ಸುಸ್ಥಿರ ಅಭಿವೃದ್ಧಿ ಸೂಚ್ಯಂಕ; ಕೇರಳಕ್ಕೆ ನಂಬರ್ ಒನ್ ಸ್ಥಾನ
ನವದೆಹಲಿ, ಜೂನ್ 03: ಸುಸ್ಥಿರ ಅಭಿವೃದ್ಧಿ ಗುರಿಯ 2020-21ನೇ ಸಾಲಿನಲ್ಲಿ ಕೇರಳ ಅಗ್ರ ಸ್ಥಾನ ಪಡೆದುಕೊಂಡಿದೆ. ನೀತಿ ಆಯೋಗವು ಗುರುವಾರ ಸುಸ್ಥಿರ ಅಭಿವೃದ್ಧಿ ಗುರಿ ವರದಿ ಬಿಡುಗಡೆ ಮಾಡಿದ್ದು, ಕೇರಳ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ ಹಾಗೂ ಬಿಹಾರ ಅತಿ ಕಳಪೆ ಪ್ರದರ್ಶನ ನೀಡಿದೆ ಎಂದು ತಿಳಿಸಿದೆ.
ಭಾರತದ ಎಸ್ಜಿಡಿ ಸೂಚ್ಯಂಕದ ಮೂರನೇ ಆವೃತ್ತಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಗುರುವಾರ ಘೋಷಿಸಿದರು.
ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ದೇಶದಲ್ಲಿ 6ನೇ ಸ್ಥಾನಕ್ಕೆ ಜಿಗಿದ ಕರ್ನಾಟಕ
ಸಾಮಾಜಿಕ, ಆರ್ಥಿಕ, ಪರಿಸರ ವಿಷಯಗಳ ಮಾನದಂಡದಲ್ಲಿ ರಾಜ್ಯಗಳ ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರಿ ಮೌಲ್ಯಮಾಪನ ಮಾಡುತ್ತದೆ. ಈ ಮೌಲ್ಯಮಾಪನದಲ್ಲಿ ಕೇರಳ 75 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ.
ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು 74 ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನವನ್ನು ಹಂಚಿಕೊಂಡಿವೆ. ಈ ವರ್ಷದ ಎಸ್ಡಿಜಿ ಭಾರತ ಸೂಚ್ಯಂಕದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅತಿ ಕಳಪೆ ಸ್ಥಾನ ಪಡೆದ ರಾಜ್ಯಗಳಾಗಿರುವುದಾಗಿ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ 79 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ದೆಹಲಿ 68 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
2019ರಿಂದ ಸುಧಾರಣಾ ದೃಷ್ಟಿಯಲ್ಲಿ ಮಿಝೋರಾಂ, ಹರಿಯಾಣ, ಉತ್ತರಾಖಂಡ ಮುನ್ನಡೆ ಸಾಧಿಸಿದ್ದು, ಕ್ರಮವಾಗಿ 12,10 ಹಾಗೂ 8 ಅಂಕಗಳನ್ನು ಹೆಚ್ಚಿಸಿಕೊಂಡಿವೆ.
ಡಿಸೆಂಬರ್ 2018ರಲ್ಲಿ ಈ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಗುರಿಯನ್ನು ಆರಂಭಿಸಲಾಗಿದ್ದು, ದೇಶದಲ್ಲಿನ ಪ್ರಗತಿಯನ್ನು ಈ ಮೂಲಕ ಮೌಲ್ಯಮಾಪನ ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಗತಿಗೆ ಪ್ರೇರೇಪಿಸುವುದು ಇದರ ಉದ್ದೇಶ ಎಂದು ನೀತಿ ಆಯೋಗ ತಿಳಿಸಿದೆ.