ಶ್ರೀಲಂಕಾ ಬಿಕ್ಕಟ್ಟಿನಿಂದ ಭಾರತಕ್ಕೆ 3 ಪಾಠ: ಸಚಿವ ಎಸ್. ಜೈಶಂಕರ್
ನವದೆಹಲಿ, ಜುಲೈ 20: ಶ್ರೀಲಂಕಾದ ಬಿಕ್ಕಟ್ಟಿನ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ಕೇಂದ್ರ ಸರಕಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಶ್ರೀಲಂಕಾ ಬಿಕ್ಕಟ್ಟಿನ ಸಂಬಂಧ ಚರ್ಚೆ ನಡೆಸಲಾಯಿತು. ನೆರೆ ರಾಷ್ಟ್ರದ ಬಿಕ್ಕಟ್ಟಿನಿಂದ ಭಾರತ ಕಲಿಯಬಹುದಾದ ಪಾಠಗಳ ಬಗ್ಗೆ ಕೇಂದ್ರ ಸರಕಾರ ತಿಳಿಸಿತು.
ಶ್ರೀಲಂಕಾದಲ್ಲಿ ಬಹಳ ಗಂಭೀರ ಬಿಕ್ಕಟ್ಟಿನ ಬಗ್ಗೆ ಭಾರತ ಸಹಜವಾಗಿಯೇ ಕಳವಳಗೊಂಡಿದೆ. ಹಣಕಾಸು ಶಿಸ್ತು, ಜವಾಬ್ದಾರಿಯುತ ಆಡಳಿತ ಮತ್ತು ಉಚಿತವಾಗಿ ನೀಡುವ ಪದ್ಧತಿ ಕೈಬಿಡುವುದು ಇತ್ಯಾದಿ ಪ್ರಬಲ ಪಾಠಗಳನ್ನು ಶ್ರೀಲಂಕಾ ಬಿಕ್ಕಟ್ಟು ಕಲಿಸುತ್ತವೆ ಎಂದು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಕಣದಲ್ಲಿ ಮೂವರು
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ, ಕಾಂಗ್ರೆಸ್ನಿಂದ ಪಿ. ಚಿದಂಬರಂ ಮತ್ತು ಮಾಣಿಕ್ಯಂ ಠಾಗೂರ್, ಎನ್ಸಿಪಿಯಿಂದ ಶರದ್ ಪವಾರ್, ಡಿಎಂಕೆಯಿಂದ ಟಿಆರ್ ಬಾಲು, ಎಂ ಅಬ್ದುಲ್ಲಾ ಪಾಲ್ಗೊಂಡಿದ್ದರು.
ಹಾಗೆಯೇ ಎಐಎಡಿಎಂಕೆಯ ಎಂ. ತಂಬಿದೊರೈ, ತೃಣಮೂಲ ಕಾಂಗ್ರೆಸ್ ಪಕ್ಷದ ಸೌಗತ ರೇ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ತೆಲಂಗಾಣ ರಾಷ್ಟ್ರ ಸಮಿತಿಯ ಕೇಶವ ರಾವ್, ಬಹುಜನ ಸಮಾಜ ಪಕ್ಷದ ರಿತೇಶ್ ಪಾಂಡೆ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿಜಯಸಾಯಿ ರೆಡ್ಡಿ, ಎಂಡಿಎಂಕೆ ಪಕ್ಷದ ವೈಕೋ ಮೊದಲಾದವರೂ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.
ಗಂಭೀರ ಸಮಸ್ಯೆ
ಶ್ರೀಲಂಕಾದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಅಸಾಧಾರಣವಾದುದು. ಬಹಳ ಗಂಭೀರ ಬಿಕ್ಕಟ್ಟು ಅದು. ಈ ಕಾರಣಕ್ಕೆ ಕೇಂದ್ರ ಸರಕಾರ ಸರ್ವಪಕ್ಷ ಸಭೆ ನಡೆಸಿದೆ ಎಂದು ಸಚಿವ ಜೈಶಂಕರ್ ತಿಳಿಸಿದರು.
"ಶ್ರೀಲಂಕಾ ಭಾರತಕ್ಕೆ ಬಹಳ ಸಮೀಪ ಇರುವ ನೆರೆ ದೇಶವಾಗಿರುವುದರಿಂದ ಅಲ್ಲಿ ನಡೆಯುವ ಘಟನೆಗಳು ನಮಗೂ ಪರಿಣಾಮ ಬೀರುವುದರಿಂದ ಅಲ್ಲಿನ ಬಿಕ್ಕಟ್ಟನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ" ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರು ಈ ಸರ್ವಪಕ್ಷ ಸಭೆಯಲ್ಲಿ ಹೇಳಿದರು.
ಶ್ರೀಲಂಕಾ ಮತ್ತು ಪೆಟ್ರೋಲ್ ಕಥೆ- 20 ರೂ ಇಳಿದರೂ ಕಣ್ಣೀರು ತರಿಸುತ್ತೆ ಬೆಲೆ
ಶ್ರೀಲಂಕಾ ಗತಿ ಭಾರತಕ್ಕೂ ಆಗುತ್ತಾ?
ಶ್ರೀಲಂಕಾದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಭಾರತಕ್ಕೂ ಒದಗಿಬರಬಹುದು ಎಂಬಂತಹ ಅನಿಸಿಕೆ ಬಲವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಅಭಿಪ್ರಾಯಗಳನ್ನು ತಳ್ಳಿಹಾಕಿದರು.
"ಶ್ರೀಲಂಕಾದಿಂದ ಕಲಿಯಬೇಕಾದ ಪಾಠಗಳು ಬಹಳ ಗಂಭೀರವಾದುದು ಹಣಕಾಸು ಶಿಸ್ತು, ಜವಾಬ್ದಾರಿಯುತ ಆಡಳಿತ ಇರಬೇಕು. ಹಾಗೆಯೇ ಉಚಿತ ನೀಡುವ ಸಂಸ್ಕೃತಿ ಇರಬಾರದು" ಎಂದು ಎಸ್ ಜೈಶಂಕರ್ ಅಭಿಪ್ರಾಯಪಟ್ಟರು.
ಭಾರತ ಇದೇ ವೇಳೆ ಶ್ರೀಲಂಕಾಗೆ ವಿವಿಧ ರೀತಿಯಲ್ಲಿ ನೆರವು ಒದಗಿಸುತ್ತಿದೆ. ಈ ವರ್ಷವೊಂದಕ್ಕೆ ಕೋಟ್ಯಂತರ ರೂ. ಕ್ರೆಡಿಟ್ ಲೈನ್ ಒದಗಿವುದಾಗಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಭಾರತ ಇನ್ನೂ ಹೆಚ್ಚಿನ ಸಹಾಯ ಒದಗಿಸುವ ನಿರೀಕ್ಷೆ ಇದೆ.
ಮಹಾ ಆರ್ಥಿಕ ಬಿಕ್ಕಟ್ಟು
ಶ್ರೀಲಂಕಾ ಅತ್ಯಂತ ಗಂಭೀರ ಸ್ವರೂಪದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ವಿಪರೀತ ಸಾಲ, ಅಗತ್ಯವಸ್ತುಗಳ ಅಭಾವ, ಅಗತ್ಯವಸ್ತುಗಳನ್ನು ಆಮದು ಮಾಡಿಕೊಳ್ಳಲೂ ಸರಕಾರದ ಬಳಿ ಹಣ ಇಲ್ಲದಿರುವುದು ಇವು ಜನಸಾಮಾನ್ಯವರನ್ನು ತಲ್ಲಣಗೊಳಿಸಿದೆ. ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಶ್ರೀಲಂಕಾ ಆಡಳಿತ ಮಾಡಿದ ಹಲವು ತಪ್ಪು ನೀತಿಗಳು ಈ ಬಿಕ್ಕಟ್ಟಿಗೆ ಕಾರಣವೆನ್ನಲಾಗುತ್ತದೆ. ದೊಡ್ಡದೊಡ್ಡದಾದ ಮತ್ತು ಅನಗತ್ಯವಾದ ಯೋಜನೆಗಳಿಗೆ ದೊಡ್ಡ ಮೊತ್ತದ ಹಣ ಸುರಿದದ್ದು; ತೆರಿಗೆ ಕಡಿತ, ಸಬ್ಸಿಡಿ ಇತ್ಯಾದಿ ಕ್ರಮಗಳ ಮೂಲಕ ಸರಕಾರದ ಆದಾಯ ಮೂಲವನ್ನು ಕಡಿಮೆ ಮಾಡಿದ್ದು; ಸರಿಯಾದ ಹಣಕಾಸು ನಿರ್ವಹಣೆ ಇಲ್ಲದಿರುವುದು; ರಾಸಾಯನಿಕ ಗೊಬ್ಬರವನ್ನು ನಿಷೇಧಿಸಿ ಕೇವಲ ಸಾವಯವ ಕೃಷಿಗೆ ಮಾತ್ರ ಅನುಮತಿಸಿದ್ದು, ಇವೆಲ್ಲವೂ ಶ್ರೀಲಂಕಾ ಆರ್ಥಿಕತೆಯ ಅದಃಪತನಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ.
ಹೊಸ ಅಧ್ಯಕ್ಷರ ಆಯ್ಕೆ
ಕಳೆದ ಕೆಲ ತಿಂಗಳಿಂದ ಶ್ರೀಲಂಕಾದಲ್ಲಿ ಜನರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ದಂಗೆ, ಹಿಂಸಾಚಾರಗಳು ಘಟಿಸಿವೆ. ಪರಿಣಾಮವಾಗಿ ಅಧ್ಯಕ್ಷ ಮತ್ತು ಪ್ರಧಾನಿ ರಾಜೀನಾಮೆ ನೀಡಿದ್ದಾರೆ. ಈಗ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೂ ಆರ್ಥಿಕ ಪರಿಸ್ಥಿತಿಯನ್ನು ಸಂಭಾಳಿಸುವುದು ಬಹಳ ದೊಡ್ಡ ಸವಾಲಿನ ಕೆಲಸವಾಗಿದೆ.
ಲಂಕಾ ಸಂಸತ್ತಿನ ಎಲ್ಲಾ ಸದಸ್ಯರು ಸೇರಿ ಹೊಸ ಅಧ್ಯಕ್ಷರನ್ನು ಆರಿಸಲಿದ್ದಾರೆ. ಇಂದು ಬುಧವಾರ ಚುನಾವಣೆ ಇದೆ. ರಾನಿಲ್ ವಿಕ್ರಮಸಿಂಘೆ, ಡಳಸ್ ಅಳಗಪೆರುಮ ಮತ್ತು ಅನುರ ಕುಮಾರ ಡಿಸ್ಸನಾಯಕೆ ಈ ಮೂವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ. ರಾನಿಲ್ ವಿಕ್ರಮಸಿಂಘೆ ಮತ್ತು ಡಳಸ್ ಅಳಗೆಪ್ಪೆರುವ ಮಧ್ಯೆ ತೀವ್ರ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)
Recommended Video