ಶ್ರೀಕೃಷ್ಣನ ಮುಂದೆ ಚಿಕನ್ ಖಾದ್ಯ: ಪೋಸ್ಟರ್ ವಿವಾದದ ಬಳಿಕ ಕ್ಷಮೆಯಾಚಿಸಿದ ಕೇರಳದ ರೆಸ್ಟೋರೆಂಟ್
ಕೇರಳದ ರೆಸ್ಟೋರೆಂಟ್ವೊಂದು ವಿಷು ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ ಪೋಸ್ಟರ್ ವಿವಾದ ಸೃಷ್ಟಿಸಿದೆ. ಶ್ರೀಕೃಷ್ಣನ ಫೋಟೋವನ್ನು ಚಿಕನ್ ಖಾದ್ಯದೊಂದಿಗೆ ತೋರಿಸಿರುವ ಪೋಸ್ಟರ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ಕೇರಳದ ಚೆರ್ತಲಾದಲ್ಲಿ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾ ಟ್ರೆಂಡ್ಗಳು ಕೆಲವೊಮ್ಮೆ ಅಂದುಕೊಳ್ಳದ ರೀತಿಯಲ್ಲಿ ವಿವಾದಕ್ಕೆ ಸಿಲುಕುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಕೇರಳದ ಹೋಟೆಲ್ವೊಂದರ ಶುಭಾಶಯದ ಪೋಸ್ಟರ್ ಆನ್ಲೈನ್ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟರ್ನಲ್ಲಿ ಮಾಂಸಾಹಾರದ ಜೊತೆ ಶ್ರೀಕೃಷ್ಣನ ಫೋಟೋ ಕೂಡ ಹಾಕಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಚೆರ್ತಲಾದಲ್ಲಿರುವ 'ಮೆಹರ್ ಮಂದಿ ಅಂಡ್ ಗ್ರಿಲ್ಸ್' ಎಂಬ ರೆಸ್ಟೋರೆಂಟ್ ಹಂಚಿಕೊಂಡ ಪೋಸ್ಟರ್ ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಈ ರೆಸ್ಟೋರೆಂಟ್ ತನ್ನ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಪುಟಗಳಲ್ಲಿ ಹಂಚಿಕೊಂಡಿದ್ದ ವಿಷು ಹಬ್ಬದ ಶುಭಾಶಯದ ಪೋಸ್ಟರ್ ವಿವಾದಕ್ಕೆ ಗುರಿಯಾಗಿದೆ. ಆ ಚಿತ್ರದಲ್ಲಿ ಶ್ರೀಕೃಷ್ಣನ ಫೋಟೋದೊಂದಿಗೆ ಚಿಕನ್ ಮಂಡಿ ಎಂಬ ಮಾಂಸಾಹಾರದ ಖಾದ್ಯವನ್ನು ತೋರಿಸಲಾಗಿತ್ತು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀಕೃಷ್ಣನಿಗೆ ಸಾಮಾನ್ಯವಾಗಿ ಸಸ್ಯಾಹಾರಿ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ, ಅದರಲ್ಲೂ ಧಾರ್ಮಿಕ ಹಬ್ಬವಾದ ವಿಷುವಿನ ಸಂದರ್ಭದಲ್ಲಿ ಈ ರೀತಿ ಮಾಂಸಾಹಾರವನ್ನು ತೋರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಅನೇಕರು ಕಿಡಿಕಾರಿದ್ದಾರೆ.
ಈ ವಿವಾದಾತ್ಮಕ ಚಿತ್ರವು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ವಿವಿಧ ವೇದಿಕೆಗಳಲ್ಲಿ ಜನರು ಹೋಟೆಲ್ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಲು ಶುರುಮಾಡಿದ್ದಾರೆ. ಜನರ ಧಾರ್ಮಿಕ ಭಾವನೆಗಳನ್ನು ಪರಿಗಣಿಸದೆ ಇಂತಹ ಪೋಸ್ಟ್ ಮಾಡಲಾಗಿದೆ ಎಂಬುದು ಪ್ರಮುಖ ಆಕ್ಷೇಪವಾಗಿದೆ. ಸದ್ಯ ಈ ವಿಚಾರವು ಕೇವಲ ಆನ್ಲೈನ್ ಚರ್ಚೆಯಾಗಿ ಉಳಿಯದೆ, ಬ್ರ್ಯಾಂಡ್ನ ಇಮೇಜ್ ಮೇಲೂ ಪರಿಣಾಮ ಬೀರುವಂತೆ ಸದ್ದು ಮಾಡುತ್ತಿದೆ.
ರೆಸ್ಟೋರೆಂಟ್ ಮಾಲೀಕನ ಬಂಧನ
ವಿವಾದಾತ್ಮಕ ಪೋಸ್ಟರ್ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ಕೇರಳದ ಚೆರ್ತಲಾದಲ್ಲಿ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚೆರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ 'ಮೆಹರ್ ಮಂದಿ ಅಂಡ್ ಗ್ರಿಲ್ಸ್' ಎಂಬ ಹೋಟೆಲ್ನ ಮಾಲೀಕ ಅರ್ಶದ್ ಬಂಧಿತ ವ್ಯಕ್ತಿ. ತಣ್ಣೀರ್ಮುಕ್ಕಂ ಮೂಲದ ಎಂ.ವಿ. ಬಿಜು ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಿಷು ಹಬ್ಬದ ಶುಭಾಶಯ ಕೋರಲು ಬಳಸಲಾಗಿದ್ದ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ಚಿಕನ ಖಾದ್ಯವನ್ನು ತೋರಿಸಲಾಗಿತ್ತು. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯದ ಅಡಿಯಲ್ಲಿ 'ಭಾರತೀಯ ನ್ಯಾಯ ಸಂಹಿತೆ'ಯ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎನ್ನಲಾಗಿದೆ.
ಕ್ಷಮೆಯಾಚಿಸಿದ ರೆಸ್ಟೋರೆಂಟ್
ವಿವಾದ ತಾರಕಕ್ಕೇರುತ್ತಿದ್ದಂತೆ ಹೋಟೆಲ್ನ ಪಾಲುದಾರರಲ್ಲಿ ಒಬ್ಬರಾದ ಶಮೀರ್ ಅವರು ಇನ್ಸ್ಟಾಗ್ರಾಮ್ ಮೂಲಕ ಕ್ಷಮೆಯಾಚಿಸಿದ್ದಾರೆ. "ಈ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ. ಖಾಸಗಿ ಗ್ರೂಪ್ವೊಂದರಲ್ಲಿ ಇದು ಹರಿದಾಡಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ರೆಸ್ಟೋರೆಂಟ್ ಮುಂಭಾಗ ಪ್ರತಿಭಟನೆಗೆ ಕರೆ ನೀಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು












Click it and Unblock the Notifications