ಮೇವು ಹಗರಣದ ಮೂರನೇ ಪ್ರಕರಣದಲ್ಲೂ ಲಾಲೂ ದೋಷಿ
ರಾಂಚಿ, ಜನವರಿ 24: ಮೂರನೇ ಮೇವು ಹಗರಣದಲ್ಲೂ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೋರ್ವ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಕೂಡ ಪ್ರಕರಣದಲ್ಲಿ ಅಪರಾಧಿ ಎಂದು ಕೋರ್ಟ್ ಆದೇಶ ನೀಡಿದೆ.
1992-93ರಲ್ಲಿ ಚೈಬಾಸಾ (ಸದ್ಯ ಜಾರ್ಖಂಡ್ ನಲ್ಲಿದೆ) ಖಜಾನೆಯಿಂದ ಅಕ್ರಮವಾಗಿ 33.67 ಕೋಟಿ ರೂಪಾಯಿ ಹಣ ಡ್ರಾ ಮಾಡಿದ ಪ್ರಕರಣ ಇದಾಗಿದೆ. ಲಾಲೂ ಪ್ರಸಾದ್ ಯಾದವ್ ಮತ್ತು ಜಗನ್ನಾಥ ಮಿಶ್ರಾ ಸೇರಿ ಪ್ರಕರಣದಲ್ಲಿ 56 ಮಂದಿ ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.
ಮೇವು ಪ್ರಕರಣ: ಲಾಲೂ ಪ್ರಸಾದ್ ಯಾದವ್ ಗೆ ಮೂರೂವರೆ ವರ್ಷ ಜೈಲು
ತೀರ್ಪಿನ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, "ಲಾಲೂಜೀ ವಿರುದ್ಧ ಬಿಜೆಪಿ, ಆರ್.ಎಸ್.ಎಸ್ ಹಾಗೂ ಅದಕ್ಕಿಂತ ಹೆಚ್ಚಾಗಿ ನಿತೀಶ್ ಕುಮಾರ್ ಹೇಗೆ ಸಂಚು ರೂಪಿಸಿದರು ಎಂಬುದು ಜನರಿಗೆ ಗೊತ್ತಿದೆ. ಈ ಎಲ್ಲಾ ಆದೇಶಗಳ ವಿರುದ್ಧ ನಾವು ಉನ್ನತ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ," ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 20, 2013ರಲ್ಲಿ ಮೇವು ಹಗರಣದ ಮೊದಲ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ಹೊರ ಬಿದ್ದಿತ್ತು. ಈ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಲಾಲೂ ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.
ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್
ಬಳಿಕ ಜನವರಿ 6, 2018ರಲ್ಲಿ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಈ ಪ್ರಕರಣದಲ್ಲಿ ಸದ್ಯ ಶಿಕ್ಷೆ ಅನುಭವಿಸುತ್ತಿರುವ ಲಾಲೂ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಮೂರನೇ ಪ್ರಕರಣದಲ್ಲಿ ಅವರು ದೋಷಿ ಎಂಬ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಶಿಕ್ಷೆ ಪ್ರಮಾಣವನ್ನು ಕೋರ್ಟ್ ಇನ್ನೂ ಪ್ರಕಟಿಸಿಲ್ಲ.