ಅಸಾರಾಮ್ ಬಾಪು ಪ್ರಕರಣದ ಪ್ರಮುಖ ಸಾಕ್ಷಿ ಹತ್ಯೆ
ಮುಜಾಫರ್ ನಗರ(ಉ.ಪ್ರ), ಜ.12: ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿ ಅವರ ವಿರುದ್ಧ ಸಾಕ್ಷಿ ಹೇಳಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸೂರತ್ ರೇಪ್ ಕೇಸಿಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ, ಒಂದು ಕಾಲದಲ್ಲಿ ಅಸಾರಾಮ್ ಬಾಪು ಆಪ್ತನಾಗಿದ್ದ ಅಖಿಲ್ ಗುಪ್ತಾ ಎಂಬಾತನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. [ಅಸಾರಮ್ ಬಾಪು 10 ವಿವಾದಗಳು]
35 ವರ್ಷ ವಯಸ್ಸಿನ ಅಖಿಲ್ ಗುಪ್ತಾ ಅವರು ಭಾನುವಾರ ಮಾರುಕಟ್ಟೆಯೊಂದರಿಂದ ಮನೆಗೆ ತೆರಳುವ ಹಾದಿಯಲ್ಲಿ ಈ ಬೈಕಿನಿಂದ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗಾಯಗೊಂಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಖಿಲ್ ರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಸೂರತ್ ಸೋದರಿಯರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಅಖಿಲ್ ಗುಪ್ತಾ ಅವರನ್ನು ಗುಜರಾತ್ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಅಸಾರಾಮ್ ಬಾಪು ಅವರ ಆಪ್ತ ಸಹಾಯಕ, ಅಡುಗೆಯವನಾಗಿ ಅಖಿಲ್ ಗುಪ್ತಾ ದುಡಿಯುತ್ತಿದ್ದರು.
ಅಪ್ರಾಪ್ತ ವಯಸ್ಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತು ಜೈಲು ಸೇರಿರುವ ಸ್ವಯಂಘೋಷಿತ ದೇವಮಾನ ಅಸಾರಾಮ್ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಬಾಪು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸುಪ್ರೀಂಕೋರ್ಟಿನಲ್ಲಿ ಜನವರಿ ಮೊದಲ ವಾರ ತಿರಸ್ಕೃತಗೊಂಡಿದೆ. [ಬಾಪು ಬನ್ ಗಯಾ ದೇವಮಾನವ]
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜೋಧಪುರದ ಕೋರ್ಟ್ ಅಸಾರಾಮ್ ಬಾಪು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ.
ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಕಾನೂನು ಬಾಹಿರ ಒಟ್ಟುಸೇರುವಿಕೆ, ಶಸ್ತ್ರಾಸ್ತ್ರ, ಮಾರಕ ಆಯುಧಗಳಿಂದ ಬೆದರಿಸಿರುವುದು ಎಂಬಿತ್ಯಾದಿ ಆರೋಪಗಳನ್ನು ಬಾಪೂ ಮೇಲೆ ಹೊರೆಸಲಾಗಿದೆ.












Click it and Unblock the Notifications