ಗೋ ರಕ್ಷಕರಿಂದ ಹಿಂಸಾಚಾರ: ಮೌನ ಮುರಿದ ಮೋದಿ
ಗೋವುಗಳ ರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಸಲ್ಲದು ಎಂದ ಪ್ರಧಾನಿ ಮೋದಿ. ಗುಜರಾತ್ ನಲ್ಲಿರುವ ಸಬರ್ ಮತಿ ಆಶ್ರಮದಲ್ಲಿ ಈ ಹೇಳಿಕೆ ನೀಡಿದ ಪ್ರಧಾನಿ.
ಅಹ್ಮದಾಬಾದ್, ಜೂನ್ 29: ಗೋ ಸಂಕರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಅಲ್ಲಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಕೊಲೆ ಹಾಗೂ ಹಿಂಸಾಚಾರಗಳ ವಿರುದ್ಧ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಬಾಯ್ತೆರೆದಿದ್ದಾರೆ.
ಈ ಮೂಲಕ ಇಂಥ ಘಟನೆಗಳ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸುತ್ತಿದ್ದ ವಿರೋಧ ಪಕ್ಷಗಳಿಗೆ, ಬುದ್ಧಿಜೀವಿಗಳಿಗೆ ಈಗ ಮೋದಿ ಉತ್ತರ ಕೊಟ್ಟಿದ್ದಾರೆ.
ಗುಜರಾತ್ ನಲ್ಲಿರುವ ಗಾಂಧೀಜಿಯವರ ಸಬರ್ ಮತಿ ಆಶ್ರಮಕ್ಕೆ ಬುಧವಾರ ಭೇಟಿ ನೀಡಿದ ಮೋದಿ, ಗೋ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವ ಮನೋಭಾವವನ್ನು ತೀವ್ರವಾಗಿ ಖಂಡಿಸಿದರು.
ದೇಶವು ಅಹಿಂಸೆಯ ಮಾರ್ಗದಲ್ಲಿ ಮುನ್ನಡೆಯಬೇಕು. ಗೋ ರಕ್ಷಣೆಯ ವಿಚಾರದಲ್ಲಿ ಯಾರನ್ನಾದರೂ ಹಿಂಸಿಸುವುದು, ಅಪಮಾನಗೊಳಿಸುವುದು ಅಥವಾ ಅವರ ಮೇಲೆ ಹಲ್ಲೆ ನಡೆಸುವುದು ತಪ್ಪು. ಇಂಥ ಹಿಂಸಾತ್ಮಕ ಮಾರ್ಗಗಳು ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ದೇಶದ ಯಾವುದೇ ಪ್ರಜೆಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ. ಮಹಾತ್ಮಾ ಗಾಂಧಿಯಾಗಲೀ, ವಿನೋಬಾ ಬಾವೆಯಾಗಲೀ ಯಾರೂ ಗೋವುಗಳನ್ನು ರಕ್ಷಣೆ ಮಾಡಲು ಹಿಂಸಾಚಾರ ನಡೆಸಿ ಎಂದು ಕರೆ ಕೊಟ್ಟಿಲ್ಲ. ಹಾಗಾಗಿ, ಇಂಥ ದುರ್ಮಾರ್ಗದಲ್ಲಿ ನಡೆಯುವುದನ್ನು ನಾವು ಬಿಡಬೇಕು ಎಂದು ಅವರು ತಾಕೀತು ಮಾಡಿದರು.
ಇದೇ ವೇಳೆ ಸ್ವಚ್ಛತೆಯ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ''ಸ್ವಚ್ಛತೆ ಎಂಬುದು ನಮ್ಮ ಸ್ವಭಾವವಾಗಬೇಕು. ಅದೇ ಮಹಾತ್ಮ ಗಾಂಧಿಯವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ'' ಎಂದು ತಿಳಿಸಿದರು.