ಭೂ ಹಗರಣ ಕೇಸ್: ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನ ಅ.10 ರವರೆಗೆ ವಿಸ್ತರಣೆ
ನವದೆಹಲಿ ಅಕ್ಟೋಬರ್ 4: ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ನ್ಯಾಯಾಲಯ ಮಂಗಳವಾರ ಅಕ್ಟೋಬರ್ 10 ರವರೆಗೆ ವಿಸ್ತರಿಸಿದೆ. ನ್ಯಾಯಾಲಯ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 10 ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಮನಿ ಲಾಂಡರಿಂಗ್ ಕಾಯ್ದೆಯ ವಿಶೇಷ ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 3 ರವರೆಗೆ ವಿಸ್ತರಿಸಿತ್ತು. ಆಪಾದಿತ ಪತ್ರಾ ಚಾಲ್ ಮರುಅಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯ (ಇಡಿ) ರೌತ್ ಅವರನ್ನು ಬಂಧಿಸಿತು ಮತ್ತು ಅಂದಿನಿಂದ ಅವರು ಬಂಧನದಲ್ಲಿದ್ದಾರೆ.
ಜುಲೈ 1ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿಕೊಂಡಿತ್ತು. ನಂತರ ಜುಲೈ 31 ರಂದು ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಕಳೆದ ಏಪ್ರಿಲ್ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆಗಸ್ಟ್ 1 ರಂದು ಸಂಜಯ್ ರಾವತ್ ಅವರನ್ನು ಬಂಧಿಸಿತ್ತು. ಈ ಪ್ರಕರಣವು ಗುರು ಆಶಿಶ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ನಿಂದ ಕೈಗೆತ್ತಿಕೊಂಡ 672 ಬಾಡಿಗೆದಾರರಿಗೆ ಪತ್ರಾ ಚಾಲ್ನ ಮರುಅಭಿವೃದ್ಧಿ ಯೋಜನೆಗೆ ಸಂಬಂಧಿಸಿದೆ. ಇದರಲ್ಲಿ ಸಂಜಯ್ ರಾವುತ್ ಅವರ ನಿಕಟ ಸಹವರ್ತಿ ಪ್ರವೀಣ್ ರಾವುತ್ ನಿರ್ದೇಶಕರಲ್ಲಿ ಒಬ್ಬರಾಗಿದ್ದರು.

ಯೋಜನೆಯಿಂದ ಎಫ್ಎಸ್ಐ ಅಕ್ರಮ ಮಾರಾಟದ ಮೂಲಕ ಪ್ರವೀಣ್ ರಾವತ್ಗೆ 112 ಕೋಟಿ ರೂಪಾಯಿ ಲಾಭವಾಗಿದೆ ಮತ್ತು ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಸಂಜಯ್ ರಾವುತ್ ಮತ್ತು ಅವರ ಪತ್ನಿಗೆ ವರ್ಗಾಯಿಸಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.

ವಸತಿ ಪುನರಾಭಿವೃದ್ಧಿ ಯೋಜನೆಯಲ್ಲಿ ಅಕ್ರಮಗಳನ್ನು ಸುಗಮಗೊಳಿಸಿದ್ದಕ್ಕಾಗಿ ಸಂಜಯ್ ರಾವತ್ ಕುಟುಂಬವು 1 ಕೋಟಿಗೂ ಹೆಚ್ಚು ಮೌಲ್ಯದ "ಅಪರಾಧದ ಆದಾಯ" ಪಡೆದಿದೆ ಎಂದು ಗುರುವಾರ ನ್ಯಾಯಾಲಯದಲ್ಲಿ ಇಡಿ ತಿಳಿಸಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ವರ್ಷಾ ರಾವತ್ ಮತ್ತು ಸಂಜಯ್ ರಾವುತ್ ಅವರ ಇಬ್ಬರು ಸಹಚರರ 11 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಇವುಗಳಲ್ಲಿ ವರ್ಷಾ ರಾವುತ್ ಹೊಂದಿದ್ದ ದಾದರ್ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗ್ನ ಕಿಹಿಮ್ ಬೀಚ್ನಲ್ಲಿರುವ ಎಂಟು ಪ್ಲಾಟ್ಗಳು (ಈ ಎಂಟು ಪ್ಲಾಟ್ಗಳು ವರ್ಷಾ ರಾವುತ್ ಮತ್ತು ಸಂಜಯ್ ರಾವುತ್ರ "ಆಪ್ತ ಸಹಚರ" ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದರು) ಸೇರಿವೆ.












Click it and Unblock the Notifications