'ಪ್ರಜಾಪ್ರಭುತ್ವವವನ್ನೇ ಕಣ್ಮರೆ ಮಾಡಬಹುದಾದ ಜಾದೂಗಾರ ಮೋದಿ'
"ನರೇಂದ್ರ ಮೋದಿ ಮಹಾನ್ ಜಾದೂಗಾರರು. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅದೃಶ್ಯ ಮಾಡಬಲ್ಲರು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ವಂಚನೆ ಪ್ರಕರಣದ ಆರೋಪದಲ್ಲಿ ದೇಶ ಬಿಟ್ಟು ಹೋಗಿರುವ ಉದ್ಯಮಿಗಳಾದ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ವಿಚಾರ ಪ್ರಸ್ತಾಪಿಸಿ, ಹೀಗೆ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ಜಾದೂಗಾರ ಎಂಬ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬೆರಳ ತುದಿಯಲ್ಲೇ ಏನನ್ನಾದರೂ ಪ್ರತ್ಯಕ್ಷ ಹಾಗೂ ಅದೃಶ್ಯ ಮಾಡಬಲ್ಲವರು. ಶ್ರಮವೇ ಪಡದೇ ಹಲವು ವಸ್ತುಗಳನ್ನು ಅವರು ಪ್ರತ್ಯಕ್ಷ ಹಾಗೂ ಅದೃಶ್ಯ ಮಾಡಿದ್ದಿದೆ ಎಂದು ರಾಹುಲ್ ಹೇಳಿದ್ದಾರೆ.
ಹಗರಣಗಳನ್ನು ಮಾಡಿದ ವಿಜಯ್ ಮಲ್ಯ, ಲಲಿತ್ ಮೋದಿ ಹಾಗೂ ನೀರವ್ ಮೋದಿ ಅಂಥವರು ಭಾರತದಿಂದ ಕಣ್ಮರೆಯಾಗಿ, ದೇಶದ ಕಾನೂನಿನ ಕೈಗೆ ಸಿಗದಂತೆ ವಿದೇಶಿ ನೆಲದಲ್ಲಿ ಕಾಣಿಸಿಕೊಳ್ಳುತ್ತಾರೆ. ಮೋದಿಜೀ ಭಾರತದಿಂದ ಸದ್ಯದಲ್ಲೇ ಪ್ರಜಾಪ್ರಭುತ್ವವನ್ನು ಸಹ ಮಾಯವಾಗುವಂತೆ ಮಾಡಬಲ್ಲರು ಎಂದು ಮೇಘಾಲಯದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಮೂರು ಅವಧಿಯಿಂದ ಸತತವಾಗಿ ಕಾಂಗ್ರೆಸ್ ಅಧಿಕಾರ
ಈ ರಾಜ್ಯದಲ್ಲಿ ಫೆಬ್ರವರಿ 27ರಂದು ಅರವತ್ತು ಸ್ಥಾನಗಳಿಗೆ ಮೇಘಾಲಯದಲ್ಲಿ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಕಳೆದ ಮೂರು ಅವಧಿಯಿಂದ ಸತತವಾಗಿ ಅಧಿಕಾರ ಹಿಡಿಯುತ್ತಿದೆ. ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.

ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ
ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಪ್ರಕರಣದಿಂದ ಗೊತ್ತಾಗುವುದು ಏನೆಂದರೆ ಈ ಕೇಂದ್ರ ಸರಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ ಅನ್ನೋದು ಒಂದು ಕಡೆ ಆದರೆ, ಇವರೇ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನಸುಗಳನ್ನು ಮಾರಿದ ಪ್ರಧಾನಿ
ನಾಲ್ಕು ವರ್ಷಗಳ ಹಿಂದೆ ನಮ್ಮ ದೇಶದ ಪ್ರಧಾನಿ ಭಾರತದ ಜನರಿಗೆ ಕನಸುಗಳನ್ನು ಮಾರಿದರು. ಅಚ್ಛೇ ದಿನ್, ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ, ಉದ್ಯೋಗ ಸೃಷ್ಟಿ..ಹೀಗೆ. ಭಾರತದ ಬುಡಕಟ್ಟು ಜನರು ತಮಗೆ ಸಮ ಪಾಲು ಸಿಗುತ್ತದೆ ಅಂದುಕೊಂಡರು. ಜತೆಗೆ ತಮ್ಮ ಭೂಮಿ, ಸಂಸ್ಕೃತಿ, ಸಂಪ್ರದಾಯದ ರಕ್ಷಣೆ ಸಾಧ್ಯ ಎಂದು ಭಾವಿಸಿದ್ದರು ಎಂಬುದಾಗಿ ರಾಹುಲ್ ಹೇಳಿದ್ದಾರೆ.

ಅಧಿಕಾರಾವಧಿಯ ಕೊನೆ ಹಂತಕ್ಕೆ
ಆದರೆ, ಈ ಸರಕಾರ ತನ್ನ ಅಧಿಕಾರಾವಧಿಯ ಕೊನೆ ಹಂತಕ್ಕೆ ಬಂದಿದ್ದು, ಭರವಸೆ, ಸುರಕ್ಷತೆ ಮತ್ತು ಆರ್ಥಿಕ ಪ್ರಗತಿಯ ಕಡೆಗೆ ಕರೆದೊಯ್ಯಬೇಕಾದ ಸರಕಾರ ಜನರಿಗೆ ನಿರಾಶಾವಾದ, ನಿರುದ್ಯೋಗ, ಭಯ, ದ್ವೇಷ ಹಾಗೂ ಹಿಂಸಾಚಾರವನ್ನು ತಂದಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications