ ಸುರಕ್ಷತಾ ದೃಷ್ಠಿಯಿಂದ ಜನಸಂದಣಿ ನಿರ್ವಹಣಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಭಕ್ತರನ್ನು ಒತ್ತಾಯಿಸಿ ಸಲಹೆ ನೀಡುತ್ತಿದ್ದಾರೆ. ಸಂಗಮ್ ಘಾಟ್ ತಲುಪಲು ಯಾತ್ರಿಕರು ಗೊತ್ತುಪಡಿಸಿದ ಲೇನ್ಗಳನ್ನು ಬಳಸಬೇಕು ಮತ್ತು ಸ್ನಾನದ ಪ್ರದೇಶವನ್ನು ಸಮೀಪಿಸುವಾಗ ಅವರ ಲೇನ್ಗಳಲ್ಲೇ ಇರಬೇಕೆಂದು ಸೂಚಿಸಲಾಗಿದೆ. ಪವಿತ್ರ ಸ್ನಾನದ ನಂತರ ಘಾಟ್ಗಳಲ್ಲಿ ಸುತ್ತಾಡುವುದನ್ನು ತಪ್ಪಿಸಲು ಮತ್ತು ತಕ್ಷಣವೇ ಪಾರ್ಕಿಂಗ್ ಪ್ರದೇಶಗಳಿಗೆ ಅಥವಾ ಅವರ ಗಮ್ಯಸ್ಥಾನಗಳಿಗೆ ಹೋಗಲು ಭಕ್ತರಿಗೆ ಸೂಚಿಸಲಾಗಿದೆ.
ಭಕ್ತರನ್ನು ತಡೆಗಟ್ಟಲು ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ನುಗ್ಗುವುದು ಅಥವಾ ನೂಕುವುದನ್ನು ತಪ್ಪಿಸುವಂತೆ ಭಕ್ತರಿಗೆ ಆಗಾಗ ಧ್ವನಿ ವರ್ದಕಗಳ ಮೂಲಕ ತಿಳಿಸಲಾಗುತ್ತಿದೆ. ಆದರೂ ಕಳೆದ ದಿನ ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು, ಬ್ಯಾರಿಕೇಡ್ ಮುರಿದು ಭಕ್ತರು ನುಗ್ಗಿದ್ದಾರೆ. ಇದರಿಂದಾಗಿ ಜನರಿಗೆ ಗಾಯಗಳಾಗಿದ್ದು ಸಾವು ನೋವು ಸಂಭವಿಸಿರಬಹುದು ಎನ್ನಲಾಗುತ್ತಿದೆ. ಆದರೆ ಸಾವಿನ ಬಗ್ಗೆ ಇನ್ನೂ ಕೂಡ ಖಚಿತ ಮಾಹಿತಿ ಇಲ್ಲ.












Click it and Unblock the Notifications