ಕೇರಳ ಸಂಪೂರ್ಣ ವಿದ್ಯುದ್ದೀಕರಣಗೊಂಡ ದೇಶದ ಮೊದಲ ರಾಜ್ಯ
ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಪೂರ್ಣ ವಿದ್ಯುದ್ಧೀಕರಣಗೊಂಡ ದೇಶದ ಮೊದಲ ರಾಜ್ಯ ಕೇರಳ ಎಂದು ಅಧಿಕೃತ ಘೋಷಣೆ ಮಾಡಲಿದ್ದಾರೆ.
ತಿರುವನಂತಪುರಂ, ಮೇ 26: ಕೇರಳದ ಎಲ್ಲಾ ಮನೆಗಳೂ ವಿದ್ಯುತ್ ಸಂಪರ್ಕ ಪಡೆದಿದ್ದು, ಸಂಪೂರ್ಣ ವಿದ್ಯುದ್ಧೀಕರಣಗೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ವಿದ್ಯುತ್ ಸಂಪರ್ಕ ಮಾಡಲಾಗಿದ್ದು ಅಧಿಕೃತ ಘೋಷಣೆಯನ್ನು ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಲಿದ್ದಾರೆ.
ಆದರೆ ಕೇವಲ 1,000 ಮನೆಗಳಿಗೆ ಮಾತ್ರ ಇನ್ನೂ ವಿದ್ಯುತ್ ಸಂಪರ್ಕ ನೀಡಲು ಕೇರಳ ಸರಕಾರದಿಂದ ಸಾಧ್ಯವಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಕೇರಳ ವಿದ್ಯುತ್ ಸಚಿವ ಎಂಎಂ ಮಣಿ, "ಕೇರಳ ವಿದ್ಯುತ್ ಮಂಡಳಿಯಡಿ ಒಟ್ಟು 1.25 ಕೋಟಿ ಗ್ರಾಹಕರಿದ್ದು, 1000 ಕುಟುಂಬಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ," ಎಂದು ಹೇಳಿದ್ದಾರೆ.[ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ]
ಇನ್ನು ವಿದ್ಯುತ್ ನೀಡಲಾಗದೇ ಇರುವ ಮನೆಗಳಲ್ಲಿ 150 ಬುಡಕಟ್ಟು ಜನಾಂಗದ ಮನೆಗಳು ಕಾಡೊಳಗೆ ತೀರಾ ದುರ್ಗಮ ಪ್ರದೇಶದಲ್ಲಿವೆ. ಈ ಮನೆಗಳಿಗೆ ವಿದ್ಯುತ್ ನೀಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಜತೆಗೆ ಕೇಬಲ್ ಹಾಕುವ ಪ್ರಕರಣಗಳು ಕೋರ್ಟಿನಲ್ಲಿವೆ ಎಂದಿದ್ದಾರೆ.
ಇದರಲ್ಲಿ 4,70,000 ಕುಟುಂಬಗಳಿಗೆ ಎಲ್.ಡಿ.ಎಫ್ ಸರಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದರಲ್ಲಿ 1,50,000 ವಿದ್ಯುತ್ ಸಂಪರ್ಕಗಳನ್ನು ವಿದ್ಯುದ್ಧಿಕರಣ ಯೋಜನೆಯಡಿಯಲ್ಲಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.[ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62]
ಒಂದು ಗ್ರಾಮದಲ್ಲಿ ಎರಡು ಸಾರ್ವಜನಿಕ ಸಂಸ್ಥೆಗಳೂ ಹಾಗೂ ಶೇಕಡಾ 10 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದರೆ ಆ ಗ್ರಾಮವನ್ನು ವಿದ್ಯುದ್ಧಿಕರಣಗೊಂಡ ಗ್ರಾಮಾ ಎನ್ನಲಾಗುತ್ತದೆ. ಕೇಂದ್ರ ಸರಕಾರದ ನಿಯಮದಂತೆ ಇದೀಗ ಕೇರಳ ಪೂರ್ತಿಯಾಗಿ ವಿದ್ಯುದ್ಧೀಕರಣಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
"ಸುಲಭ ಮತ್ತು ಸರಳವಾಗ ಯೋಜನೆ ಕೈಗೊಂಡಿದ್ದರಿಂದ ವಿದ್ಯುದ್ಧೀಕರಣ ಯಶಸ್ವಿಯಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. 100 ಚದರ ಅಡಿಗಿಂತ ಕಡಿಮೆ ಅಳತೆಯ ಮನೆಗಳಿಗೆ ಯಾವುದೇ ಒಪ್ಪಿಗೆ ಇಲ್ಲದೆಯೇ ವಿದ್ಯುತ್ ಸಂಪರ್ಕ ನೀಡಲಾಗಿದೆ. 1500 ಅಡಿಗಿಂತ ಕಡಿಮೆ ಇರುವ ಮನೆಗಳಿಗೆ ಪಂಚಾಯಿತಿನಿಂದ ತಾತ್ಕಾಲಿಕ ನಂಬರ್ ಪಡೆದುಕೊಂಡು ವಿದ್ಯುತ್ ಸಂಪರ್ಕ ನೀಡಲಾಗಿದೆ," ಎಂದು ಅವರು ಯೋಜನೆಯ ಯಶಸ್ಸಿನ ಬಗ್ಗೆ ವಿವರಣೆ ನೀಡಿದ್ದಾರೆ.
ಇನ್ನು ವಿದ್ಯುತ್ ಇಲ್ಲದ ಪ್ರದೇಶಗಳ್ಲಲಿ ಸೋಲಾರ್ ಪ್ಯಾನಲ್ ಗಳನ್ನು ಸರಕಾರ ಸ್ಥಾಪಿಸಿದೆ. 22 ಕಾಲೊನಿಗಳ ಒಟ್ಟು 1600 ಮನೆಗಳಿಗೆ ಸೋಲಾರ್ ಪ್ಲಾಂಟ್ ಮೂಲಕ ವಿದ್ಯುತ್ ಪೂರೈಸಲಾಗುತ್ತಿದೆ. ಒಟ್ಟು ಈ ವಿದ್ಯುದ್ಧಿಕರಣಕ್ಕೆ 174 ಕೋಟಿ ಖರ್ಚಾಗಿದೆ ಎಂದು ಸಚಿವರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)