ಪದಗ್ರಹಣಕ್ಕೆ ಸೋನಿಯಾ, ರಾಹುಲ್ ಗಾಂಧಿಗೆ ಆಹ್ವಾನ ನೀಡಿದ ಎಚ್ಡಿಕೆ
ನವದೆಹಲಿ, ಮೇ 21: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿಯಾದರು.
ಉಭಯ ನಾಯಕರನ್ನು ಬುಧವಾರ ನಡೆಯಲಿರುವ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಔಪಚಾರಿಕವಾಗಿ ಆಹ್ವಾನಿಸಲು ಕುಮಾರಸ್ವಾಮಿ ದೆಹಲಿಗೆ ತೆರಳಿದ್ದರು. ನಾಯಕರನ್ನು ಭೇಟಿಯಾಗಿ ಕುಮಾರಸ್ವಾಮಿ ತಮ್ಮ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.
UPA Chairperson Smt. Sonia Gandhi and Congress President @RahulGandhi met with Karnataka CM-designate Shri @hd_kumaraswamy in New Delhi. pic.twitter.com/91kYi8w676
— Congress (@INCIndia) May 21, 2018
ಭೇಟಿ ವೇಳೆ ಕರ್ನಾಟಕ ರಾಜಕೀಯ ಬೆಳವಣಿಗೆ ಬಗ್ಗೆಯೂ ಮೂವರೂ ನಾಯಕರು ಚರ್ಚೆ ನಡೆಸಿದ್ದಾರೆ.
ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ
ಕಾಂಗ್ರೆಸ್ ನಾಯಕರಾದ "ಅಶೋಕ್ ಗೆಹ್ಲೋಟ್, ಕೆಸಿ ವೇಣುಗೋಪಾಲ್ ಮತ್ತು ನಾನು ಕರ್ನಾಟಕದ ಸದ್ಯದ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿಯವರಿಗೆ ಮಾಹಿತಿ ನೀಡಿದ್ದೇವೆ. ಎಚ್.ಡಿ. ಕುಮಾರಸ್ವಾಮಿಯವರು ರಾಹುಲ್ ಗಾಂಧಿಯವರನ್ನು ಭೇಟಿಯಾದಾಗ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಎಎನ್ಐಗೆ ಗುಲಾಬ್ ನಬಿ ಅಝಾದ್ ಮಾಹಿತಿ ನೀಡಿದ್ದರು.
ವಿಧಾನಸೌಧದ ಮುಂದೆ ಬುಧವಾರ ಕುಮಾರಸ್ವಾಮಿ ಪ್ರಮಾಣ ವಚನ
ಇದೀಗ ಕುಮಾರಸ್ವಾಮಿ ಮತ್ತು ರಾಹುಲ್ ಗಾಂಧಿ ಭೇಟಿಯಾಗಿದ್ದು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಭೇಟಿ ವೇಳೆ ಜೆಡಿಎಸ್ ನ ಡ್ಯಾನಿಷ್ ಅಲಿ ಮತ್ತು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು.
ಕೆಸಿ ವೇಣುಗೋಪಾಲ್ ಗೆ ಹೊಣೆಗಾರಿಕೆ
"ರಾಹುಲ್ ಗಾಂಧಿ ಮೈತ್ರಿಯ ಮಾದರಿಯನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ವಿಚಾರಗಳನ್ನು ಚರ್ಚೆ ನಡೆಸಿ ಅಂತಿಮಗೊಳಿಸಲು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ರಾಹುಲ್ ಗಾಂಧಿ ಜವಾಬ್ದಾರಿ ನೀಡಿದ್ದಾರೆ. ಅವರು ಮತ್ತು ಸ್ಥಳೀಯ ನಾಯಕರು ನಾಳೆ ಒಟ್ಟಿಗೆ ಕುಳಿತು ಎಲ್ಲವನ್ನೂ ಅಂತಿಮಗೊಳಿಸುತ್ತೇವೆ," ಎಂದು ಕುಮಾರಸ್ವಾಮಿ ಭೇಟಿ ನಂತರ ಮಾಹಿತಿ ನೀಡಿದರು.
"ಗಾಂಧಿ ಕುಟುಂಬದವರಿಗೆ ನಾನು ನನ್ನ ಗೌರವ ಮತ್ತು ವಂದನೆ ಸಲ್ಲಿಸಬೇಕಾಗಿತ್ತು. ಅದಕ್ಕಾಗಿ ನಾನು ಇಲ್ಲಿಗೆ ಬಂದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಅವರಲ್ಲಿ ನಾನು ಮನವಿ ಮಾಡಿಕೊಂಡೆ. ಇಬ್ಬರೂ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿರುವುದಾಗಿ ಭರವಸೆ ನೀಡಿದ್ದಾರೆ," ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.