ಹನುಮಂತಪ್ಪನನ್ನು ಬದುಕಿಸಿದ್ದು ಅಸಾಧ್ಯ ಮನೋಬಲ ಛಲ
ಬೆಂಗಳೂರು, ಫೆಬ್ರವರಿ 10 : ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವುದೆಂದರೆ ಹುಟುಗಾಟಿಕೆಯಲ್ಲ. ಇಲ್ಲಿ ಕೆಲಸ ಮಾಡುವುದೆಂದರೆ ಅತ್ಯಂತ ಕಠಿಣವಾದದ್ದು ಎಂದು ಪರಿಗಣಿಸಲಾಗುತ್ತದೆ. ಅಸಾಧ್ಯವಾದ ಬದ್ಧತೆ, ಆತ್ಮವಿಶ್ವಾಸ, ಬದುಕುವ ಛಲ, ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲವಾಗಿದ್ದವನು ಮಾತ್ರ ಇಲ್ಲಿ ಕೆಲಸ ನಿರ್ವಹಿಸಲು ಸಾಧ್ಯ.
ಸದಾ ಸಾವನ್ನು ಕೈಯಲ್ಲೇ ಹಿಡಿದು ಈ ಕ್ಲಿಷ್ಟಕರವಾದ ಪ್ರದೇಶದಲ್ಲಿ ಪ್ರಾಣ ನೀಗಿದವರ ಸಂಖ್ಯೆಯತ್ತ ಒಂದು ಬಾರಿ ಗಮನ ಹರಿಸಿ. ಕಳೆದ ಮೂರು ದಶಕಗಳಲ್ಲಿ ಇಲ್ಲಿ 846 ಯೋಧರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ 50 ಸೈನಿಕರು ಸಾವನ್ನಪ್ಪಿದ್ದಾರೆ. ದೇಶಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧನಾದವನು ಮಾತ್ರ ಸಿಯಾಚಿನ್ ನಲ್ಲಿ ಕೆಲಸ ಮಾಡಲು ಸಾಧ್ಯ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಸೈನಿಕರು ಇಲ್ಲಿ ಅತ್ಯಂತ ವಿಷಮ ಪರಿಸ್ಥಿತಿಯ ವಿರುದ್ಧ ಸದಾ ಹೋರಾಡುತ್ತಿರಬೇಕಾಗುತ್ತದೆ. ಹಿಮ ಕಡಿತಗಳಾಗುವುದು ಸಹಜ, ಆಮ್ಲಜನಕ ಕೊರತೆಯಿಂದಾಗಿ ತಲೆಸುತ್ತಿ ಬೀಳುವ ಸಾಧ್ಯತೆ ಇರುತ್ತದೆ. ಟಿನ್ ಕ್ಯಾನಿನಲ್ಲಿ ನೀಡಲಾಗುವ ಆಹಾರವನ್ನು ಮಾತ್ರ ಸೇವಿಸುತ್ತ ಸೈನಿಕರು ದೇಶವನ್ನು ಕಾಯುತ್ತಿರಬೇಕಾಗುತ್ತದೆ. [ಹನುಮಂತರನ್ನು ಪತ್ತೆಹಚ್ಚಿದ ಶ್ವಾನಗಳಿಗೆ ಸೆಲ್ಯೂಟ್]
ಮೈನಸ್ 50 ಡಿಗ್ರಿ ಇರುವ ತಾಪಮಾನದಲ್ಲಿ 35 ಅಡಿ ಹಿಮಪಾತದಡಿಯಲ್ಲಿ 5 ದಿನಗಳ ಕಾಲ ಸಿಲುಕಿಯೂ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕುಳಿದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಜನರಲ್ಲಿ ಅತ್ಯಂತ ಬಲಿಷ್ಠವಾಗಿದ್ದವರು ಹನುಮಂತಪ್ಪ. ಅವರಲ್ಲಿ ಎಂಥದೇ ಪರಿಸ್ಥಿತಿ ಎದುರಿಸುವ ಸ್ಥೈರ್ಯ, ಮನೋಬಲ ಇದ್ದಿದ್ದರಿಂದ ಅವರು ಬದುಕುಳಿದರು.
