ಕಾಂಗ್ರೆಸ್ ಸಂಸದರು ಮಾಡಿದ ತಪ್ಪನ್ನು ಇಡೀ ದೇಶ ನೋಡಲಿ, ಸ್ಪೀಕರ್
ನವದೆಹಲಿ, ಜುಲೈ 24: ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ತೋರಿದ ಅಶಿಸ್ತು ಮತ್ತು ತಪ್ಪನ್ನು ಇಡೀ ದೇಶ ನೋಡುವಂತಾಗಲಿ. ಸದನದಲ್ಲಿ ಅಶಿಸ್ತು ತೋರಿದರೆ ಏನಾಗಬಹುದು ಎಂದು ಎಲ್ಲಾ ಸಂಸದರಿಗೂ ಹಾಗೂ ಮುಂದಿನ ಪೀಳಿಗೆಗೂ ಇವತ್ತಿನ ಘಟನೆ ಪಾಠವಾಗಲಿ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಸೋಮವಾರ (ಜುಲೈ 24) ಕಾಂಗ್ರೆಸ್ ಸಂಸದರು ತೋರಿದ ಅಶಿಸ್ತಿನಿಂದ ತೀವ್ರ ನೊಂದಿದ್ದೇನೆ. ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ, ಕಾಂಗ್ರೆಸ್ ಸಂಸದರ ವರ್ತನೆ ಕ್ಷಮಿಸಲಾಗದಂತದ್ದು ಎಂದು ಸುಮಿತ್ರಾ ಮಹಾಜನ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ಸಿನ ಆರು ಸಂಸದರಿಗೆ ನಿಷೇಧ
ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ಪೀಕರ್, ಸಂಸತ್ತಿನ ಶೂನ್ಯ ವೇಳೆ ತುಂಬಾ ಮುಖ್ಯವಾದದ್ದು. ಪ್ರಶ್ನೋತ್ತರಕ್ಕೆ ಮೀಸಲಾಗಿರುವ ಸಮಯವನ್ನು ಪೋಲು ಮಾಡುವುದು ತಪ್ಪು ಎನ್ನುವುದು ಮುಂದಾದರೂ ಎಲ್ಲಾ ಪಕ್ಷದವರಿಗೂ ಅರ್ಥವಾಗಲಿ ಎಂದು ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಕಾಂಗ್ರೆಸ್ಸಿನ ಸಂಸದರು ನನ್ನ ಮೇಲೆ ಎಸೆದದ್ದು ಬರೀ ಕಾಗದವಲ್ಲ, ಅದು ಪ್ರಮುಖ ದಾಖಲೆ ಪತ್ರಗಳು. ಇದನ್ನು ಅನುಮತಿ ಇಲ್ಲದೆಯೇ ತೆಗೆದದ್ದು ಒಂದು ತಪ್ಪಾದರೆ, ನನ್ನ ಮೇಲೆ ತೂರಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂದು ಸುಮಿತ್ರಾ ಮಹಾಜನ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಬೋಫೋರ್ಸ್ ಹಗರಣದ ಬಗ್ಗೆ ರಿಪಬ್ಲಿಕ್ ಸುದ್ದಿ ವಾಹಿನಿಯು ಇತ್ತೀಚೆಗೆ ನೀಡಿದ ವರದಿಯು ಲೋಕಸಭೆಯ ಸೋಮವಾರದ ಕಲಾಪದಲ್ಲಿ ಭಾರೀ ಕೋಲಾಹಲವನ್ನು ಎಬ್ಬಿಸಿತ್ತು. ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಮಾಡಿದ ಆರೋಪಗಳ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಸಂಸದರು, ಲೋಕಸಭೆಯಲ್ಲಿ ತೀವ್ರವಾಗಿ ಗಲಾಟ ಮಾಡಲು ಆರಂಭಿಸಿದರು.
ಆಗ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಧ್ಯ ಪ್ರವೇಶಿಸಿ, ಕಾಂಗ್ರೆಸ್ ಸಂಸದರಿಗೆ ಎಚ್ಚರಿಕೆ ಕೊಟ್ಟರು. ಸ್ಪೀಕರ್ ಆಣತಿಗೆ ಕಿಮ್ಮತ್ತು ನೀಡದ ಕಾಂಗ್ರೆಸ್ಸಿನ ಆರು ಸಂಸದರು ಸ್ಪೀಕರ್ ಮೇಲೆ ತಮ್ಮ ಕೈಯ್ಯಲ್ಲಿದ್ದ ದಾಖಲೆಗಳನ್ನು ತೂರಿದರು.
ಇದರಿಂದ, ಸಿಟ್ಟಿಗೆದ್ದ ಸ್ಪೀಕರ್, ಆ ಆರೂ ಸಂಸದರನ್ನು ಸದನದ ಘನತೆಗೆ ಧಕ್ಕೆ ತಂದ ಆಧಾರದ ಮೇರೆಗೆ 377ನೇ ಅಧಿನಿಯಮದ ಪ್ರಕಾರ ಐದು ದಿನಗಳ ಅವಧಿಯವರೆಗೆ ಸಂಸತ್ ಕಲಾಪದಿಂದ ನಿಷೇಧಿಸಿದ್ದರು.