ಮಧ್ಯಪ್ರದೇಶದಲ್ಲೂ ಬಿಜೆಪಿಗೆ ಆಘಾತ: ಕರ್ನಾಟಕದ ನಿಖರ ಭವಿಷ್ಯ ನುಡಿದಿದ್ದ ಸಿ -ಡೈಲಿ ಟ್ಯ್ರಾಕರ್ ಹೇಳಿದ್ದೇನು? ಅಂಕಿಅಂಶ ತಿಳಿಯಿರಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಬೀಗಿದ್ದ ಆಡಳಿತಾರೂ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿತ್ತು, ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು. ದೇಶದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ಗೆ ಈ ಗೆಲುವು ಮರುಜೀವ ನೀಡಿದೆ ಎಂದೇ ಹೇಳಲಾಗಿತ್ತು.
ಕರ್ನಾಟಕದ ನಂತರ ಮಧ್ಯಪ್ರದೇಶದಲ್ಲಿ ಕೂಡ ಈ ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕರ್ನಾಟಕ ಚುನಾವಣೆ ಸೋಲಿನ ನಂತರ, ಬಿಜೆಪಿ ಮಧ್ಯಪ್ರದೇಶದಲ್ಲಿ ಕೂಡ ಸೋಲನುಭವಿಸಲಿದ್ದು, ಮತ್ತೊಂದು ಆಘಾತ ಕಾದಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿವೆ. ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆಗಳ ಮೂಲಕ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ಮಧ್ಯಪ್ರದೇಶದಲ್ಲೂ ಅದೇ ತಂತ್ರ ಅನುಸರಿಸಲಿದೆ. ಈಗಾಗಲೇ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
C Daily Tracker OF Public Pulse For Madhya pradesh Assembly Election 2023
— C-Daily Tracker (@CdailyTracker) June 9, 2023
⚫️ Total Seat - 230/230
▪️ BJP - 79 - 85
▪️ INC - 135-143
▪️ OTH - 08-12 #CdailyTracker #MadhyapradeshElections2023 #OpinionPoll #MadhyaPradeshAssemblyElection #MadhyaPradesh pic.twitter.com/SFnXw2lA9m
ಸಿ -ಡೈಲಿ ಟ್ಯ್ರಾಕರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತ
ಚುನಾವಣೆಗೆ ಮುನ್ನ ಸಿ -ಡೈಲಿ ಟ್ಯ್ರಾಕರ್ ಸಮೀಕ್ಷೆ ನಡೆಸಿದ್ದು ಜನರ ಒಲವು ಯಾರ ಕಡೆಗಿದೆ ಎಂದು ತಿಳಿಯುವ ಪ್ರಯತ್ನ ಮಾಡಿದೆ. ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗ ಅನುಭವಿಸುವ ಸುಳಿವು ಸಿಕ್ಕಿದೆ.
ಒಟ್ಟು 230 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 79-85 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ 135 ರಿಂದ 143 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಸಮೀಕ್ಷೆ ಹೇಳಿದೆ. ಇತರರು 8-12 ಸ್ಥಾನಗಳಲ್ಲಿ ಗೆಲ್ಲುವುದಾಗಿ ಸಮೀಕ್ಷೆ ತಿಳಿಸಿದೆ. ಬಿಜೆಪಿ ಶೇಕಡ 38 ರಷ್ಟು ಮತಗಳಿಕೆ ಪಡೆಯಲಿದ್ದು, ಕಾಂಗ್ರೆಸ್ ಶೇಕಡಾ 44 ರಷ್ಟು ಮತಗಳನ್ನು ಪಡೆಯಲಿದೆ, ಇತರರು 18 ಪ್ರತಿಶತ ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 119 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 109 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಇತರರು 7 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದರೂ, 2020ರಲ್ಲಿ ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಕಾಂಗ್ರೆಸ್ನ ಆರು ಸಚಿವರು ಮತ್ತು 11 ಶಾಸಕರನ್ನು ಸೆಳೆಯುವ ಮೂಲಕ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ನಂತರ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಪರೇಷನ್ ಕಮಲಕ್ಕಾಗಿ ಬಿಜೆಪಿ ಕಾಂಗ್ರೆಸ್ನ ಶಾಸಕರು ಮತ್ತು ಸಚಿವರನ್ನು ಬೆಂಗಳೂರಿಗೆ ಕರೆತಂದಿತ್ತು, ಮಾಜಿ ಸಿಎಂ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಶಾಸಕರಿಗೆ ರಕ್ಷಣೆ ನೀಡಿದ್ದರು.
ಕರ್ನಾಟಕ ಚುನಾವಣೆ ಬಗ್ಗೆ ನಿಖರ ಭವಿಷ್ಯ ನುಡಿದಿದ್ದ ಸಿ -ಡೈಲಿ ಟ್ಯ್ರಾಕರ್
ಸಿ -ಡೈಲಿ ಟ್ಯ್ರಾಕರ್ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿಖರ ಭವಿಷ್ಯ ನುಡಿಯುವ ಮೂಲಕ ಗಮನ ಸೆಳೆದಿತ್ತು. ಕರ್ನಾಟಕ ಚುನಾವಣೆಗೆ ಮುನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 130-157, ಬಿಜೆಪಿ 37-56, ಜೆಡಿಎಸ್ 22-34 ಮತ್ತು ಇತರರು 00-03 ಸ್ಥಾನಗಳಲ್ಲಿ ಗೆಲ್ಲುವುದಾಗಿ ತಿಳಿಸಿತ್ತು . ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸುವುದಾಗಿ ಹೇಳಿತ್ತು, ಅದರಂತೆ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications