ಮಧ್ಯಪ್ರದೇಶ ಚುನಾವಣೆ; ಬಿಜೆಪಿಯೊಳಗೆ ನಡೆಯುತ್ತಿದೆ ಮಹಾ ಜಿದ್ದಾಜಿದ್ದಿ!
ಭೋಪಾಲ್, ನವೆಂಬರ್ 13: ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ, ಡಿಸೆಂಬರ್ 3ರಂದು ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎದುರಾಳಿಗಳು. ಆದರೆ ಎರಡೂ ಪಕ್ಷದೊಳಗೆ ಜಿದ್ದಾಜಿದ್ದಿ ನಡೆಯುತ್ತಿದೆ, ಬಿಜೆಪಿಯಲ್ಲಿ ಇದು ಹೆಚ್ಚಿದೆ.
ಕಾಂಗ್ರೆಸ್ ಪಕ್ಷದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಕಮಲ್ ನಾಥ್ ಬಣ ಎಂದು ವಿಭಾಗವಾಗಿದ್ದು, ಟಿಕೆಟ್ ಸಿಗದವರು, ಟಿಕೆಟ್ ಸಿಕ್ಕಿ ಚುನಾವಣಾ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳು ಎರಡೂ ಬಣದಲ್ಲಿ ಹಂಚಿಹೋಗಿದ್ದಾರೆ. ಕಾಂಗ್ರೆಸ್ಗೆ ಹೋಲಿಕೆ ಮಾಡಿದರೆ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಿದೆ.

ಬಿಜೆಪಿಯಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್, ಜ್ಯೋತಿರಾಧಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ಥೋಮರ್ ಎಂದು ಬಣಗಳಾಗಿವೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿಯಲ್ಲಿ ಬಣ ರಾಜಕೀಯ; ಈ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಪ್ರತಿನಿಧಿಸುತ್ತಿದ್ದ ಚಂಬಲ್-ಗ್ವಾಲಿಯರ್ ವಿಭಾಗದಿಂದ ಅವರು ಆಯ್ಕೆ ಬಯಸಿದ್ದಾರೆ. ಆದರೆ ಸಿಂಧಿಯಾ ಬೆಂಬಲಿಗರು ಥೋಮರ್ ಅವರನ್ನು ಒಪ್ಪುತ್ತಿಲ್ಲ. ಇದು ಚುನಾವಣೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವೇಳೆ ನರೇಂದ್ರ ಸಿಂಗ್ ಥೋಮರ್ ಗೆಲುವು ಸಾಧಿಸಿದರೆ ಜ್ಯೋತಿರಾಧಿತ್ಯ ಸಿಂಧಿಯಾ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಹಿನ್ನಡೆಯಾಗಲಿದೆ ಎಂಬುದು ಅವರ ಬೆಂಬಲಿಗರ ವಾದ. ಆದ್ದರಿಂದ ಅವರು ಸಿಂಧಿಯಾ ಬೆಂಬಲಕ್ಕೆ ನಿಂತಿದ್ದಾರೆ. ಇದು ಥೋಮರ್ಗೆ ಚುನಾವಣೆಯಲ್ಲಿ ಸಂಕಷ್ಟ ತಂದೊಡ್ಡಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆಗೆ ಹೋಗಿರುವ ಬಿಜೆಪಿ ಪಕ್ಷ ಮರಳಿ ಅಧಿಕಾರ ಪಡೆದರೆ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಆಗ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ.
ಬಿಜೆಪಿ ಚುನಾವಣಾ ಪ್ರಚಾರದಲ್ಲಿಯೂ ಮುಂದಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ 14 ಸಮಾವೇಶಗಳನ್ನು ನಡೆಸಿ ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. 'ಮಂದಿರ್ ವಹೀ ಬನಾರಹಾ ಹೇ' ಎಂದು ರಾಮಮಂದಿರ ನಿರ್ಮಾಣದ ಕುರಿತು ಹಾಡೊಂದನ್ನು ಬಿಜೆಪಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಅವರಿಗೆ ಮಧ್ಯಪ್ರದೇಶ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಭಾರೀ ಬೇಡಿಕೆ ಇದೆ. ಅವರ ಸಮಾವೇಶಗಳಿಗೆ ಜನರು ಕಿಕ್ಕಿರಿದು ಸೇರುತ್ತಿದ್ದಾರೆ. ಹಿಂದೂಗಳನ್ನು ಸೆಳೆಯುವ ಶಕ್ತಿ ಅವರ ಸಮಾವೇಶಗಳಿಗೆ ಇದೆ.
ಮಧ್ಯಪ್ರದೇಶ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಆಡಳಿತ ಪಕ್ಷ ಬಿಜೆಪಿಗೆ ಸಂಕಷ್ಟ ತಂದಿದೆ. ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ರನ್ನು ಬಿಜೆಪಿಯ ಹಲವು ನಾಯಕರು ವಿರೋಧಿಸುತ್ತಾರೆ.
ಬಿಜೆಪಿ ಚುನಾವಣೆಗೆ ಮೊದಲು ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಿತು. ಆದರೆ ಶಿವರಾಜ್ ಸಿಂಗ್ ಚೌವ್ಹಾಣ್ರನ್ನು ಮುಂದಿಟ್ಟುಕೊಂಡು ಯಾತ್ರೆ ಮಾಡದೇ ರಾಜ್ಯದ 4 ದಿಕ್ಕುಗಳಿಂದ ನಾಲ್ಕು ನಾಯಕರ ನೇತೃತ್ವದಲ್ಲಿ ಯಾತ್ರೆ ಆರಂಭಿಸಿತ್ತು.
ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿವೆ ಎಂದು ಅಂದಾಜಿಸಿರುವುದು ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಆದ್ದರಿಂದ ಚುನಾವಣಾ ಕಣಕ್ಕೆ ಸಂಸದರು, ಕೇಂದ್ರ ಸಚಿವರನ್ನು ಸಹ ಕಣಕ್ಕಿಳಿಸಿದೆ.
ನವೆಂಬರ್ 10ರಂದು ಪ್ರಕಟವಾದ ಜನಮತ್ ಚುನಾವಣಾ ಪೂರ್ವ ಸಮೀಕ್ಷೆ ರಾಜ್ಯದ 230 ಸ್ಥಾನಗಳಲ್ಲಿ ಕಾಂಗ್ರೆಸ್ 114-117 ಬಿಜೆಪಿ 105-108 ಮತ್ತು ಇತರರು 3-4 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಿದೆ.
ಮಧ್ಯಪ್ರದೇಶ ರಾಜ್ಯದ ಒಟ್ಟು ಮತದಾರರು 5,60,60,925. ಇವರಲ್ಲಿ ಪುರುಷರು 2,88,25,607. ಮಹಿಳೆಯರು 2,72,33,945 ಮತ್ತು ಇತರ ಮತದಾರರು 1,373. ಹಿರಿಯ ನಾಗರಿಕ ಮತದಾರರು 6,53,640 ಮತ್ತು ದಿವ್ಯಾಂಗ ಮತದಾರರು 5,05,146. 99 ಎನ್ಆರ್ಐ ಮತದಾರರು ಸಹ ರಾಜ್ಯದಲ್ಲಿ ಇದ್ದಾರೆ. ನವೆಂಬರ್ 17ರಂದು ಮತದಾನ ನಡೆಯಲಿದೆ.












Click it and Unblock the Notifications