ಭಾರತ ಮತ್ತು ಚೀನಾ ಗಡಿ ವಿವಾದ: 14ನೇ ಸುತ್ತಿನ ಮಾತುಕತೆ
ನವದೆಹಲಿ, ಜನವರಿ 12: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಇಂದು LAC (Line of Actual Control)ನಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ 14ನೇ ಸುತ್ತಿನ ಮಾತುಕತೆ ನಡೆಯಲಿದೆ. ಈವರೆಗೆ 13 ಸುತ್ತಿನ ಮಾತುಕತೆ ನಡೆದಿವೆ. ಆದರೆ ಈವರೆಗೆ ಮಾತುಕತೆ ಯಶಸ್ವಿಯಾಗಿಲ್ಲ. ಗಾಲ್ವಾನ್ ಕಣಿವೆಯಲ್ಲಿ ಉಂಟಾಗಿದ್ದ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ ಗಡಿ ಬಿಕ್ಕಟ್ಟಿನ ಮಾತುಕತೆ ನಡೆಯುತ್ತಲೇ ಇವೆ.
14ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯನ್ನು ಚೀನಾದ ಮೊಲ್ಡೊದಲ್ಲಿ ನಡೆಸಲಾಗುತ್ತಿದೆ. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಮತ್ತು ಕಠಿಣ ಚಳಿಗಾಲದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಯುದ್ಧ ವಲಯಗಳನ್ನು ಸಹಜ ಸ್ಥಿತಿಗೆ ತರಲು ಈ ಮಾತುಕತೆ ನಡೆಯಲಿದೆ.
ಸರ್ಕಾರದ ಮೂಲಗಳ ಪ್ರಕಾರ, ಉಭಯ ದೇಶಗಳ ನಡುವೆ ಪರಿಹರಿಸಲು ಉಳಿದಿರುವ ಏಕೈಕ ಘರ್ಷಣೆಯ ಬಿಂದುವಾದ ಹಾಟ್ ಸ್ಪ್ರಿಂಗ್ಸ್ ಕುರಿತು ಇಂದಿನ ಮಾತುಕತೆಗಳು ಕೇಂದ್ರೀಕರಿಸುವ ಸಾಧ್ಯತೆಯಿದೆ. ಭಾರತದ ಪರವಾಗಿ ಭಾರತೀಯ ಸೇನೆಯ 'ಫೈರ್ ಅಂಡ್ ಫ್ಯೂರಿ' ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್ಗುಪ್ತಾ ಅವರು ಭಾಗವಹಿಸುತ್ತಿರುವ ಮೊದಲ ಸಭೆ ಇದಾಗಿದೆ. ಈವರೆಗೆ ಭಾರತ ಮತ್ತು ಚೀನಾ LAC ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು 2020 ರ ಆರಂಭದಲ್ಲಿ ಪ್ರಾರಂಭವಾದ ಬಿಕ್ಕಟ್ಟನ್ನು ಕೊನೆಗೊಳಿಸಲು 13 ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸಲಾಗಿದೆ.

ಈ ಹಿಂದೆ 13 ಸುತ್ತಿನ ಮಾತುಕತೆಯಲ್ಲಿ ಭಾರತದ ಪರವಾಗಿ 14 ಕೋರ್ ಪಡೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಮತ್ತು ಚೀನಾ ಪರವಾಗಿ ಕ್ಸಿನ್ಜಿಯಾಂಗ್ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಅವರು ಭಾಗಿಯಾಗಿ ವಿಸ್ತೃತ ಚರ್ಚೆ ನಡೆಸಿದ್ದರು. ಕಳೆದ ವರ್ಷ ಮೇನಿಂದ ನಡೆಯುತ್ತಿರುವ ಘರ್ಷಣೆಯ ಭಾಗವಾಗಿ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಉಭಯ ಸೇನೆಗಳ 50 ಸಾವಿರ ಪಡೆಗಳು ನಿಯೋಜಿತರಾಗಿದ್ದಾರೆ. ಅದರೊಂದಿಗೆ ಟ್ಯಾಂಕರ್ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಕೂಡ ಗಡಿಯ ನೆಲೆಗಳಲ್ಲಿ ಸಂಗ್ರಹಿಸಲಾಗಿವೆ. ಈಗಾಗಲೇ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರು ಚೀನಾದಿಂದ ಗಡಿಯಲ್ಲಿ ಸೇನಾ ನೆಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಯ ಬಗ್ಗೆ ಎಚ್ಚರಿಸಿದ್ದಾರೆ. ಹಲವು ಕಟ್ಟಡಗಳನ್ನು ಚೀನಾ ಸೈನಿಕರು ನಿರ್ಮಿಸಿದ್ದು, ಪಡೆಗಳನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಅನಗತ್ಯವಾಗಿ ಬಿಕ್ಕಟ್ಟು ಮುಂದುವರಿಸಿ, ಸಮರದ ಛಾಯೆ ಆವರಿಸುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.













Click it and Unblock the Notifications