ಸಿಯಾಚಿನ್ ನಲ್ಲಿ ಕೆಲಸ ಮಾಡುವುದು ಒಂದು ಸವಾಲು
ದೇಶದ ಗಡಿಯನ್ನು ಕಾಯುತ್ತಿರುವ ಭಾರತದ ಸೈನಿಕರು ಮಾತ್ರವಲ್ಲ ಪಾಕಿಸ್ತಾನದ ಯೋಧರಿಗೂ ಸಿಯಾಚಿನ್ ನಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲಿನದ್ದು. ಎರಡೂ ದೇಶಗಳ ಸೈನಿಕರು ವಿಶ್ವದ ಅತೀ ಎತ್ತರದ ನೀರ್ಗಲ್ಲು ಪ್ರದೇಶವಾದ ಸಿಯಾಚಿನ್ ನಲ್ಲಿ 20 ಅಡಿ ಎತ್ತರದ ಮೇಲೆ ಗಡಿ ಕಾಯುತ್ತಿರುತ್ತಾರೆ. [ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]
ಇಲ್ಲಿ ಸೈನಿಕರು ಹವಾಮಾನದೊಂದಿಗೆ ಹೋರಾಡುತ್ತಲೇ ಇರಬೇಕಾಗುತ್ತದೆ. ಕಳೆದ ಮೂರು ವಾರಗಳಿಂದ ಹಿಮಪಾತವಾಗುತ್ತಿತ್ತು, 36 ಅಡಿಗಳಷ್ಟು ಹಿಮವರ್ಷವಾಗಿತ್ತು. ಆಗಾಗ ಗಂಟೆಗೆ 100 ಕಿ.ಮೀ. ವೇಗದಲ್ಲಿ ಶೀತಗಾಳಿ ಬೀಸುತ್ತಿರುವುದನ್ನು ಸಹಿಸುತ್ತಲೇ ಸೈನಿಕರು ಇಲ್ಲಿ ಬದುಕಬೇಕು.
ಜೊತೆಗೆ, ತಲೆನೋವು, ಮಾತಾಡಲು ಸಾಧ್ಯವಾಗದಿರುವುದು, ನಿದ್ರಾಹೀನತೆ, ಹಸಿವಾಗದಿರುವ ತೊಂದರೆಯನ್ನೂ ಎದುರಿಸುತ್ತಿರಬೇಕು. ದುರ್ಬಲ ಹೃದಯ ಇರುವವರಿಗೆ ಇಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಮೈನಸ್ 55ಕ್ಕೆ ಇಳಿಯುವ ತಾಪಮಾನದಲ್ಲಿ ಸದಾ ಎಚ್ಚರದಿಂದ ಇರಬೇಕಾಗಿರುವುದು ಸಾಮಾನ್ಯ ಸಂಗತಿಯಲ್ಲ.
ಯುದ್ಧದಲ್ಲಿ ಹೋರಾಡುವುದಕ್ಕಿಂತ ಇದು ಕ್ಲಿಷ್ಟಕರವಾದದ್ದು. ಹನುಮಂತಪ್ಪ ಬಾಲ್ಯದಿಂದಲೂ ಕಷ್ಟ ಅನುಭವಿಸುತ್ತಲೇ ಬಂದವರು. ಅವರಲ್ಲಿ ದೇಶಕ್ಕಾಗಿ ಸೇವೆ ಮಾಡುವ ತುಡಿತವಿರುತ್ತಿತ್ತು. ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸಲು ಕರೆ ಬಂದಾಗ ಅವರಿಂತ ಸಂತೋಷಪಟ್ಟ ವ್ಯಕ್ತಿ ಮತ್ತೊಬ್ಬ ಇರಲಿಲ್ಲ. ಬದುಕಲೇಬೇಕೆಂಬ ಛಲ ಅವರನ್ನು ಜೀವಂತವಾಗಿಟ್ಟಿದೆ. ಇಡೀ ದೇಶವೇ ಅವರ ಉಳಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದೆ.